ಕನ್ನಡಪ್ರಭ ವಾರ್ತೆ ಹೊಸದುರ್ಗ

ಪೂಜ್ಯನೀಯ ಭಾವನೆಯಿಂದ ನೋಡುವ ಭೂಮಿಗೆ ಇಂದು ವಿಷ ಉಣಿಸಲಾಗುತ್ತಿದೆ ಇದರಿಂದಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಪರ ಸಿವಿಲ್ ನ್ಯಾಯಾಧೀಶೆ ಎಂ.ಎನ್ ತ್ರಿನೇತ್ರಾ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮಸ್ಥಳ ಯೋಜನಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಭೂಮಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭೂಮಿಯ ಮೇಲೆ ಜೀವಿಸುವ ಹಕ್ಕು ಪ್ರತಿ ಜೀವ ಸಂಕುಲಕ್ಕೂ ಇದೆ ಅದರೆ ಮಾನವನ ದುರಾಸೆಗೆ ಇಂದು ಭೂಮಿ ತಾಯಿ ತನ್ನ ಸಾರವನ್ನು ಕಳೆದುಕೊಂಡ ಪರಿಣಾಮ ಅನೇಕ ಜೀವ ಸಂಕುಲ ವಿನಾಶದ ಅಂಚಿನಲ್ಲಿವೆ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಸಿಗಬೇಕಾದರೆ ಭೂಮಿಯನ್ನು ಮಲಿನಗೊಳಿಸದೆ ಸಂರಕ್ಷಿಸಬೇಕಿದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಎಸ್.ಶಿವಣ್ಣ ಮಾತನಾಡಿ, ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡಿ ಎಂಬ ಪೂಜ್ಯ ವೀರೇಂದ್ರ ಹೆಗ್ಗಡೆಯವರ ನುಡಿನಂತೆ ತಾಲೂಕಿನ ಸುಮಾರು 80ಸಾವಿರ ಕುಟುಂಬಗಳಿಗೆ ಸ್ವಸಹಾಯ ಸಂಘಗಳ ಸಂಘಟನೆ ಮೂಲಕ ಸ್ವಚ್ಛತೆ, ಭೂಮಿಯ ರಕ್ಷಣೆ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ಎಲ್.ಬೋಮಣ್ಣ, ಪ್ಯಾನಲ್ ವಕೀಲರಾದ ಲಲಿತಾ ಎಂ.ಹಿರೇಮಠ್, ವಕೀಲರಾದ ಎಚ್.ಬಿ.ರವಿಕುಮಾರ್, ಕೆ.ಟಿ.ಮಮತಾ, ಇ.ಟಿ.ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.