ಧಾರವಾಡ:
ಕಠಿಣ ಪರಿಶ್ರಮ ಹಾಗೂ ನಿಷ್ಠೆಯಿಂದ ಕೆಲಸ ಮಾಡುವ ವ್ಯಕ್ತಿಗೆ ಸಮಾಜದಲ್ಲಿ ಎಂದಿಗೂ ಗೌರವ ಹಾಗೂ ಉನ್ನತ ಸ್ಥಾನ ಸಿಗಲಿದೆ. ಅದಕ್ಕೆ ಪ್ರೊ. ಅರವಿಂದ ಮೂಲಿಮನಿ ಉದಾಹರಣೆ ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ ಕವಿವಿ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಅರವಿಂದ ಮೂಲಿಮನಿ ಅಭಿನಂದನೆಯಲ್ಲಿ ಮಾತನಾಡಿ, ಒಬ್ಬ ಶಿಕ್ಷಕ ತನ್ನ ಕಠಿಣ ಪರಿಶ್ರಮದಿಂದ ಮೇಲೆ ಬರಲು ಸಾಧ್ಯ. ಸಂಸ್ಥೆಯ ಪರವಾಗಿ ಶೈಕ್ಷಣಿಕ ಉತ್ತಮ ಆಡಳಿತಗಾರರಾಗಿದ್ದು, ವಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಹಂಪಿ ವಿವಿ ಕುಲಪತಿ ಎ. ಮುರಿಗೆಪ್ಪ ಮಾತನಾಡಿ, ಯಾವದೇ ಸೀಮಿತ ವಿಷಯಕ್ಕೆ ಒಬ್ಬ ಶಿಕ್ಷಕ ಒಳಗಾಗಬಾರದು. ಪ್ರೊ. ಅರವಿಂದ ಮೂಲಿಮನಿ ಸಮಾನ ಮನಸ್ಕರಾಗಿದ್ದರು. ಒಬ್ಬ ಒಳ್ಳೆಯ ಸಂಶೋಧಕರಾಗಿ, ಆಡಳಿತಗಾರರಾಗಿ, ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರು ಎಂದರು. ಮುಂಬೈ ವಿವಿ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸವಿತಸ್ಥಿತಾ ಚವ್ಹಾಣ, ಕವಿವಿ ವಿಶ್ರಾಂತ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿದ ಪ್ರೊ. ಅರವಿಂದ ಮೂಲಿಮನಿ, ಒಬ್ಬಂಟಿಯಾಗಿ ಪ್ರಾಧ್ಯಾಪಕನಾಗಿ ವಿವಿಗೆ ಹಾಜರಾಗಿದ್ದು, ಇಂದು ಸಹಸ್ರಾರು ವಿದ್ಯಾರ್ಥಿಗಳು ನನ್ನ ಜೊತೆಗಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಕಾರಣ ಎಂದರು.ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ಪ್ರೊ. ಎಚ್. ವೆಂಕಟೇಶ, ಪ್ರೊ. ಜಯಶ್ರೀ. ಎಸ್, ಲಕ್ಷ್ಮಣ ಬಕ್ಕಾಯಿ ಮಾತನಾಡಿದರು. ಇದೇ ವೇಳೆ ಭೂಗೋಳ ಭೂಷಣ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಪ್ರೊ. ಅರವಿಂದ ಮೂಲಿಮನಿ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಡಾ. ತೇಜಸ್ವಿನಿ, ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಡಿ. ಮಾಳಗಿ ಇದ್ದರು.