ಸಾರಾಂಶ
ಕುಶಾಲನಗರ : ಜೀವನದಲ್ಲಿ ಯಾರೂ ಕಾಣದ ದೃಶ್ಯಗಳನ್ನು ಛಾಯಾಗ್ರಾಹಕರ ಕ್ಯಾಮೆರಾ ಕಣ್ಣುಗಳು ಗ್ರಹಿಸುತ್ತವೆ ಎಂದು ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ ಹೇಳಿದರು.
ಅವರು ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಸೋನಿ ಕ್ಯಾಮರಾ ಕಾರ್ಯಾಗಾರ ಮತ್ತು ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಫೋಟೋಗಳ ಅವಲಂಬನೆ ಸಂಖ್ಯೆ ಅಧಿಕವಾಗಿದೆ ಎಂದ ಅವರು ವೃತ್ತಿಪರ ಛಾಯಾಗ್ರಾಹಕರಿಗೆ ಹೆಚ್ಚಿನ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇದೆ ಎಂದರು.
ಪ್ರಸಕ್ತ ದಿನಗಳಲ್ಲಿ ಛಾಯಾಗ್ರಾಹಕರಿಗೆ ಪೂರಕವಾದ ತಂತ್ರಜ್ಞಾನ ಬಂದಿದ್ದು ಅದರ ಸದುಪಯೋಗವನ್ನು ಪಡೆಯುವಂತಾಗಬೇಕು ಎಂದರು. ಚಿತ್ರವೊಂದು ವ್ಯಕ್ತಿಯ ಜೀವನವನ್ನು ಜೀವಂತವಾಗಿ ಇರುವಂತೆ ಮಾಡಲು ಸಾಧ್ಯ. ಕ್ಯಾಮೆರಾಗಳಿಗೆ ಎಲ್ಲದನ್ನು ಗ್ರಹಿಸುವ ಶಕ್ತಿ ಇದೆ ಎಂದು ಹೇಳಿದರು.
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂದು ಹೇಳಿದ ವಿಶ್ವೇಶ್ವರ ಭಟ್, ಸುದ್ದಿಯ ಬಹುತೇಕ ವಿವರಗಳು ಛಾಯಾ ಚಿತ್ರಗಳಲ್ಲಿ ಲಭ್ಯವಾಗುತ್ತದೆ ಎಂದರು. ಛಾಯಾಗ್ರಾಹಕನಿಗೆ ಸಮಯ ಪ್ರಜ್ಞೆ ಅಗತ್ಯ, ಛಾಯಾಗ್ರಾಹಕರು ಇತಿಹಾಸಕಾರರಂತೆ ಕೆಲಸ ನಿರ್ವಹಿಸಬೇಕಾಗಿದೆ ವೃತ್ತಿ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು.
ಪ್ರಸಕ್ತ ದಿನಗಳಲ್ಲಿ ಅಂತ್ಯ ಸಂಸ್ಕಾರ ಕಾರ್ಯಕ್ರಮಗಳಿಗೆ ತೆರಳುವ ಸಂದರ್ಭದಲ್ಲಿ ಕೂಡ ಕ್ಯಾಮರಗಳನ್ನು ಎದುರಿಸುವ ನಿಟ್ಟಿನಲ್ಲಿ ಮೇಕಪ್ ಮಾಡುವಂತಹ ಪ್ರಮೇಯ ಸೃಷ್ಟಿಯಾಗಿದೆ. ಕೆಲವೆಡೆ ಹೆಣಕ್ಕೆ ಸಿಂಗಾರ ಕೂಡ ನಡೆಯುತ್ತಿರುವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕ್ಯಾಮರಾ ವೃತ್ತಿ ಜೀವನ ಹೊಂದಿದವರು ಒಗ್ಗಟ್ಟು ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ ಆರ್ ಶರವಣಕುಮಾರ್ ಮಾತನಾಡಿ ವೃತ್ತಿ ಬದುಕಿಗೆ ಭದ್ರತೆಯ ಅಗತ್ಯವಿದೆ ಮೊಬೈಲ್ ಪೈಪೋಟಿ ನಡುವೆ ಛಾಯಾಗ್ರಹಕರ ಸಂಖ್ಯೆ ನಶಿಸುವ ಆತಂಕ ಕೂಡ ಕಂಡುಬರುತ್ತದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಇದೇ ಸಂದರ್ಭ ಸಭಾಂಗಣದಲ್ಲಿ ಗುಡ್ಡೆಮನೆ ವಿಶ್ವಕುಮಾರ್ ಅವರಿಂದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಕೊಡಗು ಜಿಲ್ಲಾ ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಯ ವರ್ಧನ್, ಮಾಜಿ ಅಧ್ಯಕ್ಷರಾದ ಮೂಕಾಳೇರ ಲಕ್ಷ್ಮಣ್, ಮಡಿಕೇರಿ ಸೋಮವಾರಪೇಟೆ ಪೊನ್ನಂಪೇಟೆ ಕುಶಲನಗರ ವಿರಾಜಪೇಟೆ ವ್ಯಾಪ್ತಿಯ ಅಧ್ಯಕ್ಷರು ಮತ್ತು ಸಂಘದ ನಿರ್ದೇಶಕರು, ಜಿಲ್ಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.
ಅಪೂರ್ವ ಪ್ರಾರ್ಥನೆ, ಡೇವಿಡ್ ಸೋಲೋಮನ್ ಸ್ವಾಗತಿಸಿದರು. ಶಿಕ್ಷಕರಾದ ಊರ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಛಾಯಾಚಿತ್ರಗ್ರಾಹಕ ಕುಟುಂಬ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.