- ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ರಾಜಕೀಯ ಪಕ್ಷಗಳ ಬಿಎಲ್ಎಗಳ ಕಾರ್ಯಾಗಾರ
- - -ಕನ್ನಡಪ್ರಭ ವಾರ್ತೆ ಹರಿಹರ
ಪಾರದರ್ಶಕ ಮತ್ತು ದೋಷರಹಿತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮಾಡಲು ರಾಜಕೀಯ ಪಕ್ಷಗಳ ಬೂತ್ಮಟ್ಟದ ಏಜೆಂಟರ (ಬಿಎಲ್ಎ) ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹರಿಹರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ದೂಡಾ ಆಯುಕ್ತೆ ರೇಣುಕಾ ಹೇಳಿದರು.ನಗರದ ಜಯಶ್ರೀ ಟಾಕೀಸ್ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ನಡೆದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ರಾಜಕೀಯ ಪಕ್ಷಗಳ ಬಿಎಲ್ಎಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎನ್ನುವುದು ಚುನಾವಣಾ ಆಯೋಗದ ನಿಯಮವಾಗಿದೆ. ಅದೇ ರೀತಿ ಮರಣ ಹೊಂದಿದ ಹಾಗೂ ಎರಡು ಕಡೆಗಳಲ್ಲಿ ಇರುವ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಬಿಎಲ್ಒಗಳು ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ಜೂ.30ರಿಂದ ಜು.29 ರವರೆಗೆ ನಡೆಲಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಬಿಎಲ್ಒಗಳ ಜೊತೆಗೆ ಪಕ್ಷಗಳಿಂದ ನೇಮಕವಾಗಿರುವ ಬಿಎಲ್ಎಗಳು ಸಹಕಾರ ನೀಡಬೇಕು ಆಗ ಮಾತ್ರ ಉತ್ತಮ ಮತದಾರರ ಪಟ್ಟಿ ಸಾಧ್ಯವಾಗುತ್ತದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಚುನಾವಣಾ ಆಯೋಗ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಮಾಡುತ್ತಿದೆ. ಆದರೆ 2002 ರಿಂದ ಯಾವುದೇ ಪರಿಷ್ಕರಣೆ ಮಾಡದೇ ಇರುವ ಕಾರಣ ಇದಕ್ಕೆ ಇಷ್ಟು ಮಹತ್ವ ಬಂದಿದೆ ಎಂದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಬಿಎಲ್ಎಗಳು ಮಾತನಾಡಿ, ಮನೆ ಮನೆಗೆ ಭೇಟಿ ನೀಡಿದಾಗ ಮತದಾರರರಿಗೆ ಎಷ್ಷು ಆರ್ಜಿಗಳನ್ನು ನೀಡುತ್ತೀರಿ, ಪರಿಷ್ಕರಣೆ ಮಾಡುವ ಮುಖ್ಯ ಉದ್ದೇಶ, ಯಾವ ರೀತಿಯಲ್ಲಿ ನಾವುಗಳು ಸಹಕಾರ ನೀಡಬೇಕು ಎಂದು ಪ್ರಶ್ನಿಸಿದರು.ಬಿಎಲ್ಒಗಳು ತಪ್ಪು ಮಾಡಿದರೆ ಏನು ಕ್ರಮ ಕೈಗೊಳ್ಳುತ್ತೀರಿ. ಗ್ರಾಮೀಣ ಬಾಗದಲ್ಲಿ ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿಯಿಲ್ಲ. ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಿ. ಕೆಲಸಕ್ಕಾಗಿ ಗುಳೆ ಹೋದವರ ಮನೆಗಳ ಮತದಾರರ ಮಾಹಿತಿ ಹೇಗೆ ನೀಡಬೇಕು ಎನ್ನುವ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಇದಕ್ಕೆ ಉತ್ತರಿಸಿದ ಮತದಾರರ ನೋಂದಣಿಕಾರಿ ನಮ್ಮ ಚುನಾವಣಾ ಇಲಾಖೆಯಿಂದ ಈಗಾಗಲೇ ರಾಜಕೀಯ ಪಕ್ಷಗಳಿಗೆ ನೇಮಕವಾದ ಬಿಎಲ್ಒಗಳ ಪಟ್ಟಿಗಳನ್ನು ನೀಡಲಾಗಿದೆ. ದೇಶದಲ್ಲಿ 1951 ರಿಂದ 2002ರವರೆಗೆ ಹತ್ತು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ.ಈ ಬಾರಿ 2002- 2026 ರವರೆಗೆ ಪರಿಷ್ಕರಣೆ ಮಾಡಲಾಗುತ್ತಿದೆ. ಇದರ ಮೂಲ ಉದ್ದೇಶ ಯಾರು ಮತದಾನದಿಂದ ವಂಚಿತರಾಗಬಾರದು, ಮರಣ ಹೊಂದಿರುವ, ಎರಡು ಕಡೆ ಇರುವ ಹೆಸರುಗಳನ್ನು ಕೈ ಬಿಡುವುದು, ವಲಸೆ ಬಂದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು, ಹೆಸರು, ವಿಳಾಸ ಅಥವಾ ಭಾವಚಿತ್ರದಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡ ಬೇಕಿದೆ. ಕೆಲಸಕ್ಕಾಗಿ ಬೇರೆ ಕಡೆ ಹೊದವರ ಮನೆಯಲ್ಲಿ 18 ವರ್ಷ ತುಂಬಿದ ವ್ಯಕ್ತಿಯಿಂದ ಮಾಹಿತಿ ಪಡೆಯಬಹುದಾಗಿದೆ. ಇಲ್ಲವಾದಲ್ಲಿ ಬಿಎಲ್ಎಗಳ ಮೂಲಕ ಅವರನ್ನು ಸಂಪರ್ಕಿಸಿ ಪರಿಷ್ಕರಣೆ ಸಂದರ್ಭದಲ್ಲಿ ಕರೆಸಿಕೊಂಡು ಮಾಹಿತಿ ಸಂಗ್ರಹಿಸ ಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ಚುನಾವಣೆ ಶಾಖೆ ಶಿರಸ್ತೇದಾರ್ ಅಶೋಕ್, ಸಿಬ್ಬಂದಿ ಸೋಮಶೇಖರ್, ಉಮೇಶ್, ಕಂದಾಯ ಇಲಾಖೆಯ ಸಮೀರ್ ಅಹಮದ್, ಆನಂದ, ಎಚ್.ಜಿ.ಹೇಮಂತ್ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಮುಖ್ಯ ಶಿಕ್ಷಕ ಬಿ.ಬಿ.ರೇವಣ ನಾಯ್ಕ್ ಹಾಗೂ ಇತರರಿದ್ದರು.- - -
-13ಎಚ್ಆರ್ಆರ್01:ಕಾರ್ಯಾಗಾರದಲ್ಲಿ ಹರಿಹರ ಕ್ಷೇತ್ರದ ಮತದಾರರ ನೋಂದಣಿಕಾರಿ, ದೂಡಾ ಆಯುಕ್ತೆ ರೇಣುಕಾ ಮಾತನಾಡಿದರು. ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ಬಿ.ಬಿ.ರೇವಣ ನಾಯ್ಕ್ ಇದ್ದರು.