ಸಾರಾಂಶ
ಚಿಂಚೂಳಿ ತಾಲೂಕು ಹಿತರಕ್ಷಣಾ ಸಮಿತಿಯಿಂದ ಧರಣಿ । ಡಿಎಚ್ಓ ರಾಜಶೇಖರ ಮಲಿ ಭೇಟಿ, ಮಾತುಕತೆಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕು ವೈದ್ಯರು ವರ್ಗಾವಣೆಯಾಗಿದ್ದು, ತಜ್ಞ ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶದಿಂದ ಬರುವ ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಇಲ್ಲದೇ ತೊಂದರೆ ಪಡಬೇಕಾಗಿದೆ. ವೈದ್ಯರನ್ನು ನೇಮಕಗೊಳಿಸುವಂತೆ ತಾಲೂಕು ಹಿತರಕ್ಷಣಾ ಸಮಿತಿ ಮುಖಂಡ ಗೋಪಾಲರಾವ ಕಟ್ಟಿಮನಿ ಸರ್ಕಾರಕ್ಕೆ ಆಗ್ರಹಿಸಿದರು.ಚಂದಾಪೂರ ನಗರದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೊಳಿಸುವಂತೆ ಬುಧವಾರ ತಾಲೂಕು ಹಿತರಕ್ಷಣಾ ಸಮಿತಿ ಆಸ್ಪತ್ರೆ ಮುಂಭಾಗದಲ್ಲಿ ಉಪವಾಸ ಧರಣಿ ನಡೆಸಿತು. ಈ ವೇಳೆ ಮಾತನಾಡಿದ ಕಟ್ಟಿಮನಿ, ರಾಜ್ಯದಲ್ಲಿಯೇ ಉತ್ತಮ ಚಿಕಿತ್ಸೆ ವ್ಯವಸ್ಥೆ ಎಂಬ ಕೀರ್ತಿಪಡೆದಿರುವ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆಗಳು ಖಾಲಿ ಇರುವುದರಿಂದ, ಜನಸಾಮನ್ಯರು ಪರದಾಡುವಂತಾಗಿದೆ. ಪ್ರತಿನಿತ್ಯ ೩೦೦ಹೆಚ್ಚು ಹೊರರೋಗಿಗಳು ಬರುತ್ತಾರೆ. ಗರ್ಭಿಣಿ, ಬಾಣಂತಿಯರು, ವಯೋವೃದ್ದರು, ಅಂಗವಿಕಲರಿಗೆ ತೊಂದರೆ ಆಗಿದ್ದು, ಕೂಡಲೇ ಸರ್ಕಾರ ಇತ್ತ ಗಮನಹರಿಸಬೇಕೆಂದು ಆಗ್ರಹಿಸಿದರು.
ತಾಲೂಕು ಹಿತರಕ್ಷಣಾ ಸಮಿತಿ ಹಿರಿಯ ಮುಖಂಡ ಕೆ.ಎಂ. ಬಾರಿ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿಯೇ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಇಲ್ಲಿ ಕೊಡಲಾಗಿದೆ. ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಲಾಗಿದೆ. ಆದರೆ ವೈದ್ಯರ ಸಮಸ್ಯೆಯಿಂದಾಗಿ ಕಲಬುರಗಿ, ಬೀದರ ಜಿಲ್ಲೆಗೆ ಹೋಗಬೇಕಾಗಿದೆ ಡಿಎಚ್ಓ, ಟಿಎಚ್ಓ ನಮ್ಮ ತಾಲೂಕಿನವರೆ ಆಗಿದ್ದಾರೆ. ಆಸ್ಪತ್ರೆಯಲ್ಲಿ ೧೪ ತಜ್ಞ ವೈದ್ಯರಲ್ಲಿ ೧೦ಹುದ್ದೆಗಳು ಖಾಲಿ ಇದ್ದು, ೧೦೦ ಹಾಸಿಗೆವುಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಸರಿಯಾಗಿ ಆಗಬೇಕು ಒತ್ತಾಯಿಸಿದರು.ಡಿಎಚ್ಓ ಡಾ.ರಾಜಶೇಖರ ಮಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಧರಣಿ ಉಪವಾಸ ನಡೆಸುತ್ತಿರುವ ಮುಖಂಡರ ಮನವೋಲಿಸಿ ಮಾತನಾಡಿದರು. ನಾನು ಚಿಂಚೋಳಿ ಪಟ್ಟಣದವನೇ ಆಗಿದ್ದು, ನನಗೆ ನನ್ನ ತಾಲೂಕಿನ ಆಸ್ಪತ್ರೆ ಬಗ್ಗೆ ತುಂಬಾ ಕಾಳಜಿ ಇದೆ. ಇಗಾಗಲೇ ಇಬ್ಬರು ವೈದ್ಯರನ್ನು ನೇಮಕ ಮಾಡಲಾಗಿದೆ. ಇನ್ನೂ ಇಬ್ಬರು ವೈದ್ಯರನ್ನು ಎರಡು ದಿನಗಳಲ್ಲಿ ಭರ್ತಿಗೊಳಿಸಲಾಗುವುದು. ವೈದ್ಯರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಆದರೆ ಯಾರು ವೈದ್ಯರು ಅರ್ಜಿ ಹಾಕುತ್ತಿಲ್ಲ ಜನರ ಸಹಕಾರ ತುಂಬಾ ಅಗತ್ಯವಿದೆ. ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಭರವಸೆ ನೀಡಿದರು.
ಉಪವಾಸ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ ಮುಖಂಡರ ಆರೋಗ್ಯ ಕಾಳಜಿ ವಹಿಸಿದ ವೈದ್ಯರು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷಿಸಿದರು. ಬೆಳಗ್ಗೆಯಿಂದ ಉಪವಾಸ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ತಂಪು ಪಾನೀಯ ಕುಡಿಸಿ ಬಾಳೆಹಣ್ಣು ನೀಡಿ, ಧರಣಿ ಹಿಂಪಡೆಯಲು ಮನವೋಲಿಸಿದರು.ಪ್ರತಿಭಟನೆಯಲ್ಲಿ ಮಹಿಳಾ ಮುಖಂಡರಾದ ಉಮಾಪಾಟೀಲ, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ತಾಲೂಕು ಕೋಲಿ ಸಮಾಜ ಅಧ್ಯಕ್ಷ ಗಿರಿರಾಜ ನಾಟೀಕಾರ, ಪುರಸಭೆ ಸದಸ್ಯ ಭೀಮರಾವ ರಾಠೋಡ, ಶಾಮರಾವ ಕೊರವಿ, ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಭೀಮಶೆಟ್ಟಿ ಮುರುಡಾ, ಸಂತೋಷ ಗಡಂತಿ, ಹಣಮಂತ ಪೂಜಾರಿ, ನ್ಯಾಯವಾದಿ ನೀಲಮ್ಮ ರಾಠೋಡ ಮಾತನಾಡಿದರು.