ಸಾರಾಂಶ
ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ವಿದ್ಯಾರ್ಥಿನಿಯರಿಗೆ ಕೆ. ಹರೀಶ್ ಗೌಡ ಸಲಹೆ
- ವಿದ್ಯಾರ್ಥಿನಿಯರಿಗೆ ಕೆ. ಹರೀಶ್ ಗೌಡ ಸಲಹೆ
ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿನಿಯರು ಆಸೆ ಆಮಿಷಗಳನ್ನು ಬದಿಗೆ ಒತ್ತಿ ಮುಂದಿನ ಐದಾರು ವರ್ಷ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಕೆ. ಹರೀಶ್ ಗೌಡ ಕರೆ ನೀಡಿದರು.
ನಗರದ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ 2023– 24ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಇದ್ದಲ್ಲಿ ಬದುಕು ಉತ್ತಮ ಆಗಿರುತ್ತದೆ. ಸರ್ಕಾರಿ ಕಾಲೇಜಿನ ಬಗ್ಗೆ ಯಾವುದೇ ಕೀಳರಿಮೆ ಬೇಡ. ಸರ್ಕಾರಿ ಶಾಲಾ ಕಾಲೇಜು ಮಕ್ಕಳಲ್ಲೇ ಧೈರ್ಯ, ಸಾಮರ್ಥ್ಯ ಹೆಚ್ಚು ಎಂದು ಹೇಳಿದರು.ಬಿಹಾರ್ ರಾಜ್ಯ ಸಾಕ್ಷರತೆ ಪ್ರಮಾಣದಲ್ಲಿ ಹಿಂದೆ ಇದ್ದರೂ ಅಲ್ಲಿಂದ ಐಎಎಸ್, ಐಪಿಎಸ್ ಅಧಿಕಾರಿಗಳು ಹೆಚ್ಚು ಆಯ್ಕೆ ಆಗುತ್ತ ಬಂದಿದ್ದಾರೆ. ನಮ್ಮಲ್ಲಿ ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿಯ ಕೊರತೆ ಇದೆ. ಈ ಬಗ್ಗೆ ಮಕ್ಕಳಲ್ಲಿ ಮಾಹಿತಿ ನೀಡಿ ಅವರನ್ನು ಹುರಿದುಂಬಿಸಬೇಕು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ಮಹಾರಾಣಿ ಪಿಯು ಕಾಲೇಜಿನಲ್ಲಿ ನಾಲ್ಕು ಹೊಸ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಾಸಕ ಕೆ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು. ನಂತರ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು.ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್, ಡಿಡಿಪಿಯು ಎಂ. ಮರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಪಿ. ಸೋಮಣ್ಣ,
ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರಾಜೀವ್, ಸದಸ್ಯರಾದ ಶ್ರೀನಿವಾಸ, ಮಂಗಳಾ, ವಾಸು, ಲಲಿತಾ, ಮಹದೇವು, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ತಿರುಮಲಾಂಬ, ಮಹಾರಾಣಿ ಡಿ.ಇಡಿ ಕಾಲೇಜು ಪ್ರಾಂಶುಪಾಲರಾದ ಗಾಯತ್ರಿ ಮೊದಲಾದವರು ಇದ್ದರು.