ಎಲ್ಲಾ ಧರ್ಮಗಳ ಚಿಂತನೆಯಿಂದ ಮನುಕುಲದ ಹಿತ ರಕ್ಷಣೆ

| Published : Nov 06 2024, 12:50 AM IST / Updated: Nov 06 2024, 12:51 AM IST

ಎಲ್ಲಾ ಧರ್ಮಗಳ ಚಿಂತನೆಯಿಂದ ಮನುಕುಲದ ಹಿತ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ : ಎಲ್ಲಾ ಧರ್ಮಗಳ ಚಿಂತನೆ ಮನುಕುಲದ ಹಿತವನ್ನು ರಕ್ಷಿಸುವಂತಿದೆ ಎಂದು ಚಿತ್ರದುರ್ಗ ಮದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಶಿವಮೊಗ್ಗ : ಎಲ್ಲಾ ಧರ್ಮಗಳ ಚಿಂತನೆ ಮನುಕುಲದ ಹಿತವನ್ನು ರಕ್ಷಿಸುವಂತಿದೆ ಎಂದು ಚಿತ್ರದುರ್ಗ ಮದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಭಗವತ್ ಚಿಂತನ ಧರ್ಮ ಸಂಕಥನ ಉಪನ್ಯಾಸದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಂದು ಧರ್ಮದಲ್ಲಿಯೂ ಮನುಷ್ಯನ ಹಿತವನ್ನು ಬಯಸುವಂತಹ ವಿಶೇಷ ನಿಯಮಗಳಿವೆ ಎಂದು ತಿಳಿಸಿದರು.ಎಲ್ಲ ಧರ್ಮಗಳಲ್ಲಿನ ವಿಚಾರಗಳು ಅನುಷ್ಟಾನಕ್ಕಾಗಿ ಇವೆಯೇ ಹೊರತು ಕೇವಲ ಭಾಷಣಕ್ಕಲ್ಲ. ಆದರೆ ಇಂದು ಧರ್ಮದ ವಿಚಾರಗಳು ಹೆಚ್ಚಾಗಿ ಭಾಷಣಕ್ಕೇ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.ಮಾನವ ಜೀವಿ ವಿಕಾಸ ಹೊಂದಿದ ಆರಂಭದಲ್ಲಿ ಕಾಡಿನಲ್ಲಿ ಪ್ರಾಣಿಗಳ ನಡುವೆ ಮಾನವ ವಾಸಿಸುತ್ತಿದ್ದ. ಬಳಿಕ ಆಹಾರ ಕ್ರಾಂತಿಯಾಯಿತು. ಇದರಿಂದ ಗುಂಪು, ಪ್ರದೇಶ, ಗ್ರಾಮ, ಪಟ್ಟಣ ನಿರ್ಮಾಣವಾಯಿತು. ಇದೆಲ್ಲ ಆದ ಬಳಿಕ ದೇವರು, ಧರ್ಮವನ್ನು ಮನುಷ್ಯ ಹುಡುಕಿಕೊಂಡ. ಇದೇ ಹೆಸರಿನಲ್ಲಿ ಏಕತೆ ಸೃಷ್ಟಿಯಾಯಿತು ಎಂದರು.ಆಹಾರಕ್ಕಾಗಿ ಹೋರಾಟ ಮಾಡುತ್ತಿದ್ದ ಮನುಷ್ಯ ಕ್ರಮೇಣ ಧರ್ಮಕ್ಕಾಗಿ ಹೋರಾಟ ಮಾಡುವ ಸನ್ನಿವೇಶ ಸೃಷ್ಟಿಯಾಯಿತು. ಇಸ್ಲಾಂ ಧರ್ಮ ಶಾಂತಿ ಹಾಗೂ ಶರಣಾಗತಿಯನ್ನು ಸಾರುತ್ತದೆ. ಆದರೆ ಇಂದು ಸನ್ನಿವೇಶ ಭಿನ್ನವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ನಿಟ್ಟೂರು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಶಿಕ್ಷಣ ಮಹಾ ಕ್ರಾಂತಿ ಮಾಡಿರುವುದು ಅದಿಚುಂಚನಗಿರಿ ಕ್ಷೇತ್ರ. ಧರ್ಮ ಹಾಗೂ ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜದಲ್ಲಿ ಅನುಷ್ಟಾನಗೊಳಿಸಲು ಶ್ರಮಿಸಿದವರು ಶ್ರೀ ಬಾಲಗಂಗಾಧರನಾಥ ಶ್ರೀಗಳು ಎಂದು ಅಭಿಪ್ರಾಯಪಟ್ಟರು.

ಎಲ್ಲ ಧರ್ಮಗಳೂ ಭ್ರಾತೃತ್ವದ ಸಂದೇಶ ಸಾರುತ್ತವೆ. ಎಲ್ಲರೂ ಸದ್ಗುಣ ಅಳವಡಿಸಿಕೊಳ್ಳಬೇಕು. ಸತ್ಕಾರ್ಯ ಮಾಡಿ, ಸತ್ಪುರಷರಾಗಿ ಬಾಳಬೇಕು. ಅದನ್ನೇ ಆಚಾರ್ಯತ್ರಯರು ಹೇಳಿದ್ದಾರೆ. ಅನೇಕ ಮಠಾಧೀಶರು ಇಂತಹ ಸಂದೇಶಗಳನ್ನು ನಮಗೆ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಅವರು ಉತ್ತಮವಾದ ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.ಪ್ರತಿ ವರ್ಷ ಭಗವತ್ ಚಿಂತನ ಧರ್ಮ ಸಂಕಥನ ಏರ್ಪಡಿಸಿ ಧಾರ್ಮಿಕ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸುತ್ತಿರುವ ಆದಿಚುಂಚನಗಿರಿ ಪೀಠದ ಕಾರ್ಯ ಅನುಕರಣೀಯ ಎಂದು ಹೇಳಿದರು.ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಎಲ್ಲರೂ ನಮ್ಮವರೂ ಎಂದುಕೊಂಡು, ಒಪ್ಪಿಕೊಂಡು ಬದುಕುವುದರಿಂದ ಜೀವನ ಸಾರ್ಥಕವಾಗುತ್ತದೆ. ಎಲ್ಲ ಧರ್ಮಗಳನ್ನೂ ಪ್ರೀತಿಸಬೇಕು ಎಂದರು.

ಇದೇ ವೇಳೆ ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಸತ್ಸಂಗ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ನಿಟ್ಟೂರು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುಗ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗನಾಥ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಗೋಕಾಕ್‌ನ ಶ್ರೀ ರವಿಶಂಕರ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.