ಕನ್ನಡಪ್ರಭವಾರ್ತೆ ಕುಶಾಲನಗರ
ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ನದಿಯ ಐತಿಹಾಸಿಕ ಸೇತುವೆಗೆ ಕುಶಾಲನಗರ ರೋಟರಿ ಮೂಲಕ ಕಾಯಕಲ್ಪ ಕಲ್ಪಿಸುವ ಯೋಜನೆಗೆ ಮಂಗಳವಾರ ಚಾಲನೆ ದೊರೆಯಿತು. ಸುಮಾರು 178 ವರ್ಷಗಳ ಇತಿಹಾಸ ಹೊಂದಿರುವ ಪ್ರೆಶರ್ ಪೇಟೆ ಸೇತುವೆಯನ್ನು ಅಂದಾಜು 25 ಲಕ್ಷ ರು. ವೆಚ್ಚದಲ್ಲಿ ಕಾಯಕಲ್ಪ ಕಲ್ಪಿಸುವ ಜೊತೆಗೆ ಆಕರ್ಷಕ ಉದ್ಯಾನವನ ನಿರ್ಮಿಸುವ ನಿಟ್ಟಿನಲ್ಲಿ ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಅವರು ಕ್ರಿಯಾಯೋಜನೆ ರೂಪಿಸಿದ್ದಾರೆ.ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಕಳೆದ ಹಲವು ವರ್ಷಗಳಿಂದ ಹಳೆಯ ಸೇತುವೆಯ ಪುನಶ್ಚೇತನಕ್ಕೆ ಮನವಿ ಸಲ್ಲಿಸುತ್ತಿದ್ದು ಈ ಹಿನ್ನಲೆಯಲ್ಲಿ ರೋಟರಿ ಸಂಸ್ಥೆ ಮೂಲಕ ಸೇತುವೆಯ ಮೇಲೆ ಉದ್ಯಾನವನ ಕಾಮಗಾರಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಶಾಸಕ ಡಾ ಮಂತರ್ ಗೌಡ ಅವರ ಮುಖಾಂತರ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಅನುದಾನ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ರೋಟರಿ ಮೂಲಕ ಉತ್ತಮ ಯೋಜನೆ ನಡೆಯಲಿದೆ ಎಂದರು.
ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಅತ್ಯುತ್ತಮವಾದ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಈ ಮೂಲಕ ಕುಶಾಲನಗರದ ಹೆಬ್ಬಾಗಿಲನ್ನು ಸ್ವಚ್ಛತೆಯೊಂದಿಗೆ ಉತ್ತಮವಾದ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಚಿಂತನೆ ಹರಿಸಲಾಗಿದೆ ಎಂದರು.ಕಾಮಗಾರಿ ಆರಂಭಕ್ಕೂ ಮುನ್ನ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಪುರಸಭೆ ಮುಖ್ಯ ಅಧಿಕಾರಿ ಗಿರೀಶ್, ಆರೋಗ್ಯ ಅಧಿಕಾರಿ ಉದಯಕುಮಾರ್, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಎಂ ಎನ್ ಚಂದ್ರಮೋಹನ್, ರೋಟರಿ ಕಾರ್ಯದರ್ಶಿ ಎಚ್ ಪಿ ಮಂಜುನಾಥ್, ರೋಟರಿ ಪ್ರಮುಖರಾದ ಎಸ್ ಕೆ ಸತೀಶ್, ಡಾ ಹರಿ ಎ ಶೆಟ್ಟಿ ಮಹೇಶ್ ನಾಲ್ವಡೆ, ಡಿ ಡಿ ಕಿರಣ್, ಶಿಬು ತಾಮಸ್ ಶೋಭಾ ಸತೀಶ್ ಮತ್ತು ಇತರರು ಇದ್ದರು.