ಮುನವಳ್ಳಿ ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ, ಒಳಚರಂಡಿ, ಸಿಸಿ ರಸ್ತೆ, ಫೇವರ್ಸ್‌ ಅಳವಡಿಕೆ ಕಾಮಗಾರಿ ಒಂದನೆ ಹಂತದಲ್ಲಿ ಮುಗಿದಿವೆ. ಇನ್ನುಳಿದ ಕಾಮಗಾರಿಗಳನ್ನು ಮುಂದಿನ ದಿನಮಾನಗಳಲ್ಲಿ ಕೈಗೊಳ್ಳಲಾಗುವುದು. ಪಟ್ಟಣದ ಪ್ರಾಥಮಿಕ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮುನವಳ್ಳಿ

ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ, ಒಳಚರಂಡಿ, ಸಿಸಿ ರಸ್ತೆ, ಫೇವರ್ಸ್‌ ಅಳವಡಿಕೆ ಕಾಮಗಾರಿ ಒಂದನೆ ಹಂತದಲ್ಲಿ ಮುಗಿದಿವೆ. ಇನ್ನುಳಿದ ಕಾಮಗಾರಿಗಳನ್ನು ಮುಂದಿನ ದಿನಮಾನಗಳಲ್ಲಿ ಕೈಗೊಳ್ಳಲಾಗುವುದು. ಪಟ್ಟಣದ ಪ್ರಾಥಮಿಕ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಗರೋತ್ಥಾನ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ವಿತರಣೆ ಕಾರ್ಯಕ್ರಮ ಬುಧವಾರ ಜರುಗಿತು. ತ್ರಿಚಕ್ರ ವಾಹನ, ಹೊಲಿಗೆ ಯಂತ್ರ, ಲ್ಯಾಪ್‌ಟಾಪ್, ಸೋಲಾರ್‌ ಲೈಟ್‌, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೀಗೆ ಒಟ್ಟು 221 ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಮಾತನಾಡಿ, ಫಲಾನುಭವಿಗಳಿಗೆ ಕೊಡಮಾಡಿದ ಸಲಕರಣೆಗಳನ್ನು ಅವರೇ ಉಪಯೋಗಿಸಬೇಕು. ಬೇರೆಯವರಿಗೆ ಕೊಡುವಂತಿಲ್ಲ ಎಂದು ಸರ್ಕಾರ ಹೇಳಿದೆ. ಮುಂದಿನ ವರ್ಷದಲ್ಲಿ ಮತ್ತೆ ಫಲಾನುಬವಿಗಳಿಗೆ ಹೆಚ್ಚಿನ ಸಾಮಗ್ರಿಗಳನ್ನು ಹಂಚಲಾಗುವುದು ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಮಾತನಾಡಿದರು. ಟಿಎಪಿಎಂಸಿ ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಸದಸ್ಯರಾದ ಶ್ರೀಶೈಲ ನೇಗಿನಾಳ, ಮೀರಾಸಾಬ ವಟ್ನಾಳ, ಸಮಿರುಲ್ಲಾ ಚೂರಿಖಾನ, ವಿನಾಯಕ ಕಟ್ಟೆಕಾರ, ಪಂಚುಬಾರಕೇರ, ಹನಮಂತ ಹಿರೇಮತ್ರಿ, ಪುರಸಭೆ ಸಿಬ್ಬಂದಿ ವರ್ಗ ಇತರರು ಉಪಸ್ಥಿತರಿದ್ದರು.