ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.

ಶಾಸಕರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯರು ವಾದ್ಯಮೇಳದೊಂದಿಗೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.

ನೂತನ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ವಿಚಾರಣೆ ಮತ್ತು ಕಚೇರಿ, ಸಭಾಂಗಣ, ವೈದ್ಯರ ಕೊಠಡಿ, ಹೊರರೋಗಿ ವಿಭಾಗ, ಚುಚ್ಚುಮದ್ದು ಕೊಠಡಿ, ಪ್ರಯೋಗಾಲಯ, ಔಷಧಾಲಯ, ಉಗ್ರಾಣ, ಮಹಿಳಾ ಮತ್ತು ಪುರುಷರ ವಾರ್ಡ್, ಪ್ರಿಪರೇಷನ್ ಕೊಠಡಿ, ಮೈನರ್ ಓಟಿ, ಹೆರಿಗೆ ಕೊಠಡಿ ಸೇರಿದಂತೆ ಒಟ್ಟು 21ಕ್ಕೂ ಹೆಚ್ಚು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ ಬೋರ್‌ವೆಲ್, 5 ಕೆವಿಎ ಜನರೇಟರ್, ಯುಪಿಎಸ್, ಸೋಲಾರ್ ವ್ಯವಸ್ಥೆ, ಸಂಪ್, ಸೆಪ್ಟಿಕ್ ಟ್ಯಾಂಕ್ ಹಾಗೂ ಮೇಲ್ಛಾವಣಿಯಲ್ಲಿ ಓವರ್‌ಹೆಡ್ ಟ್ಯಾಂಕ್ ವ್ಯವಸ್ಥೆಯೂ ಇರಲಿದೆ ಎಂದರು.

ಈ ಆರೋಗ್ಯ ಕೇಂದ್ರದಿಂದ ಗೋಪಿನಾಥಂ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ. ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಹಾಗೂ ತುರ್ತು ಆರೋಗ್ಯ ಸೇವೆ ಅಗತ್ಯವಿರುವವರು ಹನೂರು ಮತ್ತು ಕೊಳ್ಳೇಗಾಲಕ್ಕೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ಹೇಳಿದರು.

ಸ್ಥಳೀಯರು, ಸರ್ಕಾರದ ಅನುದಾನ ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗದೆ, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ನಿರಂತರವಾಗಿ ಸೇವೆ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಎಂ.ಆರ್.ಮಂಜುನಾಥ್ ಅವರು, ಗೋಪಿನಾಥಂ ಕಾಡಂಚಿನ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಆ ಬೇಡಿಕೆ ಈಡೇರಿದೆ. ನಿಮ್ಮ ಗ್ರಾಮದಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ವೈದ್ಯರು ಇದ್ದರೆ ಅವರ ಬಗ್ಗೆ ಮಾಹಿತಿ ನೀಡಿ. ಅಂತಹ ವೈದ್ಯರನ್ನು ಇಲ್ಲಿಗೆ ನೇಮಕ ಮಾಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಮಹೇಂದ್ರ, ಗೋಪಿನಾಥಂ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಗುರುಮೂರ್ತಿ, ಸಹಾಯಕ ಅರಣ್ಯಾಧಿಕಾರಿ ರಾಜಶೇಖರ್ ಮೂರ್ತಿ, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಎಇ ಸಂತೋಷ್, ಮುಖಂಡರಾದ ಮಂಜೇಶ್, ಮಾರ್ಟಳ್ಳಿ ಮಣಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರೆಡ್ಡಿಯಾರ್ ನಾಗರಾಜ್, ಜಯರಾಮ್ ರೆಡ್ಡಿ, ರಾಜೇಂದ್ರ,ಪಳನಿ, ದೊರೆಸ್ವಾಮಿನಾಗ್ಯ, ಪೆರುಮಾಳ್, ಮುರುಕೊಟ್ಟಯ್ಯ ಗೋವಿಂದರಾಜು, ಆತುರ್ ಕುಪ್ಪುಸ್ವಾಮಿ ಕೌ೦ಡರ್, ಶ್ರೀನಿವಾಸ್, ಮುರುಗನ್, ಪು ರಾಜ, ರಮೇಶ್, ಗ್ರಾಮಸ್ಥರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇತರರು ಹಾಜರಿದ್ದರು.