ಸಾರಾಂಶ
ಹರಪನಹಳ್ಳಿ: ಇಂದಿನ ವಿದ್ಯಾರ್ಥಿಗಳು ಕೇವಲ ಪಾಠಗಳಿಗೆ ಸೀಮಿತರಾಗದೇ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿ, ಆಟ, ಪಾಠಗಳ ನಡುವೆ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಪ್ರಕೃತಿ ವಿದ್ಯಾಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ಝೋನಲ್ ಮಟ್ಟದ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಓಟ, ಹೈಜಂಪ್, ಲಾಂಗ್ ಜಂಪ್ ಸೇರಿದಂತೆ ಅಥ್ಲೆಟಿಕ್ ಆಟಗಳು ದೈಹಿಕ ಚಟುವಟಿಕೆಯನ್ನು ಸಕ್ರಿಯಗೊಳಿಸಿದರೆ, ಚೆಸ್ (ಚದುರಂಗ) ಆಟ ಮಾನಸಿಕವಾಗಿ ಮತ್ತು ಮೆದುಳಿನ ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದ ಅವರು, ಆಟದಲ್ಲಿ ಗೆಲುವು, ಸೋಲು ಸಹಜ, ಸ್ಪರ್ಧಾತ್ಮಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋತವರು ಮರಳಿ ಪ್ರಯತ್ನ ಮಾಡಿದಲ್ಲಿ ಗೆಲುವು ಹಾಗೂ ಯಶಸ್ಸು ಸಿಗುತ್ತದೆ ಎಂದರು.ಚೆಸ್ ಆಟದಲ್ಲಿ ವಿವಿಧ ರಾಜ್ಯದ ವಿದ್ಯಾರ್ಥಿಗಳು ಪ್ರತಿನಿಧಿಸುತ್ತಿರುವುದು ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ದ್ವೇಷ, ಅಸೂಯೆಗಳನ್ನು ಮರೆತು ಸ್ಪರ್ಧಾತ್ಮಕ ಭಾವನೆಯನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಪೋಲಿಸರು ಸಕ್ರಿಯವಾಗಿ, ಸಾರ್ವಜನಿಕ ಸ್ನೇಹಿಯಾಗಿ ಉತ್ತಮವಾದ ಕೆಲಸವನ್ನು ಮಾಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಭಯದ ವಾತಾವರಣ ಕಡಿಮೆಗೊಳಿಸಿದ್ದಾರೆ ಎಂದು ಹೇಳಿದರು.ಶಿಕ್ಷಣಕ್ಕೆ ಬಡವ, ಶ್ರೀಮಂತ ಎನ್ನುವ ಭೇದ ಭಾವ ಇರುವುದಿಲ್ಲ. ಇದಕ್ಕೆ ಶ್ರಮ ಯಾರು ಹಾಕುತ್ತಾರೋ ಅವರು ಉತ್ತಮ ಭವಿಷ್ಯ ಹೊಂದುತ್ತಾರೆ. ಶಿಸ್ತು ಎಲ್ಲಿರುತ್ತದೆ. ಅಲ್ಲಿ ಉತ್ತಮ ಶಿಕ್ಷಣ ಹೆಚ್ಚಿರುತ್ತದೆ. ಆಸೆಯೊಂದಿಗೆ ಗುರಿಯನ್ನು ಹೊಂದಿ ಯಶಸ್ಸುಕಾಣಲು ತಾವು ಪ್ರಯತ್ನಿಸಿ. ಯಾರು ಸಹ ಸಣ್ಣ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡಬೇಡಿ, ಮಾಡದಂತೆ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವ ಮೂಲಕ ಅವರನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಶಶಿಧರ ಪೂಜಾರ ಮಾತನಾಡಿ, ಚದುರಂಗ (ಚೆಸ್) ಆಟ ಮಹಾಭಾರತ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಈ ಆಟ ಬರೀ ಅದೃಷ್ಟದ ಆಟವಲ್ಲ, ಉತ್ತಮ ಯೋಜನೆ ಬಲಿಷ್ಠಗೊಳಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಆಟ ಇದಾಗಿದೆ. ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ದಕ್ಷಿಣ ವಲಯ ಮಟ್ಟದ ಆಟವು ನಮ್ಮ ವಿದ್ಯಾಸಂಸ್ಥೆಯಿಂದ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಝೋನಲ್ ಮಟ್ಟದ ಆಟವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಿದ್ದು, ಚೆಸ್ಆಟದಲ್ಲಿ ಏಕ ಕಾಲಕ್ಕೆ1200ವಿದ್ಯಾರ್ಥಿಗಳು ಆಡಲಿದ್ದಾರೆ.ಅವರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಬಿಆರ್ಸಿ ಹೊನ್ನತ್ತೆಪ್ಪ, ಸಂಸ್ಥೆಯಉಪಾದ್ಯಕ್ಷಕೆ.ವಿರುಪಾಕ್ಷಪ್ಪ, ಮಹಾಂತೇಶ್ ಚಳ್ಳಿಗೇರಿ, ಬಸವರಾಜಉಲ್ಲತ್ತಿ, ಸುಮಾಉಪ್ಪಿನ, ನಾಗೇಶ ಉಪ್ಪಿನ, ಸೇರಿದಂತೆ ಶಿಕ್ಷಕರು, ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿ, ಪೋಷಕರು ಇದ್ದರು.