ಬೇಲೂರು: ಪತ್ರಕರ್ತರು ಸುದ್ದಿಗಳ ಸಂಗ್ರಹದ ಜೊತೆಗೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪತ್ರಕರ್ತರು ಎಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಲೇ ಸುದ್ದಿಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಕೊಡಿಸುತ್ತಾರೆ. ಆದರೆ ಸುದ್ದಿ ಸಂಗ್ರಹಿಸುವ ಭರಾಟೆಯಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆದಷ್ಟು ತಮ್ಮ ಆರೋಗ್ಯ ಜೊತೆಗೆ ಕುಟುಂಬದ ಕಾಳಜಿಯತ್ತ ಹೆಚ್ಚಿನ ನಿಗ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕ್ರೀಡೆಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಪತ್ರಕರ್ತರು ಕುಟುಂಬ ಸಮೇತರಾಗಿ ಆಗಮಿಸಿ ಪತ್ರಿಕಾ ಕುಟುಂಬ ಸದಸ್ಯರೊಂದಿಗೆ ಬೆರೆಯಬೇಕು. ಮತ್ತು ಇದೇ ಸಂದರ್ಭ ಭಾಗವಹಿಸುವ ಕುಟುಂಬದವರಿಗೆ ಲಕ್ಕಿ ಡಿಪ್ ಮೂಲಕ ಉತ್ತಮ ಬಹುಮಾನ ಕೊಡಲಾಗುವುದು ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಬಿ. ಶಿವರಾಜ್ ಮಾತನಾಡಿ, ಸಂಘದ ಎಲ್ಲ ಸರ್ವ ಸದಸ್ಯರ ಸಹಕಾರದಿಂದ ಸಂಘವು ಉತ್ತಮವಾಗಿ ನಡೆಯುತ್ತಿದೆ. ಪತ್ರಕರ್ತರಾದವರಿಗೆ ಅವರದ್ದೇ ಆದ ನಿಯಮಗಳಿವೆ. ಅವುಗಳನ್ನು ಎಲ್ಲರೂ ಪಾಲಿಸಬೇಕು. ಮತ್ತು ಯಾರೂ ನಮ್ಮ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ನಡೆದುಕೊಳ್ಳಬೇಕು ಆ. 8ರಂದು ನಿಗದಿಯಾಗಿರುವ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಜತೆಗೆ ನಮ್ಮ ಸಂಘದ ನಿರ್ದೇಶಕ ಎ. ರವಿ ಹೊಳ್ಳರವರ ಚಿಕಿತ್ಸೆಗಾಗಿ ನಮ್ಮ ರಾಜ್ಯ ಸಮಿತಿ ಸದಸ್ಯರಾದ ಕೆಪಿಎಸ್ ಪ್ರಮೋದ್‌ಅವರು ೧೦ ಸಾವಿರ ರು. ಗಳ ಸಹಕಾರ ನೀಡಿರುವುದು ಶ್ಲಾಘನೀಯವಾಗಿದೆ. ನಮ್ಮ ಸದಸ್ಯರು ಸಹ ಎಲ್ಲರೂ ಸಹಕಾರ ನೀಡಬೇಕು ಎಂದರು.

ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಮಲ್ಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್, ಉಪಾಧ್ಯಕ್ಷ ವೆಂಕಟೇಶ್, ಖಜಾಂಚಿ ಲೋಹಿತ್, ಕಾರ್ಯದರ್ಶಿ ಗಣೇಶ್, ಸೇರಿದಂತೆ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿದ್ದರು.