ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಮಾರ್ಗಸೂಚಿ ಅನ್ವಯ ಮೂರು ವರ್ಷದ ಪದವಿಗಳ ಪಠ್ಯಕ್ರಮ ರಚನೆ ಮತ್ತು ಪ್ರಕ್ರಿಯೆಯಲ್ಲಿ ಸರ್ಕಾರದ ಆದೇಶದ ಚೌಕಟ್ಟು ಹಾಗೂ ಶಿಕ್ಷಣ ನೀತಿ ಮಾರ್ಗಸೂಚಿಯಲ್ಲಿ ನೀಡಿರುವ ಅಂಶಗಳನ್ನು ಪಾಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಹಾಗೂ ಉದ್ಯೋಗಾಧಾರಿತ ಅಂಶಗಳನ್ನು ಅಳವಡಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮಾಜಿ ಉಪಾಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಪ್ರೊ. ತಿಮ್ಮೇಗೌಡ ಅಧ್ಯಯನ ಮಂಡಳಿ ಸದಸ್ಯರಿಗೆ ಸಲಹೆ ನೀಡಿದರು.ಕಲಬುರಗಿ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ‘2024-25ನೇ ಶೈಕ್ಷಣಿಕ ಸಾಲಿನ ಮೂರು ವರ್ಷದ ಸ್ನಾತಕ ರಾಜ್ಯ ಶಿಕ್ಷಣ ನೀತಿ ಪಠ್ಯ ರಚನೆ ಮತ್ತು ಪ್ರಕ್ರಿಯೆ’ ಕುರಿತು ಒಂದು ದಿನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಶಿಕ್ಷಣ ನೀತಿ ಮಾರ್ಗದರ್ಶಿಸೂಚಿಯಂತೆ ಗುಣಮಟ್ಟದ ಶಿಕ್ಷಣ ಕಲಿಕೆ ಮತ್ತು ಉತ್ಕೃಷ್ಟ ಸಂಶೋಧನೆ ಪೂರಕ ವಾತಾವರಣ ನಿರ್ಮಿಸಲು ಒತ್ತು ನೀಡಬೇಕಿದೆ. ವಿಷಯವಾರು ಅಧ್ಯಯನ ಮಂಡಳಿ ತಜ್ಞರಿಗೆ ಪೂರ್ಣ ಸ್ವತಂತ್ರ ನೀಡಲಾಗಿದೆ. ಗುಣಮಟ್ಟದ ಪಠ್ಯಕ್ರಮ ರಚನೆ, ಗುಣಮಟ್ಟದ ವಿಷಯಗಳೊಂದಿಗೆ ಪಠ್ಯಕ್ರಮದ ಪ್ರಸ್ತುತತೆ, ಅಂತರ್ ಶಿಸ್ತೀಯ ವಿಷಯಗಳಲ್ಲಿ ವೈಜ್ಞಾನಿಕತೆ ಪಾಲನೆ, ಔದ್ಯೋಗಿಕ ಕೌಶಲ್ಯ, ಉದ್ಯೋಗಾಧಾರಿತ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.ಶಿಕ್ಷಣ ನೀತಿ ಮಾರ್ಗಸೂಚಿ ನಿಯಮಾವಳಿಯಂತೆ ಕಲಾ ವಿಷಯಗಳಿಗೆ ವಾರದಲ್ಲಿ 5 ಗಂಟೆಗಳ ಬೋಧನಾ ಅವಧಿ ಹಾಗೂ ವಿಜ್ಞಾನ ವಿಷಯಗಳಿಗೆ ವಾರದಲ್ಲಿ 6 ಗಂಟೆ ಬೋಧನಾ ಅವಧಿಯಂತೆ ಕನಿಷ್ಠ 128 ಹಾಗೂ ಗರಿಷ್ಠ 150 ಕ್ರೆಡಿಟ್ಗಳ ಮಿತಿಯೊಳಗೆ ಬದಲಾವಣೆಗೆ ಅವಕಾಶ ನೀಡಲಾಗಿದೆ. ಪ್ರಾಯೋಗಿಕ ಕಲಿಕೆ, ಆಂತರಿಕ ವೃತ್ತಿ ತರಬೇತಿ ಮತ್ತು ಮೂರನೇ ವರ್ಷದ 5 ಮತ್ತು 6ನೇ ಸೆಮಿಸ್ಟರ್ನಲ್ಲಿ ಕಿರು ಸಂಶೋಧನಾ ಪ್ರಬಂಧ ರಚನೆಗೂ ಆಧ್ಯತೆ ನೀಡುವುದು ಸೂಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಜೊತೆಗೆ ವೃತ್ತಿ ಸಂಬಂಧಿ ಕೌಶಲ್ಯ ತರಬೇತಿ ಪಡೆದುಕೊಳ್ಳಲು ಪ್ರೋತ್ಸಾಹ ಸಿಗಲಿದೆ. ಭಾರತೀಯ ಸಂವಿಧಾನ, ಪರಿಸರ ಅಧ್ಯಯನ ಕಡ್ಡಾಯ ಕಲಿಕೆ ವಿಷಯಗಳಾಗಿ ಸೇರ್ಪಡೆಗೊಳಿಸಬೇಕು ಎಂದರು.
ಕಲಬುರಗಿ ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯಕ್ರಮದಲ್ಲಿ ಗೊಂದಲಗಳಿಗೆ ಆಸ್ಪದ ನೀಡದೆ ವಿದ್ಯಾರ್ಥಿಗಳು ಸ್ವ ಇಚ್ಛಾಸಕ್ತಿಯಿಂದ ವಿಷಯಗಳನ್ನು ಅಧ್ಯಯನ ನಡೆಸಲು ಪ್ರೋತ್ಸಾಹ ಸಿಗುವಂತೆ ಪಠ್ಯದಲ್ಲಿ ಗುಣಮಟ್ಟದ ವಿಷಯಗಳಿರಬೇಕು. ಆದರೆ ರಾಜ್ಯ ಶಿಕ್ಷಣ ನೀತಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ ಎಂದರು.ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶ್ರೀರಾಮುಲು, ಕಲಾ ನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾಧ್, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಕಾಂತ ಯಾತನೂರು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎಂ.ವಿದ್ಯಾಸಾಗರ್, ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳ ಅಂಬೇಕರ್, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಬಿ.ನಡುವಿನಮನಿ, ಪ್ರೊ. ಸುಜಾತ ಇಂಗಿನಶೆಟ್ಟಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಭಾಗವಹಿಸಿದ್ದರು. ಕಲಬುರಗಿ ವಿವಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಹಾಗೂ ಕಲಬುರಗಿ ವಿವಿಯ ಸ್ನಾತಕ ಪಠ್ಯಕ್ರಮ ಸಂಯೋಜಕ ಪ್ರೊ. ಕೆ.ವಿಜಯಕುಮಾರ್ ವಂದಿಸಿದರು.