ಹೆಣ್ಣುಮಗುವನ್ನು ರಕ್ಷಿಸಿ, ಹೆಣ್ಣುಮಗುವನ್ನು ಓದಿಸಿ ಎನ್ನುವ ಧ್ಯೇಯವಾಕ್ಯದಂತೆ ಹೆಣ್ಣುಮಗು ಎಂದು ತಕ್ಷಣ ಮೊದಲು ಮದುವೆಯಲ್ಲ. ಮೊದಲು ಶಿಕ್ಷಣ ನೀಡಬೇಕು.

ಗಜೇಂದ್ರಗಡ: ಮಹಿಳೆ ಗರ್ಭಿಣಿ ಎಂದು ತಿಳಿದಾದ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡು ಪ್ರಸವಪೂರ್ವ ಆರೈಕೆ ಪಡೆದುಕೊಂಡರೆ ತಾಯಿ ಮರಣದಂಥ ಗಂಡಾಂತರವನ್ನು ತಡೆಗಟ್ಟಬಹುದು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಶಾಂತಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೆಣ್ಣುಮಗುವನ್ನು ರಕ್ಷಿಸಿ, ಹೆಣ್ಣುಮಗುವನ್ನು ಓದಿಸಿ ಎನ್ನುವ ಧ್ಯೇಯವಾಕ್ಯದಂತೆ ಹೆಣ್ಣುಮಗು ಎಂದು ತಕ್ಷಣ ಮೊದಲು ಮದುವೆಯಲ್ಲ. ಮೊದಲು ಶಿಕ್ಷಣ ನೀಡಿ ಹೆಣ್ಣುಮಗುವನ್ನು ಓದಿಸಿ. ಅವಳು ಸ್ವಾಲಂಬಿಯಾದ ನಂತರ ಮದುವೆ ಮಾಡಿ. ಗರ್ಭಿಣಿ ಎಂದು ತಿಳಿದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡು ಸರಿಯಾದ ಸೇವೆ ಪಡೆದುಕೊಂಡಲ್ಲಿ ಗರ್ಭಿಣಿ ತಾಯಂದಿರ ಮರಣದ ಅಪಾಯಗಳನ್ನು ತಪ್ಪಿಸಿ, ಸುರಕ್ಷಿತ ತಾಯಿ ಹಾಗೂ ಸುರಕ್ಷಿತ ಮಗು ಪಡೆಯಬಹುದು ಎಂದರು. ಪ್ರಾಥಮಿಕ ಸುರಕ್ಷಾ ಅಧಿಕಾರಿ ಸಿ.ಎ. ಶಿರಹಟ್ಟಿ ಮಾತನಾಡಿ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ತಾಯಂದಿರು ನಿಯಮಿತವಾದ ವೈದ್ಯಕೀಯ ತಪಾಸಣೆಯ ಜತೆಗೆ ಪೌಷ್ಟಿಕ ಆಹಾರದ ಕಡೆ ಗಮನ ಕೊಡಬೇಕು. ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿ, ಹಣ್ಣುಗಳ ಸೇವನೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶದ ಆಹಾರ ಸೇವಿಸುವುದರ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಸುರಕ್ಷಿತ ಮಗು ಪಡೆಯುವುದರ ಜತೆಗೆ ಸುರಕ್ಷಿತ ತಾಯ್ತನವನ್ನು ನಿಭಾಯಿಸಿಕೊಳ್ಳಬಹುದು ಎಂದರು. ಶಾಂತಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಸವನಗೌಡ ಪವಾಡಿಗೌಡರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ಬಿ. ಶ್ಯಾಶೆಟ್ಟಿ, ವಿಜಯ ತುಕೋಳ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಗೀತಾ ನಾಯಕ, ಶೀಲಾ ಪೂಜಾರ, ಸಮುದಾಯ ಆರೋಗ್ಯ ಅಧಿಕಾರಿ ಮಾಂತೇಶ ಮಾದರ ಸೇರಿ ಆಶಾ ಕಾರ್ಯಕರ್ತೆಯರು ಇದ್ದರು.