ಆಯುಷ್‌ಮಾನ್‌ ಆರೋಗ್ಯ ಯೋಜನೆಯು ವಿಶ್ವದ ಅತಿ ದೊಡ್ಡ ನಿರ್ದಿಷ್ಟ ಆರೋಗ್ಯ ಭರವಸೆ ಯೋಜನೆಯಾಗಿದೆ. ಇಲ್ಲಿ ಸಮಗ್ರ ನಿರಂತರ ಆರೈಕೆ ವಿಧಾನದ ಮೂಲಕ ಪ್ರಾಥಮಿಕ, ಮಾಧ್ಯಮಿಕ, ತೃತೀಯ ಹಂತಗಳಲ್ಲಿ ಆರೋಗ್ಯ ರಕ್ಷಣೆ ಪ್ರವೇಶವನ್ನು ಸುಧಾರಿಸುವ ಗುರಿ ಹೊಂದಿದೆ ಎಂದು ರಾಮೇಶ್ವರ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಸಾಲಿಮಠ ತಿಳಿಸಿದ್ದಾರೆ.

- ರಾಮೇಶ್ವರ ಗ್ರಾಮದಲ್ಲಿ ಆಯುಷ್‌ ಅರಿವು, ಮಧುಮೇಹ ನಿಯಂತ್ರಣ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಆಯುಷ್‌ಮಾನ್‌ ಆರೋಗ್ಯ ಯೋಜನೆಯು ವಿಶ್ವದ ಅತಿ ದೊಡ್ಡ ನಿರ್ದಿಷ್ಟ ಆರೋಗ್ಯ ಭರವಸೆ ಯೋಜನೆಯಾಗಿದೆ. ಇಲ್ಲಿ ಸಮಗ್ರ ನಿರಂತರ ಆರೈಕೆ ವಿಧಾನದ ಮೂಲಕ ಪ್ರಾಥಮಿಕ, ಮಾಧ್ಯಮಿಕ, ತೃತೀಯ ಹಂತಗಳಲ್ಲಿ ಆರೋಗ್ಯ ರಕ್ಷಣೆ ಪ್ರವೇಶವನ್ನು ಸುಧಾರಿಸುವ ಗುರಿ ಹೊಂದಿದೆ ಎಂದು ರಾಮೇಶ್ವರ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರಶೇಖರಯ್ಯ ಸಾಲಿಮಠ ತಿಳಿಸಿದರು.

ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್‌ ಇಲಾಖೆ ದಾವಣಗೆರೆ ಸಹಯೋಗದಲ್ಲಿ ನಡೆದ ಆಯುಷ್ಮಾನ್‌ ಆರೋಗ್ಯ ಮಂದಿರ ರಾಷ್ಟ್ರೀಯ ಆಯುಷ್‌ ಅಭಿಯಾನದಡಿಯಲ್ಲಿ ಆಯುಷ್‌ ಅರಿವು, ಮಧುಮೇಹ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನಲ್ಲಿ ಅನಿರೀಕ್ಷಿತ ತೂಕ ಕಡಿಮೆ ಆಗುವುದು, ಅತಿಯಾದ ಮೂತ್ರ ವಿಸರ್ಜನೆ, ಅತಿಯಾದ ಹಸಿವು, ಅತಿಯಾದ ಬಾಯಾರಿಕೆ, ಮಾನಸಿಕ ಕಿರಿಕಿರಿ, ಮಂದದೃಷ್ಠಿ, ನಿಧಾನವಾಗಿ ಗಾಯ ಗುಣವಾಗುವುದು, ಬಾಯಿಯಿಂದ ಕೆಟ್ಟ ವಾಸನೆ, ಗಂಟಲು ಒಣಗುವುದು ಹೀಗೆ ಹಲವು ಕಾರಣಗಳನ್ನು ಸಾರ್ವಜನಿಕರು ಗುರುಗಿಸಿ ಮಧುಮೇಹ ರೋಗದ ಬಗ್ಗೆ ತಿಳಿಯಬಹುದು. ಸೂಕ್ತ ವೈದ್ಯರನ್ನು ಸಂಪರ್ಕಿಸಿ ರೋಗ ತಡೆಗಟ್ಟವ, ಗುಣಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಮಧುಮೇಹದಿಂದ ಮುಕ್ತಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅವಶ್ಯವಾಗಿದೆ. ಮಧುಮೇಹಕ್ಕೆ ಅನುವಂಶಿಕ, ಆರಾಮದಾಯಕ ಜೀವನಶೈಲಿ, ದೀರ್ಘಕಾಲ ಕುಳಿತು ಕೆಲಸ ಮಾಡುವುದರಿಂದ ಬೊಜ್ಜು, ಜಂಕ್‌ ಆಹಾರ ಸೇವನೆಯಿಂದ ಮಧುಮೇಹ ಬರುತ್ತದೆ. ಮಧುಮೇಹವನ್ನು ತಡೆಯಲು ಊಟದಲ್ಲಿಯೇ ತಿದ್ದಿಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ತಪಾಸಣೆ ಮಾಡಿಸಿಕೊಳ್ಳಬೇಕು, ಲಘು ವ್ಯಾಯಮ, ನಡಿಗೆ ಮಾಡಬೇಕು, ದುಶ್ಚಟಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಯ್ದ ಜನರಿಗೆ ಉಚಿತವಾಗಿ ಮಧುಮೇಹ ತಪಾಸಣೆ ಮಾಡಲಾಯಿತು. ಹಳೆಯ ಮತ್ತು ಮೊದಲ ಬಾರಿ ಮಧುಮೇಹ ಕಂಡುಬಂದ ರೋಗಿಗಳಿಗೆ ರಕ್ತದೊತ್ತಡ ತಪಾಸಣೆ ಮಾಡಿ, ಆಯುಷ್‌ ಇಲಾಖೆಯಿಂದ ಪೂರೈಸಲಾಗಿದ್ದ ನಿಶಾಮಲಕಿ ವಟಿ, ಚಂದ್ರಪ್ರಭ ವಟಿ ಮಾತ್ರೆಗಳನ್ನು ನೀಡಲಾಯಿತು. ರೋಗಿಗಳಿಗೆ ಮುಂದಿನ 2 ತಿಂಗಳವರೆಗೆ ತಿಂಗಳಿಗೆ ಒಂದು ಬಾರಿ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ತರಬೇತಿದಾರರಾದ ಲತಾ ನರಸಿಂಹಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

- - -

-ಚಿತ್ರ:

ನ್ಯಾಮತಿ ತಾಲೂಕಿನ ರಾಮೇಶ್ವರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುಷ್‌ ಅರಿವು, ಮಧುಮೇಹ ನಿಯಂತ್ರಣ ಕಾರ್ಯಕ್ರಮದಲ್ಲಿ ರೋಗಿಗಳ ಮಧುಮೇಹ ತಪಾಸಣೆ ನಡೆಸಲಾಯಿತು.