ನನ್ನ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಗೌಳಿ ಸಮುದಾಯದವರು ಅರಣ್ಯ ಇಲಾಖೆಯ ಕೆಲವು ಕಠಿಣ ಕಾನೂನು ಕ್ರಮಗಳಿಂದ ಆತಂಕಕ್ಕೀಡಾಗುವಂತಾಗಿದೆ.
ಉಚಗೇರಿ ಶಾಲೆಯಲ್ಲಿ ಗ್ರಾಮೋತ್ಸವ ಉದ್ಘಾಟನೆಕನ್ನಡಪ್ರಭ ವಾರ್ತೆ ಯಲ್ಲಾಪುರ
ನನ್ನ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಗೌಳಿ ಸಮುದಾಯದವರು ಅರಣ್ಯ ಇಲಾಖೆಯ ಕೆಲವು ಕಠಿಣ ಕಾನೂನು ಕ್ರಮಗಳಿಂದ ಆತಂಕಕ್ಕೀಡಾಗುವಂತಾಗಿದೆ. ಆದರೆ, ಅರಣ್ಯ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಅತಿಕ್ರಮಣ ಜಮೀನು ಮಾಡಿಕೊಂಡವರಾರೂ ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಉಚಗೇರಿ ಸ.ಹಿ.ಪ್ರಾ ಶಾಲೆಯ ಆವಾರದಲ್ಲಿ ಹಮ್ಮಿಕೊಂಡಿದ್ದ ಗ್ರಾಮೋತ್ಸವ-೨೦೨೬ ವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಸಂಪತ್ತು ಅತ್ಯಮೂಲ್ಯವಾಗಿದ್ದು, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯಾವ ಕಾರಣಕ್ಕೂ ಹೊಸ ಅತಿಕ್ರಮಣಕ್ಕೆ ಇಲಾಖೆ ಖಂಡಿತ ಅವಕಾಶ ನೀಡದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.ವಿದ್ಯೆ ಎಂಬುದು ಕೇವಲ ಶ್ರೀಮಂತರ ಸ್ವತ್ತಲ್ಲ. ಪ್ರಸ್ತುತ ಗೌಳಿ ಸಮುದಾಯದ ಯುವಕನೋರ್ವ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದೇ ಇದಕ್ಕೆ ಸಾಕ್ಷಿ ಎಂದ ಅವರು, ಸಮಾರಂಭದಲ್ಲಿ ಸಿಎ ಭಾವು ಡೊಯಿಪುಡೆಯವರನ್ನು ಸಂಘಟನೆಯ ಪರವಾಗಿ ಸನ್ಮಾನಿಸಿದರಲ್ಲದೇ, ಕಾರ್ಯಕ್ರಮದಲ್ಲಿ ಚಪ್ಪರ ನಿರ್ಮಾಣಕ್ಕೆ ದೇಣಿಗೆ ನೀಡಿದ ಗಿರೀಶ ಕೇಣಿಯವರನ್ನು ಗೌರವಿಸಿದರು.
ಡಿಸಿಎಫ್ ಹರ್ಷಭಾನು ಮಾತನಾಡಿ, ಸಾರ್ವಜನಿಕರು ಕಾಡಿದ್ದರೆ ನಾಡು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಸಿ.ಆರ್.ಪಿ ವಿಷ್ಣು ಭಟ್ಟ, ಗ್ರಾಪಂ ಸದಸ್ಯ ಮಾಸ್ತ್ಯಪ್ಪ ಮಡಿವಾಳ ಮಾತನಾಡಿದರು. ಎಸಿಎಫ್ ಗಳಾದ ಹಿಮವತಿ ಭಟ್ಟ, ಸಂಗಮೇಶ್ವರ ಪ್ರಭಾಕರ, ಮಂಚಿಕೇರಿ ಆರ್.ಎಫ್.ಒ ಬಸವರಾಜ ಬೋಚಳ್ಳಿ, ಧನಗರ ಗೌಳಿ ಸಮಾಜದ ರಾಜ್ಯಾಧ್ಯಕ್ಷ ದೇವು ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದು ತೋರ್ವತ್, ಉಪಾಧ್ಯಕ್ಷೆ ಗಿರಿಜಾ ಖಾಂಡೇಕರ್, ಗ್ರಾಪಂ ಸದಸ್ಯರಾದ ದಾಕ್ಲು ಪಾಟೀಲ, ನಿರ್ಮಲಾ ನಾಯ್ಕ, ಮುಖ್ಯ ಶಿಕ್ಷಕ ಶ್ರೀಕರ ಹೆಗಡೆ ಮತ್ತಿತರರಿದ್ದರು.
ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ಮಾಡಿವಾಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ಗಜಾನೃತ್ಯ ಹಾಗೂ ಪೂರ್ಣಕುಂಭದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.ಸಹಶಿಕ್ಷಕ ಜೀವನ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಬಾಗು ಶೆಳ್ಕೆ ನಿರ್ವಹಿಸಿದರು. ಅತಿಥಿ ಶಿಕ್ಷಕಿ ಸಕ್ಕಿ ಬೋಡೆಕರ್ ಪ್ರಾಸ್ತಾವಿಕ ಮಾತನಾಡಿದರು. ಬಾಬು ತೋರ್ವತ್ ವಂದಿಸಿದರು. ತಡರಾತ್ರಿಯವರೆಗೂ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.