ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನಲ್ಲಿ ವಿಬಿಜಿ -ರಾಮ್ ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ,ರೈತರಿಗೆ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವಂತೆ ಶಾಸಕ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿಹೊಂಡ, ಬದು,ಶಾಲೆ, ಅಂಗನವಾಡಿ ಹಾಗೂ ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ವೇಗೆ ಹೆಚ್ಚಿಸಿ ಗುಣ ಮಟ್ಟದ ಕುರಿತು ಸಮಗ್ರ ಮಾಹಿತಿ ಪಡೆದರು.
ಕೃಷಿ ಹೊಂಡಗಳು ,ಮೀನು ಸಾಕಾಣಿಕೆ ಬಳಸಿಕೊಂಡು ಮೇಲ್ಬಾಗದಲ್ಲಿ ಶೆಡ್ ನಿರ್ಮಿಸಿ, ಕೋಳಿ ಸಾಕಾಣಿಕೆ ಉಪ ಕಸುಬುಗಳನ್ನು ಮಾಡುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಸಮಗ್ರ ಕೃಷಿ ಮಾದರಿಗಳನ್ನು ಜಾರಿಗೊಳಿಸಲು ಕೃಷಿ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು. ಅಂಗನವಾಡಿಗಳು, ಆಟದ ಮೈದಾನ, ಶಾಲಾ ಕಾಂಪೌಂಡ್ , ಕೊಠಡಿಗಳ ದುರಸ್ತಿ ,ಶೌಚಗೃಹ ನಿರ್ಮಾಣ ಇತರೆ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಪಿಡಿಒಗಳು ಮತ್ತು ಬಿಇಒ ಹನುಮಂತರಾಯಪ್ಪಗೆ ಸೂಚಿಸಿದರು.ತಾಲೂಕಿನಲ್ಲಿ ಒಟ್ಟು 3,856 ಕಾಮಗಾರಿಗಳನ್ನು ಆಯ್ಕೆ ಮಾಡಿದ್ದು, ಕೃಷಿ ಇಲಾಖೆಯಿಂದ 20 ರೈತರನ್ನು ಕೋಳಿ ಸಾಕಾಣಿಕೆಗೆ ಆಯ್ಕೆ ಮಾಡಲಾಗಿದೆ ಎಂದು ತಾಪಂ ಇಒ ಉತ್ತಮ್ ಸಭೆಗೆ ತಿಳಿಸಿದರು. ಬಡವನಹಳ್ಳಿ ಗ್ರಾಪಂನಲ್ಲಿ 50 ,ದೊಡ್ಡಮಾಲಲೂರು ಗ್ರಾಪಂನಲ್ಲಿ 44 ಕಾಮಗಾರಿಗಳನ್ನು ಮಾತ್ರ ಆಯ್ಕೆ ಮಾಡಿರುವುದಕ್ಕೆಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಹೆಚ್ಚು ಕಾಮಗಾರಿ ಮಾಡಿ, ಸೋಮವಾರದೊಳಗೆ ಎಲ್ಲ ಗ್ರಾಪಂಗಳು ಕ್ರಿಯಾ ಯೋಜನೆ ತಯಾರಿಸಬೇಕು. ಇಲ್ಲವಾದರೆ ಮತ್ತೆ ಸಭೆ ನಡೆಸುವುದಾಗಿ ಶಾಸಕರು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಜೆಜೆಎಂ ಕಾಮಗಾರಿಗಳು ಸಂಪೂರ್ಣ ಮುಗಿದ ಬಳಿಕವೇ ಹ್ಯಾಂಡ್ ಓವರ್ ಸ್ವೀಕರಿಸಬೇಕು. ಅಪೂರ್ಣ ಕಾಮಗಾರಿ ಸ್ವೀಕರಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಮಾನತಿಗೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು. ಚೆಕ್ ಡ್ಯಾಂಗಳು ನಿರ್ಮಿಸುವಲ್ಲಿ ಬೋರ್ ವೆಲ್ಗಳು ಹೆಚ್ಚಿರುವ ಪ್ರದೇಶಗಳಿಗೆ ಆದ್ಯತೆ ನೀಡಿದರೆ ಅಂತರ್ಜಲ ಮರುಪೂರ್ಣ ಬಳಕೆಗೆ ನೆರವಾಗಲಿದೆ. ಗ್ರಾಮಗಳ ಸಮೀಪದ ಕೆರೆಗಳಿಗೆ ವಾಕಿಂಗ್ ಪಾಥ್ ನಿರ್ಮಾಣನ್ನು ಕ್ರಿಯಾಜನೆಯಲ್ಲಿ ಸೇರಿಸಬೇಕು ಎಂದು ಎಂಐ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಿಡಿಒಗಳು ಸಾಮಗ್ರಿಗಳ ಬಿಲ್ಗಳನ್ನು ಎರಡು ಬಾರಿ ಆಪ್ ಲೋಡ್ ಮಾಡುವ ಬಗ್ಗೆ ದೂರುಗಳು ಬಂದಿದ್ದು ,ಡೇಟಾ ಎಂಟ್ರಿ ಆಪರೇಟರ್ ಗಳ ಮೇಲೂ ನಿಗಾ ವಹಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ತೋರುವ ಸಿಬ್ಬಂದಿ ಬದಲಾಯಿಸಲು ಹಿಂಜರಿಯಬೇಡಿ ಎಂದು ಸೂಚಿಸಿ, ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳು ಗ್ರಾಪಂಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನ ಪವಾಗಿ ಕೆಲಸ ಮಾಡಬೇಕು. ಯಾವುದೇ ಕುಂಟು ನೆಪ ಹೇಳದೆ ಕ್ರಿಯಾ ಯೋಜನೆ ಪೂರ್ಣಗೊಳಿಸುವ ಜೊತಗೆ ಬಾಕಿ ಉಳಿದಿರುವ ಕೋಟ್ಯಂತರ ರುಪಾಯಿ ಕಂದಾಯ ವಸೂಲಿ ಮಾಡಬೇಕು ಎಂದರು.
ಸಭೆಯಲ್ಲಿ ಎಸಿ ಗೋಟೂರು ಶಿವ್ಪಪ್ಪ , ತಾಪಂ ಇಒ ಉತ್ತಮ್, ಎಡಿ ಧನಂಜಯ್, ಡಿವೈಎಸ್ಪಿ ಮಂಜುನಾಥ್ ಜಿಜೆ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದರು.