ಕಾಲೇಜಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಪಠ್ಯಕ್ಕೆ ಆದ್ಯತೆ: ಸಚಿವ ಡಾ.ಸುಧಾಕರ್‌

| Published : Oct 29 2025, 01:00 AM IST

ಕಾಲೇಜಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಪಠ್ಯಕ್ಕೆ ಆದ್ಯತೆ: ಸಚಿವ ಡಾ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಹಾಗೂ ಆತ್ಮವಿಶ್ವಾಸ ಗುಣ ಹೆಚ್ಚಿಸುವ ಬೋಧನಾ ವ್ಯವಸ್ಥೆ ಇರಬೇಕು ಎನ್ನುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ತಕ್ಕ ಪಠ್ಯಕ್ರಮ ರೂಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಹಾಗೂ ಆತ್ಮವಿಶ್ವಾಸ ಗುಣ ಹೆಚ್ಚಿಸುವ ಬೋಧನಾ ವ್ಯವಸ್ಥೆ ಇರಬೇಕು ಎನ್ನುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ತಕ್ಕ ಪಠ್ಯಕ್ರಮ ರೂಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿವಿಧ ಸಾಂಸ್ಕೃತಿಕ ಘಟಕಗಳು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಪರಿಕಲ್ಪನೆಯ ಕೊರತೆಯಿಂದ ಹೊಸದಾಗಿ ಕಾಲೇಜುಗಳನ್ನು ಆರಂಭಿಸಿ ಅನಾಥವಾಗಿಸುವುದಕ್ಕಿಂತ ಇರುವ ವ್ಯವಸ್ಥೆ ಬಲಗೊಳಿಸುವ, ಅಗತ್ಯವಿರುವಲ್ಲಿ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು. ವಾಣಿಜ್ಯ ವಿಭಾಗದಲ್ಲಿ ರೀಟೇಲ್‌ ಶಿಕ್ಷಣ, ಆನ್‌ಲೈನ್‌ ಉದ್ಯಮ, ಸ್ಟಾರ್ಟ್‌ಅಪ್‌ಗಳ ಮೂಲಕ ಬದುಕು ಕಟ್ಟಿಕೊಳ್ಳುವ ರೀತಿಯ ಬೋಧನಾ ಕ್ರಮಗಳ ಕಲಿಕೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ವಿದೇಶೀ ವಿಶ್ವವಿದ್ಯಾಲಯಗಳ ಪದವಿಗಳು ಇಲ್ಲಿಯೇ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಹಮ್ಮಿಕೊಂಡ ಯೋಜನೆಗಳ ಅಂಗವಾಗಿ ಈಗಾಗಲೇ ಬೆಂಗಳೂರಿನಲ್ಲಿ ಬ್ರಿಟನ್‌ನ ಇಂಪೀರಿಯಲ್‌ ರೀಸರ್ಚ್‌ ವಿವಿ, ಲಿವರ್‌ಪೂಲ್‌ ವಿವಿಗಳು ಪದವಿ ತರಗತಿಗಳನ್ನು ಆರಂಭಿಸಿವೆ. ಮುಂದಿನ ವರ್ಷದ ಹೊತ್ತಿಗೆ ಮ್ಯಾಂಚೆಸ್ಟರ್‌ ವಿವಿ ಕೂಡಾ ಹಬ್‌ ಆರಂಭಿಸಲಿದೆ. ವಿವಿಧ ಯೋಜನೆಗಳಲ್ಲಿ ರಾಜ್ಯದ 6 ವಿವಿಗಳ ತಲಾ 5 ವಿದ್ಯಾರ್ಥಿಗಳು ಈಸ್ಟ್‌ ಲಂಡನ್‌ನ ವಿವಿಧ ಕಾಲೇಜುಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಭೇಟಿ ನೀಡಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಎಸ್‌.ಆನಂದ್‌, ಚಿಕ್ಕಮಗಳೂರು ಶಾಸಕ ಎಚ್‌.ಡಿ. ತಮ್ಮಯ್ಯ, ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೇಶವ. ಎಚ್‌., ಪ್ರಾಂಶುಪಾಲ ಡಾ.ರಾಜಣ್ಣ ಕೆ.ಎ, ಪುರಸಭೆ ಸದಸ್ಯ ಮಾನಿಕ್‌ ಬಾಷಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಡೂರು ಶಾಸಕರು ಕೋರಿರುವ ಜಾಗದ ವಿಚಾರವಾಗಿ ಅರಣ್ಯ ಸಚಿವರ ಜತೆ ಮಾತನಾಡುತ್ತೇನೆ. ಕಾಲೇಜು ಕಟ್ಟಡವನ್ನು ಬಹುಮಹಡಿ ಕಟ್ಟಡವಾಗಿ ನೂತನ ಮತ್ತು ಭವಿಷ್ಯದ ದೃಷ್ಟಿಯ ವಿನ್ಯಾಸದಲ್ಲಿ ರೂಪಿಸಲಾಗುವುದು. ಹೆಣ್ಣುಮಕ್ಕಳು ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಬಾರದು ಎನ್ನುವ ಉದ್ದೇಶದಿಂದ ಅಜೀಂ ಪ್ರೇಂಜಿ ಫೌಂಡೇಷನ್‌ ಮೂಲಕ ದೀಪಿಕಾ ವಿದ್ಯಾರ್ಥಿ ವೇತನ ಆರಂಭಿಸಿದ್ದು ಎಸ್‌ಎಸ್‌ಎಲ್‌ಸಿ ಮತ್ತು ಪಿಯು ತರಗತಿಗಳನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರಿಗೆ ಪದವಿ ಮುಗಿಯುವವರೆಗೆ ವಾರ್ಷಿಕ ತಲಾ 30ಸಾವಿರ ರು. ಹಣ ನೀಡಲಾಗುತ್ತದೆ.

ಡಾ.ಎಂ.ಸಿ.ಸುಧಾಕರ್‌ ಉನ್ನತ ಶಿಕ್ಷಣ ಸಚಿವ