ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಬೆಳೆಸಿ

| Published : Jun 06 2025, 01:32 AM IST

ಸಾರಾಂಶ

ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಹೀಗಾಗಿ ಪರಿಸರವನ್ನು ರಕ್ಷಣೆ ಮಾಡಬೇಕು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು, ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಮೃದ್ಧವಾಗಿ ಮರಗಿಡಗಳನ್ನು ಬೆಳೆಸಿದಾಗ ಸಮೃದ್ಧವಾಗಿ ಮಳೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಚ್ಚಿಗೆ ಮರಗಿಡಗಳನ್ನು ಬೆಳೆಸಿ ಅರಣ್ಯ ಸಂಪತ್ತು ಹೆಚ್ಚಾಗುವಂತೆ ಮಾಡಬೇಕೆಂದು ನ್ಯಾಯಾಧೀಶೆ ಜಯಲಕ್ಷ್ಮಿ.ಎನ್‌.ಬಿ ಹೇಳಿದರು.

ತಾಲೂಕಿನ ಭುವನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ರವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾರ್ಥಕ್ಕಾಗಿ ಪ್ರಕೃತಿ ನಾಶ

ಹಸಿರೇ ಉಸಿರು ಅಂತ ಹೇಳಬಹುದು. ಆದರೆ ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ಹೀಗಾಗಿ ಪರಿಸರವನ್ನು ರಕ್ಷಣೆ ಮಾಡಬೇಕು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಬೇಕು, ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಉತ್ತಮ ಪರಿಸರದಿಂದ ಮಾತ್ರ ಜೀವ ಸಂಕುಲ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಾಕೃತಿಕ ಸಂಪತ್ತು ನಮಗಾಗಿ ಇರುವುದು. ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಹಾಗೆಯೇ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವು ಪ್ರಮುಖವಾಗಿ ಆಗಬೇಕು. ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆಯನ್ನು ಬೆಳೆಸಿ, ಹಸಿರು ಸಂಪತ್ತನ್ನು ಉಳಿಸಲು ಮುಂದಾಗುವಂತೆ ಮಾಡಬೇಕೆಂದು ತಿಳಿಸಿದರು.

ದಿನದ ಕಾರ್ಯಕ್ರಮವಾಗದಿರಲಿನ್ಯಾಯಾಧೀಶ ಚಂದ್ರಶೇಖರ್ ಅಲಬೂರ್ ಮಾತನಾಡಿ, ಪರಿಸರ ದಿನಾಚರಣೆ ಕಾರ್ಯಕ್ರಮಗಳು ಕೇವಲ ಒಂದು ದಿನದ ಕಾರ್ಯಕ್ರಮಗಳಾಗಬಾರದು. ಹಾಗೆಯೇ ಮನಸೋ ಇಚ್ಚೆ ಮರಗಿಡಗಳನ್ನು ಕಡಿದು ಹಾಕಿ, ಕೇವಲ ಕಾರ್ಯಕ್ರಮಗಳಲ್ಲಿ ಗಿಡಗಳನ್ನು ನೆಟ್ಟು ನಂತರ ಮರೆತು ಹೋಗುವಂತಹುದು ಸಹ ಸರಿಯಲ್ಲ. ಮನುಷ್ಯ ಒಳ್ಳೆಯ ಪರಿಸರವನ್ನು ಹಾಳು ಮಾಡಿದರೆ ದುಷ್ಪರಿಣಾಮವನ್ನು ಇಡೀ ಜೀವಸಂಕುಲ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜಾಗತಿಕ ತಾಪಮಾನ ಏರಿಕೆ

ಈಗಾಗಲೇ ಎಲ್ಲೆಡೆ ವ್ಯಾಪಕವಾಗಿ ಆಗುತ್ತಿರುವ ಪರಿಸರದ ನಾಶದಿಂದ ಜೀವಿಗಳು ತೊಂದರೆಗೆ ಸಿಲುಕಿಕೊಳ್ಳುತ್ತಿವೆ. ಅಸಮರ್ಪಕ ಮಳೆ, ಜಾಗತಿಕ ತಾಪಮಾನ ಏರಿಕೆ, ಆರೋಗ್ಯದಲ್ಲಿ ಏರುಪೇರು ಮುಂತಾದ ಸಮಸ್ಯೆಗಳು ಬಾಧಿಸುತ್ತಿವೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಪರಿಸರವನ್ನು ನಾವು ಕಾಪಾಡಿದರೆ ಪರಿಸರವು ನಮ್ಮನ್ನು ಕಾಪಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸುಕೀತಾ ಎಸ್. ಹದ್ದಿ,ವಕೀಲರ ಸಂಘ ಅಧ್ಯಕ್ಷ ಎಸ್. ನಾರಾಯಣಪ್ಪ,ಉಪವಲಯ ಅರಣ್ಯಾಧಿಕಾರಿ ನಾಗೇಶ್ , ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಜಯಣ್ಣ, ವಕೀಲರಾದ ಅಮರೇಶ್, ಅರಣ್ಯ ಸಿಬ್ಬಂದಿ ಹಾಜರಿದ್ದರು.