ಸಾರಾಂಶ
ತಿಪಟೂರು : ಸಕಲ ಜೀವರಾಶಿಗಳಿಗೆ ಆಶ್ರಯ ತಾಣವಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಗರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎಫ್. ಮಹಮ್ಮದ್ ಆರಿಫುಲ್ಲ ತಿಳಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೊಸಪಟ್ಟಣ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ವಿದ್ಯೋದಯ ಕಾನೂನು ಕಾಲೇಜು ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು ಭೂಮಿ ಎಲ್ಲಾ ಜೀವರಾಶಿಗಳ ಆಶ್ರಯ ತಾಣವಾಗಿದೆ. ಆದರೆ ಮಾನವ ಭೂಮಿಯನ್ನು ತನ್ನ ಸ್ವಾರ್ಥ ಸಾಧನೆಯಿಂದ ಹಾಳು ಮಾಡುತ್ತಿದ್ದು, ಭೂಮಿಯನ್ನು ರಕ್ಷಣೆ ಮಾಡಬೇಕುಂಬುದನ್ನು ಸತ್ಪ್ರಜೆಯಾದ ನಾವುಗಳು ಎಲ್ಲರಲ್ಲಿಯೂ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಿದರು. ಅಧಿಕ ಸಿವಿಲ್ ನ್ಯಾಯಾಧೀಶರಾದ ಜಿ.ಎಸ್. ಮಧುಶ್ರೀ ಮಾತನಾಡಿ ನಮ್ಮ ಸನಾತನ ಧರ್ಮದವರು ಭೂಮಿಯನ್ನು ದೇವರು ಎಂದೇ ಭಾವಿಸಿದ್ದು, ನಾವು ನೀವೆಲ್ಲರೂ ಸಹ ಭೂತಾಯಿಯ ಮಡಿಲಲ್ಲಿ ಸಂರಕ್ಷಿತವಾಗಿದ್ದೇವೆ. ಅದನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಲ್ಲಿ ನಮ್ಮ ನಿಮ್ಮೆಲ್ಲರ ಕರ್ತವ್ಯ ಗಣನೀಯವಾದದ್ದು. ಆದ್ದರಿಂದ ನಾವು ಒಬ್ಬೊಬ್ಬರೂ ಒಂದೊಂದು ಗಿಡ ನೆಡುವ ನಿಟ್ಟಿನಲ್ಲಿ ಸುತ್ತಮುತ್ತ ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಲ್ಲದೆ ನಿರುಪಯುಕ್ತ ವಸ್ತುಗಳನ್ನು ಪರಿಸರದಲ್ಲಿ ಬಿಸಾಡದೇ ಅವೆಲ್ಲವನ್ನು ಒಂದೆಡೆ ಸಂಗ್ರಹಿಸಿ ನಾಶಗೊಳಿಸುವ ಹಾಗೂ ಪ್ಲಾಸ್ಟಿಕ್ ಅನ್ನು ಬಳಸದೆ ಭೂಮಿಯನ್ನು ಸಂರಕ್ಷಣೆಗೊಳಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘ ಅಧ್ಯಕ್ಷ ಬಿ.ಎನ್ ಅಜಯ್, ಕಾರ್ಯದರ್ಶಿಗಳು ಬಿ. ಮಲ್ಲಿಕಾರ್ಜುನಯ್ಯ ಸೇರಿದಂತೆ ವಕೀಲ ಸಂಘದ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.