ಸಾರಾಂಶ
- ನಗರದ ಆಜಾದ್ವೃತ್ತದಲ್ಲಿ ಜಿಲ್ಲಾ ಕನ್ನಡ ಸೇನೆ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಬೆಳಗಾವಿಯ ಬಸ್ ನಿರ್ವಾಹಕನ ಮೇಲೆ ಮರಾಠಿಗರು ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ನಗರದ ಆಜಾದ್ವೃತ್ತದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರೆ, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತಕ್ರಮಕ್ಕೆ ಒತ್ತಾಯಿಸಿದರು.ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವಿಶಾಲ ಹೃದಯ ಹೊಂದಿರುವ ಕನ್ನಡಿಗರು ಅನ್ಯ ಭಾಷಿಗ ರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಗಡಿ ಭಾಗದಲ್ಲಿ ಕೆಲವು ಕಿಡಿಗೇಡಿಗಳು ರಾಜ್ಯದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು, ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡದಲ್ಲೇ ವ್ಯವ ಹರಿಸಬೇಕು. ಕನ್ನಡಿಗರಿಗೆ ಉದ್ಯೋಗವೆಂಬ ಆದೇಶ ಮಾಡಿದರೂ ಇದನ್ನೆ ಲೆಕ್ಕಸದೇ ಕೆಲವರು ಕನ್ನಡಿಗರ ಮೇಲೆ ಹೆಚ್ಚು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.ನಾಡಿನ ಮತದಾರರ ಮೂಲಕ ಅಧಿಕಾರ ಹಿಡಿದು ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳಕರ್, ಕನ್ನಡಿಗರ ಪರವಾಗಿ ಕೈಜೋಡಿಸಿ, ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳದೇ, ಹಲ್ಲೆ ನಡೆಸಿರುವ ಮರಾಠಿಗರ ಬೆನ್ನೆಲುಬಾಗಿ ನಿಲ್ಲುವ ಮೂಲಕ ಕನ್ನಡಿಗರಿಗೆ ಅವಮಾನಿಸಿದ್ದಾರೆಂದು ಆರೋಪಿಸಿದರು.ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಪ್ರಕರಣ ತಿರುಚಲು ಬಸ್ ನಿರ್ವಾಹಕನ ಮೇಲೆ ಪೋಕ್ಸೋ ಕೇಸು ದಾಖಲಿಸಿರುವುದನ್ನು ಹಿಂಪಡೆದುಕೊಂಡು ನಿರ್ವಾಹಕನ ಪರವಾಗಿ ನ್ಯಾಯಬದ್ಧ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರಾಜಕೀಯ ದೊಂಬರಾಟಕ್ಕೆ ಹೆಚ್ಚು ಕನ್ನಡಿಗರೇ ಬಲಿಯಾಗುತ್ತಿರುವುದು ಶೋಚನೀಯ. ಅಲ್ಪ ಸಂಖ್ಯೆಯ ಮರಾಠಿಗರ ಒಲೈಕೆಗಾಗಿ ಕೋಟ್ಯಂತರ ಕನ್ನಡಿಗರಿಗೆ ದ್ರೋಹ ವೆಸಗುತ್ತಿದೆ. ಕೂಡಲೇ ಒಲೈಕೆ ರಾಜಕಾರಣ ಕೈಬಿಟ್ಟು ರಾಜ್ಯದ ಪ್ರಜೆಗಳ ಪರವಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು.ಕನ್ನಡಸೇನೆ ಜಿಲ್ಲಾ ಉಪಾಧ್ಯಕ್ಷ ಅನ್ವರ್, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಸತೀಶ್, ರೋಷನ್, ಶಿವಣ್ಣ, ನವೀನ್, ಡಿಂಪನ, ಪುಷ್ಪ, ಪಾಲಾಕ್ಷಿ, ಹೊನ್ನಪ್ಪ ಇದ್ದರು.
-- ಬಾಕ್ಸ್--ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿಚಿಕ್ಕಮಗಳೂರು: ಬೆಳಗಾವಿ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದು ಕೂಡಲೇ ಆರೋಪಿತರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ಬಸ್ ನಿರ್ವಾಹಕ ಮಹಾದೇವ ಎಂಬುವವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಶೀಘ್ರವೇ ಪತ್ತೆಹಚ್ಚಿ ಜೈಲಿಗಟ್ಟುವ ಕೆಲಸವನ್ನು ರಾಜ್ಯಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.ಕನ್ನಡಿಗರು ಶಾಂತಿ ಪ್ರಿಯರು, ಸ್ವಾಭಿಮಾನ ಬಿಟ್ಟು ಎಂದಿಗೂ ಸಾಗುವುದಿಲ್ಲ. ಹೀಗಾಗಿ ಮಹಾದೇವ ಎಂಬುವವರಿಗೆ ನೀಡಿರುವ ದೈಹಿಕ ಹಿಂಸೆ ವಿಚಾರದಲ್ಲಿ ಮರಾಠಿ ಪುಂಡರಿಂದಲೇ ಪರಿಹಾರ ಒದಗಿಸಿ ಕೊಡುವ ಮೂಲಕ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ಅನೇಕ ಬಾರಿ ನಡೆದಿವೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳ ದಿದ್ದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಸರ್ಕಾರ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡಿಗರ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಕ್ರಮವಹಿಸಬೇಕೆಂದರು.ಗಡಿಭಾಗದ ಜಿಲ್ಲೆಗಳಲ್ಲಿ ನೆಲ, ಜಲ, ಭಾಷೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ತೊಂದರೆ ನೀಡಲಾಗುತ್ತಿದೆ. ಒಂದಿಲ್ಲೊಂದು ಪ್ರಕರಣಗಳು ದಾಖಲಾಗಿ ಕರ್ನಾಟಕ ಪ್ರಜೆಗಳನ್ನು ಅವಮಾನಿಸುವ ಕಾರ್ಯವಾಗುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಶಾಶ್ವತವಾಗಿ ಗಡಿಸಮಸ್ಯೆ ಬಗೆಹರಿಸಲು ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಂಘದ ಗೌರವ ಅಧ್ಯಕ್ಷ ಬಿ.ಎಂ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಸವರಾಜ್, ಕಾರ್ಯದರ್ಶಿ ಗಳಾದ ಮಧು, ಜಯವರ್ಧನ್, ಮುಖಂಡರಾದ ಮುಳ್ಳೇಗೌಡ, ಪರಮೇಶ್ವರ್ ಇದ್ದರು.