ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

| Published : Mar 18 2025, 12:31 AM IST

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಪಾವಗಡ

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೂ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಆರೋಪಿಸಿದ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆಸ್ಪತ್ರೆ ಆಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಈ ವೇಳೆ ಮಾತನಾಡಿದ ಮುಖಂಡ ರವಿ, ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಯಾಗಿರುವ ಡಾ.ಕಿರಣ್‌ ಎನ್ನುವರು ಕಳೆದ 10ವರ್ಷದಿಂದ ಆಸ್ಪತ್ರೆಯಲ್ಲಿಯೇ ಬಿಡುಬೀಟಿದ್ದು ವರ್ಗಾವಣೆ ಆಗಿದ್ದರೂ ರಾಜಕೀಯ ಪ್ರಭಾವ ಬಳಿಸಿ ಮತ್ತೆ ಇದೇ ಸರ್ಕಾರಿ ಆಸ್ಪತ್ರೆಗೆ ನಿಯೋಜಿತರಾಗುವ ಮೂಲಕ ಆಸ್ಪತ್ರೆಯನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗುತ್ತಿರುವ ಪರಿಣಾಮ ಇಲ್ಲಿನ ಆಸ್ಪತ್ರೆಗೆ ವೈದ್ಯರು ಹಾಗೂ ಬೇರೆ ಕಡೆಯಿಂದ ಸಿಬ್ಬಂದ ಇಲ್ಲಿಗೆ ವರ್ಗಾವಣೆ ಆಗಿ ಬರಲು ಹಿಂಜರಿಕೆ ಪಡುತ್ತಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ವಿವಿಧ ವಿಭಾಗದ 17ಮಂದಿ ವೈದ್ಯರ ಪೈಕಿ ಕೇವಲ ಮೂರು ಮಂದಿ ವೈದ್ಯರು ಕರ್ತವ್ಯ ನಿರತರಾಗಿದ್ದಾರೆ. ಹೃದಯ ತಪಾಸಣೆ, ನರರೋಗ, ಮೂಳೆ, ಕಣ್ಣು ಮೂಗು ಕಿವಿ ಹಾಗೂ ಇತರೆ ಯಾವುದೇ ವಿಭಾಗದಲ್ಲಿ ತಜ್ಞ ವೈದ್ಯರಿಲ್ಲ. ಸಮರ್ಪಕ ವೈದ್ಯರಿಲ್ಲದ ಕಾರಣ ನಿತ್ಯ ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳು ತೀವ್ರ ಪರದಾಟ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಕಳೆದ ಮೂರು ವರ್ಷದಿಂದ ರೋಗಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗೆ ಸರಬರಾಜು ಆಗಿದ್ದ ಔಷಧಿ ವಿತರಿಸುವ ಬದಲು ಚೀಟಿ ಬರೆದುಕೊಟ್ಟು ಖಾಸಗಿ ಮೆಡಿಕಲ್‌ ಸಂಟರ್‌ಗಳಿಂದ ಔಷಧಿ ಖರೀದಿಸಲು ರೋಗಿಗಳಿಗೆ ಸೂಚಿಸುವ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ. ಹಾಗಾದರೆ ಆಸ್ಪತ್ರೆಗೆ ಪೂರೈಕೆ ಅಗುವ ಔಷಧಿ ಎನಾಗುತ್ತಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಡಾ.ವೆಂಕಟರಾಮಯ್ಯ ಮಾತನಾಡಿ , ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಟ ಸಾಮಾನ್ಯವಾಗಿದೆ. ಆಸ್ಪತ್ರೆಯಲ್ಲಿ ಸಿಗುವ ಸರ್ಕಾರದ ಸೌಲಭ್ಯಗಳನ್ನು ಬಡ ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಜನಔಷಧಿ ಕೇಂದ್ರ ತೆರೆದು ನಿರಂತರವಾಗಿ ಸೇವೆ ಕಲ್ಪಿಸಬೇಕು. ತಾಯಿ ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿರುವ ಹಳೇ ಆಸ್ಪತ್ರೆಯನ್ನು ದುರಸ್ತಿಗೊಳಿಸಿ ನವೀಕರಿಸುವ ಮೂಲಕ ಈ ಕಟ್ಟಡದಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದಿಂದ ನೀಡುತ್ತಿರುವ ಔಷಧಿಗಳನ್ನು ಹೊರತುಪಡಿಸಿ ಹೊರಗಡೆ ಖಾಸಗಿ ಮೆಡಿಕಲ್‌ ಸೆಂಟರ್ಗಳಿಂದ ಔಷಧಿ ತರಿಸುವುದು ಗಮನಕ್ಕೆ ಬಂದಿದ್ದು ಕೂಡಲೇ ನಿಲ್ಲಿಸಬೇಕು. ಅಂತಹ ವೈದ್ಯರ ವಿರುದ್ಧ ಕ್ರಮ ಜರುಗಿಸಿ ಸರ್ಕಾರದಿಂದ ವಿತರಣೆ ಆಗುವ ಔಷಧಿಗಳನ್ನು ರೋಗಿಗಳಿಗೆ ವಿತರಿಸಬೇಕೆಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಶ್ರೀರಾಮಗುಪ್ತ, ಮಾಧವರೆಡ್ಡಿ, ಶಿವಕುಮಾರ್‌ ಸಾಕೇಲ್‌, ಕೋಟಗುಡ್ಡ ನಾರಾಯಣಪ್ಪ, ದೊಮ್ಮತಮರಿ ಕೃಷ್ಣಪ್ಪ,ಹನುಮಂತರೆಡ್ಡಿ, ಪ್ರಸನ್ನ ಗೋಲ್ಡನ್‌ ಮಂಜು ಇತರರಿದ್ದರು.