ಮಾರುಕಟ್ಟೆಯಲ್ಲಿ ಟೋಮೆಟೋ ಹಣ್ಣಿನ ಬೆಲೆ ತೀರಾ ಕುಸಿದಿದ್ದು, ತೀವ್ರ ಬರ ಎದುರಿಸುತ್ತಿರುವ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಕನಕಗಿರಿ: ಮಾರುಕಟ್ಟೆಯಲ್ಲಿ ಟೋಮೆಟೋ ಹಣ್ಣಿನ ಬೆಲೆ ತೀರಾ ಕುಸಿದಿದ್ದು, ತೀವ್ರ ಬರ ಎದುರಿಸುತ್ತಿರುವ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಕನಕಗಿರಿ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆ ವಾರದ ಪೈಕಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮೂರು ದಿನಗಳ ಕಾಲ ನಡೆಯುತ್ತಿದ್ದು, ಕಳೆದ ತಿಂಗಳಿಂದಲೂ ಟೋಮೆಟೋ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ತಾಲೂಕು ವ್ಯಾಪ್ತಿಯ ಕನಕಗಿರಿ, ಸೋಮಸಾಗರ, ಕನ್ನೇರಮಡು, ಬಸರಿಹಾಳ, ಹಿರೇಖೇಡ, ಸಿರಿವಾರ, ಮುಸಲಾಪೂರ, ನಾಗಲಾಪೂರ, ಚಿಕ್ಕಮಾದಿನಾಳ, ರಾಮದುರ್ಗಾ, ಹುಡೇಜಾಲಿ, ಓಬಳಬಂಡಿ, ಅಡವಿಬಾವಿ ಸೇರಿ ನಾನಾ ಗ್ರಾಮಗಳಲ್ಲಿ ಯಥೇಚ್ಛವಾಗಿ ಟೋಮೆಟೋ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ ₹5 ಅಥವಾ ₹4 ಇದೆ.ಪ್ರತಿ ಬಾಕ್ಸ್ನಲ್ಲಿ ೨೦ರಿಂದ ೨೨ ಕೆಜೆ ಇರುವ ಟೋಮೆಟೋಗೆ ಕನಿಷ್ಠ ನೂರು ರೂಪಾಯಿಯೂ ಸಿಗುತ್ತಿಲ್ಲ. ಹೊಲದಿಂದ ಮಾರುಕಟ್ಟೆಗೆ ತಂದಿದ್ದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರಿಂದ ರೈತರು ರೊಚ್ಚಿಗೆದ್ದು, ರಸ್ತೆ ಬದಿಯಲ್ಲಿ ಬಿಸಾಡುತ್ತಿರುವುದನ್ನು ಜನರು ನೋಡಿ ಮರುಗುತ್ತಿದ್ದಾರೆ. ರೈತರ ಕಣ್ಣೋರೆಸಿ, ಪರಿಹಾರ ನೀಡಿ
ಎಕರೆಗೆ ₹30 ರಿಂದ ₹40 ಸಾವಿರ ವೆಚ್ಚ ಮಾಡಿ ಬೆಳೆದ ಟೋಮೆಟೋ ಹಣ್ಣಿಗೆ ಬೆಲೆ ಇಲ್ಲವಾಗಿದ್ದರಿಂದ ರೈತರು ಮಾರುಕಟ್ಟೆಯಲ್ಲಿ ತಲೆ ಮೇಲೆ ಕೈ ಹೊತ್ತು ಕಣ್ಣೀರು ಸುರಿಸುತ್ತಿದ್ದಾರೆ. ಸರ್ಕಾರ ರೈತನ ಕಣ್ಣೋರೆಸುವ ಕೆಲಸ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ರೈತರ ವಿಚಾರದಲ್ಲಿ ನಾಟಕ ಮಾಡುವುದನ್ನು ಬಿಟ್ಟು, ಒಳಿತು ಮಾಡಬೇಕು. ನಷ್ಟ ಅನುಭವಿಸಿದ ಟೋಮೆಟೋ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.