ನೂತನ ಸಚಿವರಾದ ನಂತರ ಮೊದಲ ಬಾರಿಗೆ ಆಗಮಿಸುವ ಸಚಿವರಿಗೆ ಅರ್ಥಪೂರ್ಣವಾಗಿ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮದ್ದೂರು ಮಾರ್ಗವಾಗಿ ಕ್ಷೇತ್ರಕ್ಕೆ ಆಗಮಿಸುವ ನೂತನ ಸಚಿವರಿಗೆ ತಾಲೂಕಿನ ಗಡಿ ಭಾಗದಿಂದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ ಜಾಥಾದ ಮೂಲಕ ಪಟ್ಟಣಕ್ಕೆ ಕರೆ ತರಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಚಿವರಾಗಿ ಪ್ರಮಾಣ ಸ್ವೀಕರಿಸಿದ ನಂತರ ಆ.೮ ರಂದು ಕ್ಷೇತ್ರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರನ್ನು ಅಭಿನಂದಿಸುವ ಸಂಬಂಧ ಕಾಂಗ್ರೆಸ್ ಮುಖಂಡರು ಪಟ್ಟಣದ ರೈತ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪು-ರೇಷೆಗಳ ಬಗ್ಗೆ ಚರ್ಚೆ ನಡೆಸಿದರು.ತಾಲೂಕಿನ ಗಡಿಭಾಗ ಕಾಳಕೆಂಪನದೊಡ್ಡಿ ಗೇಟ್ನಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಸಾಂಕೇತಿಕವಾಗಿ ಸ್ವಾಗತಿಸಿದ ನಂತರ ಸಾವಿರಾರು ಬೈಕ್ ಜಾಥಾದ ಮೂಲಕ ಪಟ್ಟಣಕ್ಕೆ ಕರೆತರುವ ಬಗ್ಗೆ ಒಕ್ಕೊರಲಿನ ತೀರ್ಮಾನ ಕೈಗೊಂಡರು.
ಶಕ್ತಿ ದೇವತೆ ಶ್ರೀದಂಡಿನ ಮಾರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಅನಂತ್ ರಾಂ ವೃತ್ತಕ್ಕೆ ಶನಿವಾರ ೩ ಗಂಟೆಗೆ ಆಗಮಿಸುವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಕ್ರೇನ್ಗಳ ಮೂಲಕ ಬೃಹತ್ ಗಾತ್ರದ ವಿವಿಧ ರೀತಿಯ ಹೂವಿನ ಹಾರಗಳನ್ನು ಹಾಕಿ ಅದ್ಧೂರಿಯಾಗಿ ಸ್ವಾಗತಿಸುವ ಬಗ್ಗೆ ನಿರ್ಧರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ನೂತನ ಸಚಿವರಾದ ನಂತರ ಮೊದಲ ಬಾರಿಗೆ ಆಗಮಿಸುವ ಸಚಿವರಿಗೆ ಅರ್ಥಪೂರ್ಣವಾಗಿ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮದ್ದೂರು ಮಾರ್ಗವಾಗಿ ಕ್ಷೇತ್ರಕ್ಕೆ ಆಗಮಿಸುವ ನೂತನ ಸಚಿವರಿಗೆ ತಾಲೂಕಿನ ಗಡಿ ಭಾಗದಿಂದ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ ಜಾಥಾದ ಮೂಲಕ ಪಟ್ಟಣಕ್ಕೆ ಕರೆ ತರಲಿದ್ದಾರೆ. ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪೂಜೆ, ಅನಂತ್ರಾಂ ವೃತ್ತದಲ್ಲಿ ಅಭಿನಂದನೆ ಹಾಗೂ ಪ್ರವಾಸಿ ಮಂದಿರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೈಸೂರು ರಸ್ತೆ ಮಾರ್ಗವಾಗಿ ಮೆರವಣಿಗೆ ಮೂಲಕ ತಾಲೂಕು ಪಂಚಾಯ್ತಿವರೆಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಿ.ಎಂ.ನರೇಂದ್ರಸ್ವಾಮಿ ಅವರು ಸಚಿವರಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಅಭಿವೃದ್ಧಿಯ ಹರಿಕಾರ ಎಂಬ ಮಾತಿನಂತೆ ಈಗಾಗಲೇ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ದೂರದೃಷ್ಟಿಯ ಯೋಜನೆ ಮೂಲಕ ಕ್ಷೇತ್ರದ ಜನರ ಹಿತ ಕಾಯಲು ನೂತನ ಸಚಿವರು ಶ್ರಮಿಸಲಿದ್ದಾರೆಂದರು.ನೂತನ ಸಚಿವರಿಗೆ ಅಭಿನಂದಿಸುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಕೋರಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಮನ್ ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಮುಖಂಡರಾದ ಕೆ.ಎಸ್.ಪ್ರಕಾಶ್, ಪಿ.ಮಾದೇಶ, ಪ್ರಭುಲಿಂಗು, ಕುಳ್ಳಚೆನ್ನಂಕಯ್ಯ ಮಹದೇವ ಸೇರಿದಂತೆ ಇತರರಿದ್ದರು.