ಸಾರಾಂಶ
ಕನ್ನಡಪ್ರಭ ವಾರ್ತೆ ಅಕ್ಕಿಆಲೂರು
ಆಧುನಿಕ ದಿನಗಳಲ್ಲಿ ಭಾರತೀಯ ಭವ್ಯ ಪರಂಪರೆಯನ್ನು ರಕ್ಷಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದ್ದು, ಮೂಲ ಸಂಸ್ಕೃತಿಯ ವಾರಸುದಾರರಾದ ಯುವಪೀಳಿಗೆ ಇದನ್ನು ಅರ್ಥೈಸಿಕೊಂಡು ಜಾಗೃತವಾಗಬೇಕು ಎಂದು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.ಪಟ್ಟಣದ ಜಿಗಳಿಕೊಪ್ಪದ ಶ್ರೀ ಮಾರುತಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಫೆ.೨೦ರವರೆಗೆ ನಡೆಯಲಿರುವ ಪ್ರವಚನ ಸಮಾರಂಭದ ಉದ್ಘಾಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ದಿನಮಾನಗಳಲ್ಲಿ ನಡೆದಿರುವ ಹಲವಾರು ಬದಲಾವಣೆ ಗಮನಿಸಿದರೇ ಯುವಶಕ್ತಿ ವಿದೇಶಿಗರ ಗೊಡ್ಡು ಆಚರಣೆಗಳಿಗೆ ಮಾರುಹೋಗಿ ನಮ್ಮತನದ ಅವಸಾನಕ್ಕೆ ಕಾರಣವಾಗುತ್ತಿದೆ. ಮೊಬೈಲ್ ಪಟ್ಟಣಗಳಷ್ಟೇ ಅಲ್ಲದೇ ಗ್ರಾಮೀಣ ಭಾಗಗಳಿಗೂ ಆವರಿಸಿದ್ದು, ಜಾನಪದ ಶೈಲಿಯ ಆಚರಣೆಗಳು ಇಂದು ಮರೆಯಾಗಿವೆ. ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳ ಶ್ರೀಮಂತಿಕೆಯಿಂದ ಭಾರತ ವಿಶ್ವಗುರುವಾಗಿದೆ ಎಂಬ ಸತ್ಯವನ್ನು ನಾವೆಲ್ಲರೂ ಅರಿತುಕೊಂಡು ಎಲ್ಲ ಕ್ಷೇತ್ರಗಳಲ್ಲಿ ಚಟುವಟಿಕೆಯಿಂದ ಪಾಲ್ಗೊಳ್ಳುವ ಮೂಲಕ ಶ್ರೀಮಂತ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ದೇವಸ್ಥಾನ ಸಮಿತಿಯ ಸದಾಶಿವ ಬೆಲ್ಲದ ಮಾತನಾಡಿ, ನಮ್ಮ ದೇಶದ ಭವಿಷ್ಯಕ್ಕಾಗಿ ನಾವೆಲ್ಲರೂ ಜಾಗೃತರಾಗಿ ಮಂಕು ಕವಿದಿರುವ ವಿವಿಧ ಆಚರಣೆಗಳಿಗೆ ಮರುಜನ್ಮ ನೀಡಬೇಕಾಗಿದೆ. ಮೋಜು, ಮಸ್ತಿಗಳಿಗೆ ಮಾತ್ರ ಸೀಮಿತವಾಗುತ್ತಿರುವ ನಾವೆಲ್ಲರೂ ನಮ್ಮ ಸಂಸ್ಕೃತಿಯ ಕೇಂದ್ರ ಬಿಂದುಗಳಾಗಿರುವ ಮಠಗಳ ಸಂಪರ್ಕದಲ್ಲಿ ಬದುಕು ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.ಬೀದರ್ನ ಗಡಿಗೌಡಗಾವಿನ ಹಾವಲಿಂಗೇಶ್ವರ ಸಂಸ್ಥಾನಮಠದ ಶಾಂತವೀರ ಶಿವಾಚಾರ್ಯ ಶ್ರೀಗಳು ಪ್ರವಚನ ಆರಂಭಿಸಿದರು. ವಿರಕ್ತಮಠದ ಶಿವಬಸವ ಶ್ರೀಗಳು, ಮುಖಂಡರಾದ ರಾಜಣ್ಣ ಗೌಳಿ, ಶಿವಕುಮಾರ ದೇಶಮುಖ, ಡಾ. ಪಿ.ಕೆ. ಹಿರೇಮಠ, ನಿರಂಜನಪ್ಪ ಪಾವಲಿ, ವಿಶ್ವನಾಥ ತುಪ್ಪದ, ಪ್ರಕಾಶಗೌಡ ಪಾಟೀಲ, ಶರತ್ ಸಣ್ಣವೀರಪ್ಪನವರ, ಬಸವಂತಪ್ಪ ಶೇಷಗಿರಿ, ಮನೋಜ ದೇಸಾಯಿ, ತಿಮ್ಮಣ್ಣ ಗಿರಿಯಣ್ಣನವರ, ಗಿರೀಶ ಸವಣೂರ, ಸಂಜೀವ ಜೋಗಪ್ಪನವರ, ಉಮೇಶ ಉತಳೇಕರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.