ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಾಲ್ಯದಲ್ಲಿ ಮಕ್ಕಳು ಒಳ್ಳೆಯ ಸಂಸ್ಕೃತಿ, ಸಂಸ್ಕಾರ ನೀಡುವಲ್ಲಿ ಎಲ್ಲರ ಪಾತ್ರ ಮುಖ್ಯವಾಗಿವೆ. ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿ ದಾನೇಶ ಅವಟಿ ಹೇಳಿದರು.ಬಬಲೇಶ್ವರ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಸೇವಕ್ ಸಂಸ್ಥೆ, ಯುವ ಜನತೆ ಸಬಲೀಕರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಕ್ಕಳು ಇಂದು ಪಾಲಕರ ಅತಿಯಾದ ನಿರೀಕ್ಷೆ ಮತ್ತು ಒತ್ತಡಗಳಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಹೆಚ್ಚು ಅಂಕಗಳಿಸಿ, ಉನ್ನತ ಹುದ್ದೆಯ ನೌಕರಿ ಆಸೆಯಿಂದ ಹಿಂದೆ ಬಿದ್ದು ಪ್ರಾಥಮಿಕ ಹಂತದಲ್ಲಿಯೇ ಬಾಲ್ಯದ ಆಟ, ಮನರಂಜನೆ, ಮನೋವಿಕಾಸದ ಹಾಡು ನೃತ್ಯ, ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ದೊರೆಯದೆ. ಹಾಸ್ಟೆಲ್ ಸಂಸ್ಕೃತಿಯಿಂದ ಪಾಲಕರ ಪ್ರೀತಿ ಮಮಕಾರ ವಂಚಿತರಾಗಿ ಒಂಟಿ ಜೀವನಕ್ಕೆ ಶರಣಾಗುತ್ತಿದ್ದಾರೆ. ಧೈರ್ಯ, ಆತ್ಮವಿಶ್ವಾಸ, ಜೀವನದ ಎಡರು ತೊಡರುಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಬಳಲಿ ಹೋಗುತ್ತಿದ್ದಾರೆ. ಕಾರಣ ಕುಟುಂಬದಲ್ಲಿಯೇ ಆಗಲಿ, ಶಾಲೆಯಲ್ಲಿಯೇ ಆಗಲಿ ಅತಿಯಾದ ಒತ್ತಡ ಹೇರದೆ, ಇಷ್ಟಪಟ್ಟು ಓದುವ ಜೀವನ ಕೌಶಲ್ಯ ಹೊಂದುವ, ಮಕ್ಕಳ ಮಾನಸಿಕ ದೈಹಿಕ, ಬೌದ್ಧಿಕ ವಿಕಾಸಗೊಳಿಸಬೇಕು ಎಂದು ಹೇಳಿದರು.
ಸೇವಕ ಸಂಸ್ಥೆಯ ವಿಮಲಾಕ್ಷಿ ಹಿರೇಮಠ ಮಾತನಾಡಿ, ಸೇವಕ ಸಂಸ್ಥೆ ಮಹಿಳೆಯರ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಬಬಲೇಶ್ವರ ತಾಲೂಕಿನ ಹದಿನೈದು ಗ್ರಾಮ ಪಂಚಾಯತಿಗಳಲ್ಲಿ ಸುಮಾರು ಐವತ್ತೆರಡು ಹಳ್ಳಿಗಳಲ್ಲಿ ಅಪಾಯದ ಅಂಚಿನಲ್ಲಿರುವ ಮಹಿಳೆಯರ, ಮಕ್ಕಳಿಗೆ ಶಿಕ್ಷಣ, ಕಾನೂನು, ಆರೋಗ್ಯ, ಪರಿಸರ ಸ್ವಚ್ಛತೆ ಇತ್ಯಾದಿ ವಿಷಯಗಳ ಕುರಿತು ತಿಳುವಳಿಕೆ ನೀಡಿ ತನ್ನದೇ ಕೊಡುಗೆ ನೀಡುತ್ತಿದೆ ಎಂದರು. ಆಪ್ತ ಸಮಾಲೋಚಕಿ ಅಶ್ವಿನಿ.ಆರ್.ಕೋಟಿ, ಪ್ರೇಮಾ ದೊಡ್ಡಮನಿ ಮುಂತಾದವರು ಇದ್ದರು.