ಮಕ್ಕಳ ವಿವರಣೆ, ಪ್ರತಿಭೆ ಕಂಡು ಹಾಜರಿದ್ದ ಅಧಿಕಾರಿ, ಪೋಷಕರು ಸಂತೋಷ ಪಟ್ಟರು
ಕೊಪ್ಪಳ: ಅಂಗನವಾಡಿಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ್ ಹೇಳಿದರು.
ನಗರದ ಹಮಾಲರ ಕಾಲನಿ ಅಂಗನವಾಡಿ ಕೇಂದ್ರ-3ರಲ್ಲಿ ಶಾಲಾ ಪೂರ್ವ ಶಿಕ್ಷಣ ಮುಗಿಸಿ ಪ್ರಾಥಮಿಕ ಶಾಲೆಗೆ ಪ್ರವೇಶಿಸಿದ ಮಕ್ಕಳಿಗೆ ಮಂಗಳವಾರ ಜರುಗಿದ ಬೀಳ್ಕೊಡುಗೆ ಮತ್ತು ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪೋಷಣೆ ಹಾಗೂ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕಲೆಂದು ಅಂಗನವಾಡಿ ಕೇಂದ್ರ ಕಾರ್ಯ ಮಾಡುತ್ತವೆ. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ನಿರಂತರವಾಗಿ, ಪರಿಣಾಮಕಾರಿಯಾಗಿ ನಡೆಯುತ್ತವೆ. ಅಂಗನವಾಡಿಯ ಕಡೆ ಪೋಷಕರು ಮಕ್ಕಳನ್ನು ದಾಖಲಿಸಲು ಮುಂದಾಗಬೇಕು. ಮಕ್ಕಳಿಗೆ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವ ಮಾದರಿಯಲ್ಲಿ ಪದವಿ ಪ್ರಧಾನ ಮಾಡಿರುವದು ವಿನೂತನ ಕಾರ್ಯ ಎಂದರು.ಅಂಗನವಾಡಿಯಲ್ಲಿ ಮೂರು ವರ್ಷಗಳ ಕಾಲ ಶಾಲಾ ಪೂರ್ವ ಶಿಕ್ಷಣ ಕಲಿತ ವಿಷಯಗಳ ಕುರಿತು ವಸ್ತು ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಕ್ಕಳಿಂದ ಗಣಿತ ಪೂರ್ವ ಚಟುವಟಿಕೆ ಕೇಳಿದಷ್ಟು ಕೊಡು, ಅಂಕಿ, ಬಣ್ಣ, ಆಕಾರ, ಪ್ರಾಣಿ 10 ಹಲವು ಚಟುವಟಿಕೆ ಹಾಗೂ ಪರಿಸರ ಕಾಳಜಿಯ ಕುರಿತು ಇನ್ನು ಅನೇಕ ವಿಷಯಗಳ ಬಗ್ಗೆ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ ಒಂದೊಂದು ವಿಷಯದ ಕುರಿತು ಸ್ವತಃ ಮಕ್ಕಳೇ ಚಿತ್ರ ತೋರಿಸುತ್ತಾ ತನ್ನ ತೊದಲು ನುಡಿಯಲ್ಲಿ ವಿವರಣೆ ಕೊಡುತ್ತಿರುವದು ಅದ್ಭುತವಾಗಿತ್ತು. ಮಕ್ಕಳ ವಿವರಣೆ, ಪ್ರತಿಭೆ ಕಂಡು ಹಾಜರಿದ್ದ ಅಧಿಕಾರಿ, ಪೋಷಕರು ಸಂತೋಷ ಪಟ್ಟರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತರಾದ ಜಯಮ್ಮ, ಮಲ್ಲಮ್ಮ ಮತ್ತು ಶೈಲಜಾ, ಅಂಗನವಾಡಿ ಮೇಲ್ವಿಚಾರಕಿ ಗಾಯತ್ರಿ, ಉಷಾ, ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ವಲಯ ಮೇಲ್ವಿಚಾರಕಿಯರು, ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಹಾಗೂ ಪೋಷಕರಿದ್ದರು.