ಯಲಬುರ್ಗಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಪದೇ ಪದೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಿವಿಧ ರೀತಿಯ ಸಂಚು ರೂಪಿಸಿ, ಅವಮಾನ ಮಾಡುವುದನ್ನು ಖಂಡಿಸಿ, ಪಟ್ಟಣದಲ್ಲಿ ಬಿಜೆಪಿ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಪ್ರಕಾಶ ನಾಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಹಿರಿಯ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿ ಮೋದಿ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡುತ್ತಾರೆ. ಕಳೆದ ವಾರ ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗ ರಾಹುಲ್ ತಮ್ಮ ಪಕ್ಷದ ಮಹಿಳಾ ಸಂಸದರ ಮೂಲಕ ಪ್ರಧಾನಮಂತ್ರಿಗೆ ದೈಹಿಕವಾಗಿ ಹಲ್ಲೆ ನಡೆಸಲು ಷಡ್ಯಂತ್ರ ರೂಪಿಸಿತ್ತು ಎಂದು ಪತ್ರಿಕೆಗಳಲ್ಲಿ ವರದಿ ಆಗಿವೆ. ರಾಹುಲ್ ನಡೆ ಸರಿಯಲ್ಲ ಎಂದರು.

ಬಿಜೆಪಿ ತಾಲೂಕು ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಕಾಂಗ್ರೆಸ್ ನಾಯಕರು ರೂಪಿಸಿರುವ ಸಂಚಿನ ಭಾಗವಾಗಿ ಫೆ. ೮ರಂದು ಕರ್ನಾಟಕ ಯೂತ್ ಕಾಂಗ್ರೆಸ್‌ ಪದಾಧಿಕಾರಿಗಳು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ, ಸುಳ್ಳು ಸುದ್ದಿ ಬಿತ್ತರಿಸುವ ಬ್ಯಾನರನ್ನು ವಿಧಾನಸೌಧದ ಮುಂದೆ ಹಾಕಿದ್ದಾರೆ. ದೇಶದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ೫ನೇ ಸ್ಥಾನದಿಂದ ೩ನೇ ಸ್ಥಾನಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ಅವಮಾನಿಸುತ್ತಿರುವ ಕಾಂಗ್ರೆಸ್ ನಾಯಕರ ನಡೆ ಖಂಡನೀಯ ಎಂದರು.

ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಸಂತೋಷಿಮಾ ಜೋಶಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಿರುವುದನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕ ಖಂಡಿಸುತ್ತದೆ. ಕಾಂಗ್ರೆಸ್ ನಾಯಕರು ಹೀಗೆ ಮುಂದುವರಿದರೆ ಮಹಿಳಾ ಮೋರ್ಚಾದಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಮುಖಂಡರಾದ ಅಮರೇಶ ಹುಬ್ಬಳ್ಳಿ, ಬಸವರಾಜ ಗುಳಗುಳಿ, ಬಸವರಾಜ ಹಾಳಕೇರಿ, ಕರಿಬಸಯ್ಯ ಬಿನ್ನಾಳ, ಸಂಗಪ್ಪ ಜೋಗಣ್ಣನವರ, ದೊಡ್ಡಯ್ಯ ಗುರುವಿನ, ಕಲ್ಲಪ್ಪ ಕರಮುಡಿ, ಅಶೋಕ ಅರಕೇರಿ, ವಸಂತ‌ ಭಾವಿಮನಿ,‌ ಈರಪ್ಪ ಬಣಕಾರ, ಶಂಕರ ಭಾವಿಮನಿ, ಕಳಕಪ್ಪ ತಳವಾರ, ಬಾಪುಗೌಡ ಪಾಟೀಲ್, ಜಗದೀಶ ಸೂಡಿ, ಗೌತಮ ಜೋಶಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.