ಸಾರಾಂಶ
ಅಸ್ತಮಾ ಪೀಡಿತ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡುತ್ತ, ರೋಗಿಯನ್ನು ಶಿಕ್ಷಿತನಾಗಿ ಮಾಡುವುದರಿಂದ ಅಸ್ತಮಾದಿಂದ ಪಾರಾಗಲು ಸಾಧ್ಯ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ರಾಮಕೃಷ್ಣ ನಗರದ ಸುಯೋಗ್ ಆಸ್ಪತ್ರೆಯಲ್ಲಿ ಮಂಗಳವಾರ ಅಸ್ತಮಾದ ಬಗ್ಗೆ ಶೈಕ್ಷಣಿಕ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ವಾಸಕೋಶ ತಜ್ಞ ವೈದ್ಯ ಡಾ. ಸುಯೋಗ್ ಯೋಗಣ್ಣ ಮಾತನಾಡಿ, ಶುಶ್ರೂಷಕರು ಹಾಗೂ ಕಿರಿಯ ವೈದ್ಯರು, ಅಸ್ತಮಾ ರೋಗಿಗಳಿಗೆ ನೀಡಬೇಕಾದ ವಿವಿಧ ಬಗೆಯ ಚಿಕಿತ್ಸಾ ವಿಧಾನಗಳು ಮತ್ತು ಔಷಧೋಪಚಾರಗಳ ಬಗ್ಗೆ ವಿವರಿಸಿದರು.
ವೈದ್ಯಶಾಸ್ತ್ರ ವಿಭಾಗದ ಸಾಮಾನ್ಯ ತಜ್ಞವೈದ್ಯ ಡಾ. ಅಭಿಷೇಕ್ ಮಾತನಾಡಿ, ಅಸ್ತಮಾ ಪೀಡಿತ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡುತ್ತ, ರೋಗಿಯನ್ನು ಶಿಕ್ಷಿತನಾಗಿ ಮಾಡುವುದರಿಂದ ಅಸ್ತಮಾದಿಂದ ಪಾರಾಗಲು ಸಾಧ್ಯ ಎಂದರು.ರೋಗಿಯು ಅಲರ್ಜಿ ವಸ್ತುಗಳಿಂದ ದೂರವಿರುವುದು, ಮಳೆ ಮತ್ತು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು, ಸಾಂಕ್ರಾಮಿಕ ರೋಗಗಳಿಂದ ದೂರವಿರುವುದು, ಆಗಿಂದಾಗೆ ತಪಾಸಣೆಗೆ ಒಳಪಡುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.
ಸುಯೋಗ್ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಯೋಗೇಶ್, ಶುಶ್ರೂಷಕ ವಿಭಾಗದ ಮುಖ್ಯಸ್ಥ ಪವನ್ ಕುಮಾರ್, ಜನರಲ್ ಮ್ಯಾನೇಜರ್ ಪಿ.ಜೆ. ಅರುಣ್ ಕುಮಾರ್ ಇದ್ದರು.