ಗಿಡ ನೆಡುವ ಮೂಲಕ ಮುಂದಿನ ಪೀಳಿಗೆ ರಕ್ಷಿಸಿ: ಭೀಮಣ್ಣ ನಾಯ್ಕ

| Published : Jul 07 2024, 01:22 AM IST

ಸಾರಾಂಶ

ಕೆನರಾ ವೃತ್ತ, ಶಿರಸಿ ವಿಭಾಗ ಹಾಗೂ ಹುಲೇಕಲ್ ಅರಣ್ಯ ವಲಯದ ಆಶ್ರಯದಲ್ಲಿ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿರಸಿ: ಕೆನರಾ ವೃತ್ತ, ಶಿರಸಿ ವಿಭಾಗ ಹಾಗೂ ಹುಲೇಕಲ್ ಅರಣ್ಯ ವಲಯದ ಆಶ್ರಯದಲ್ಲಿ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಸಕ ಭೀಮಣ್ಣ ನಾಯ್ಕ ಗಿಡ ನೆಡುವು ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮನುಷ್ಯನಿಗೆ ಬದುಕಲು ಪ್ರಾಣವಾಯು ಅಗತ್ಯ. ಅದು ಗಿಡ-ಮರಗಳಿಂದ ಸಾಧ್ಯ. ಪ್ರತಿಯೊಬ್ಬ ಪ್ರಜೆಯೂ ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್. ಮಾತನಾಡಿ, ವನಮಹೋತ್ಸವ ಆಚರಣೆಯಿಂದ ಪ್ರತಿ ವರ್ಷವು ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.

ಎಸಿಎಫ್ ಕೆ.ಜಿ. ಪ್ರಕಾಶ ಮಾತನಾಡಿ, ಭೂಮಿಯ ಉಳಿವಿಗೆ ಅರಣ್ಯವೇ ಆಧಾರ ಎಂಬ ಮಾಹಿತಿ ನೀಡಿದರು.

“ಪರಿಸರ ಸಂರಕ್ಷಣೆ” ಬಗ್ಗೆ ಕಾಲೇಜು ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನ ವಿತರಿಸಿದರು.

ಅರಣ್ಯ ರಕ್ಷಣೆಗಾಗಿ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಉಪ ವಲಯ ಅರಣ್ಯಾಧಿಕಾರಿ ರವಿ ಎಸ್. ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಹುಲೇಕಲ್ ಗ್ರಾಪಂ ಅಧ್ಯಕ್ಷ ಖಾಸಿಂ ಇಬ್ರಾಹಿಂ ಸಾಬ್ ಮಾತನಾಡಿ, ಸ್ವಚ್ಛತೆ ಮತ್ತು ಅರಣ್ಯ ರಕ್ಷಣೆಯ ಮಹತ್ವ ಹೇಳಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಾರಾಮ ಹೆಗಡೆ, ಗ್ರಾಪಂ ಉಪಾಧ್ಯಕ್ಷೆ ಬಿ.ಬಿ. ಫೌಜಿಯಾ ಇಂತಿಯಾಜ್, ಉಪ ತಹಸೀಲ್ದಾರ್ ಡಿ.ಆರ್. ಬೆಳ್ಳೆಮನೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗಿತಾ ಹೆಗಡೆ, ಗ್ರಾಪಂ ಸದಸ್ಯರು, ಹುಲೇಕಲ್ ವಲಯದ ಅರಣ್ಯ ಇಲಾಖೆ ಸಿಬ್ಬಂದಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಊರ ಗ್ರಾಮಸ್ಥರು ಹಾಜರಿದ್ದರು. ಹುಲೇಕಲ್ ವಲಯಾರಣ್ಯಾಧಿಕಾರಿ ಉಷಾ ಕಬ್ಬೇರ ಸ್ವಾಗತಿಸಿದರು.