ಶಿರಾ ನಗರದಲ್ಲಿ ಸುಮಾರು ೩೦೦೦ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಇದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಇದನ್ನು ತಡೆಯಲು ಕೈಗಾರಿಕೊದ್ಯಮಿಗಳ ಸಹಕಾರದಿಂದ ನಗರದಾದ್ಯಂತ ಸುಮಾರು ೫೦ ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ನಗರದಲ್ಲಿ ಸುಮಾರು ೩೦೦೦ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಇದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಇದನ್ನು ತಡೆಯಲು ಕೈಗಾರಿಕೊದ್ಯಮಿಗಳ ಸಹಕಾರದಿಂದ ನಗರದಾದ್ಯಂತ ಸುಮಾರು ೫೦ ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಶಿರಾ ನಗರದ ಮಡಿವಾಳ ಮಾಚಿದೇವ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ನಮ್ಮೂರು ನಮ್ಮಕೆರೆ ಯೋಜನೆಯಡಿಯಲ್ಲಿ ಪುನಶ್ಚೇತನಗೊಳಿಸಲಾದ ೯೭೩ನೇ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಬಾಗೀನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ತಾಲೂಕಿನ ೫೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿಗಾಗಿ ೧೭ ಕೊಳವೆ ಬಾವಿ ಕೊರೆಸಿದ್ದರೂ ಅದರಲ್ಲಿ ೭ ರಲ್ಲಿ ಮಾತ್ರ ನೀರು ಸಿಕ್ಕಿದೆ. ಉಳಿದ ೧೦ ಕೊಳವೆಬಾವಿಗಳು ವಿಫಲವಾಗಿವೆ. ಮುಂದೆ ಏನಾದರೂ ವರುಣ ಕೃಪೆ ತೋರದಿದ್ದರೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಶಿರಾ ನಗರದ ಜನರ ಜೀವನಾಡಿಯಾಗಿರುವ ಜಾಜಿಕಟ್ಟೆಯಲ್ಲಿ ನೀರು ಶೇಖರಣೆಯಾದರೆ ಇಲ್ಲಿನ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಆದ್ದರಿಂದ ಜಾಜಿಕಟ್ಟೆ ಹೂಳನ್ನು ತೆಗೆಯಲು ಧರ್ಮಸ್ಥಳ ಸಂಸ್ಥೆಯಿಂದ ೨೫ ಲಕ್ಷ ರು. ಅನುದಾನ ನೀಡಿದ್ದು, ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗಡ್ಡೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಗಾಯಿತ್ರಿ ಜಲಾಶಯದಿಂದ ನೀರು:ಶಿರಾ ತಾಲೂಕಿನ ಗೌಡಗೆರೆ ಹೋಬಳಿಗಳ ಕೆರೆಗಳಿಗೆ ನೀರು ಹರಿಸಲು ವಾಣಿ ವಿಲಾಸ ಸಾಗರದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ತಂದು ಅಲ್ಲಿಂದ ಗೌಡಗೆರೆ ಹೋಬಳಿಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ತಗಲುವ ವೆಚ್ಚಕ್ಕೆ ಶ್ರೀ ಮಧುಸೂಧನ ಸಾಯಿ ಅವರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಮಕ್ಕಳ ಆಸ್ಪತ್ರೆ ನಿರ್ಮಾಣ:
ಶಿರಾ ನಗರದಲ್ಲಿ ಶ್ರೀ ಮಧುಸೂಧನ ಸಾಯಿ ಅವರು ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸುಮಾರು ೩ ಎಕರೆ ಜಮೀನು ಬೇಕಾಗುತ್ತದೆ. ಈ ಕೆಲಸವನ್ನು ಕೆ.ಆರ್.ಡಿ.ಐ.ಎಲ್. ಅಧಿಕಾರಿಗಳು ಗುರುತಿಸಿಕೊಡಬೇಕು ಎಂದು ಸ್ಥಳದಲ್ಲೇ ಇದ್ದ ಅಧಿಕಾರಿಗೆ ತಿಳಿಸಿದರು.ಶಿರಾ ಜಾಜಿ ಕಟ್ಟೆಯನ್ನು ಸುಂದರವಾಗಿ ನಿರ್ಮಾಣ ಮಾಡಲು ಶಿರಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ೪.೭೦ ಕೋಟಿ ರು. ವೆಚ್ಚದಲ್ಲಿ ಜಾಜಿಕಟ್ಟೆ ಸುತ್ತ ತಂತಿಬೇಲಿ, ವಾಕಿಂಗ್ ಪಾಥ್, ಎರಡು ಸೇತುವೆಗಳು, ಉದ್ಯಾನವನ ಹಾಗೂ ಜಾಜಿಕಟ್ಟೆಗೆ ಕೊಳಚೆ ನೀರು ಬರದಂತೆ ತಡೆಗಟ್ಟಲು ಕೊಳಚೆ ನೀರು ತಿರುವು ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ತಾಲೂಕು ಯೋಜನಾಧಿಕಾರಿ ದೇವರಾಜ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಂಗಸ್ವಾಮಿ, ಪೌರಾಯುಕ್ತ ರುದ್ರೇಶ್, ಜಾಜಿಕಟ್ಟೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ರಾಘವೇಂದ್ರ, ನಗರಸಭಾ ಸದಸ್ಯರಾದ ಆರ್.ರಾಮು, ಉಮಾ ವಿಜಯರಾಜ್, ರಾಧಾಕೃಷ್ಣ, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಮಾಜಿ ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ, ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಎಸ್.ಕೆ.ಜಿ. ರಾಮಚಂದ್ರ ಗುಪ್ತ ಸೇರಿದಂತೆ ಹಲವರು ಹಾಜರಿದ್ದರು.