ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೋದಿಗೆ ಮೋದಿಯೇ ಸಾಟಿ, ಅವರಿಗೆ ಬೇರೆ ಯಾರ ಹೋಲಿಕೆಯೂ ಸಲ್ಲದು ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ದೀರ್ಘಕಾಲದ ಪ್ರಧಾನಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ. ಅವರು ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದಾರೆ. ಭೀಮ ಸಖಿ ಯೋಜನೆ ಮೂಲಕ ಮಹಿಳೆಯರಿಗೆ ಎಐಸಿ ಇನ್ಶುರೆನ್ಸ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ಪ್ರಧಾನಿಗಳು ದೇಶದಲ್ಲಿರುವಾಗ ನಾನು ಸಹ ಶಾಸಕನಾಗಿರುವುದಕ್ಕೆ ಹೆಮ್ಮೆ ಮತ್ತು ಖುಷಿ ಇದೆ ಎಂದು ಹೇಳಿದರು.
ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ದೇಶದ ಆಡಳಿತ ನಡೆಸುತ್ತಿದ್ದಾರೆ. ನಾವು ನಿರೀಕ್ಷೆ ಮಾಡದಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ದಿಟ್ಟ ಎದೆಗಾರಿಕೆ ತೋರಿದ್ದಾರೆ. ಅವರ ಕಲ್ಪನಾ ಶಕ್ತಿ ಮತ್ತು ವಿವೇಚನಾ ಶಕ್ತಿಗೆ ದೊಡ್ಡ ಸಲಾಂ. ಮುಂದಿನ ನಾಲ್ಕು ವರ್ಷ ಮಾತ್ರವಲ್ಲ, ಇನ್ನೂ ಹತ್ತು ವರ್ಷಗಳ ಕಾಲ ಮೋದಿ ಅವರ ನೇತೃತ್ವದಲ್ಲೇ ದೇಶ ಮುನ್ನಡೆಯಲಿ, ಚಾಮುಂಡೇಶ್ವರಿ ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸಿದರು.ಸಮಗ್ರ ಅಭಿವೃದ್ಧಿ ಮಾಡಿದರೆ ತಾನಾಗಿಯೇ ಉದ್ಯೋಗ ಸೃಷ್ಟಿಯಾಗುತ್ತದೆ. ದೇಶದಲ್ಲಿ 50- 60 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡಲಾಗದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ ಅಂತಾರೆ. ರಸ್ತೆ, ರೈಲ್ವೆ ಅಭಿವೃದ್ಧಿ ಮಾಡಿಲ್ವಾ, ಅದರಿಂದಲೇ ಉದ್ಯೋಗ ಸೃಷ್ಟಿ ಆಗಲ್ವಾ? ನಾವು 15 ಲಕ್ಷ ಕೊಡ್ತೇವೆ ಅಂತ ಹೇಳಿಲ್ಲ. ನೀವು 200 ಯೂನಿಟ್ ವಿದ್ಯುತ್ ಕೊಡ್ತೀವಿ ಅಂದ್ರಿ ಕೊಟ್ರಾ? ಕಳೆದ 10 ವರ್ಷಗಳಲ್ಲಿ 90000 ಕಿ.ಮೀ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದನ್ನೆಲ್ಲಾ ತುಲನೆ ಮಾಡಬೇಕಲ್ವಾ ಎಂದು ಶಾಸಕ ಶ್ರೀವತ್ಸ ತಿರುಗೇಟು ನೀಡಿದರು.