ಸಮಾಜದಲ್ಲಿ ಜಾತಿ ತಾರತಮ್ಯದ ಉಗಮಕ್ಕೆ ಶ್ರೇಷ್ಠ, ಕನಿಷ್ಟತೆಯ ವ್ಯಸನದ ಆರಂಭಕ್ಕೆ ಕಾರಣವಾದ ಮೂಲ ವ್ಯವಸ್ಥೆ ಕಾಲ ಕಾಲಕ್ಕೆ ಸತೀಶ ಜಾರಕಿಹೊಳಿ ಪ್ರಶ್ನಿಸುತ್ತಲೇ ಬಂದಿದ್ದಾರೆ
ಹರಪನಹಳ್ಳಿ: ಸಚಿವ ಸತೀಶ ಜಾರಕಿಹೊಳಿ ನಿವಾಸಗಳ ಮೇಲಿನ ಜಾರಿ ನಿರ್ದೆಶನಾಲಯ (ಇಡಿ) ನಡೆಸಿದ ದಾಳಿ ಖಂಡಿಸಿ ಇಲ್ಲಿಯ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹರಪನಹಳ್ಳಿ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ಡಾ. ಬಿ.ಆರ್.ಅಂಬೇಡ್ಕರ (ಐ.ಬಿ) ವೃತ್ತದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಇಡಿ ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ವಿಪಕ್ಷ ನಾಯಕರನ್ನು ಹಾಗೂ ವಿಶೇಷವಾಗಿ ದಲಿತ,ಎಸ್ಸಿ,ಎಸ್ಟಿ ಮತ್ತು ಒಬಿಸಿ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಬೆದರಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.ಸಮಾಜದಲ್ಲಿ ಜಾತಿ ತಾರತಮ್ಯದ ಉಗಮಕ್ಕೆ ಶ್ರೇಷ್ಠ, ಕನಿಷ್ಟತೆಯ ವ್ಯಸನದ ಆರಂಭಕ್ಕೆ ಕಾರಣವಾದ ಮೂಲ ವ್ಯವಸ್ಥೆ ಕಾಲ ಕಾಲಕ್ಕೆ ಸತೀಶ ಜಾರಕಿಹೊಳಿ ಪ್ರಶ್ನಿಸುತ್ತಲೇ ಬಂದಿದ್ದಾರೆ, ಅದು ಈಗ ನಾಡಿನ ರಾಜಕೀಯ ಪರಿಭಾಷೆಯಾಗಿ ಬದಲಾಗುತ್ತಿದೆ ಕೂಡ ಇದಕ್ಕೆ ಬೆದರಿಯೇ ದೆಹಲಿಯ ಪೇಶ್ವೆಗಳು ಈಗ ಸತೀಶ ಜಾರಕಿಹೊಳಿಯವರನ್ನು ನಿಯಂತ್ರಿಸಲಿಕ್ಕೆ ದಾಳಿಯ ದಾಳ ಉರುಳಿಸಿದ್ದಾರೆ, ಇದು ನಾಡಿನ ಸಾಮಾಜಿಕ ನ್ಯಾಯದ ಹೊಸ ರಾಜಕೀಯ ದಿಕ್ಸೂಚಿಯ ಮೇಲಿನ ಅತಿ ದೊಡ್ಡ ದಾಳಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿಯಾಗಬಹುದು ಎಂಬ ಕಾರಣಕ್ಕೆ ಕೇಂದ್ರದ ಬಿಜೆಪಿ ನಾಯಕರು ಇಡಿ ದುರ್ಬಳಕೆ ಮಾಡಿಕೊಂಡು ಸತೀಶ ಜಾರಕಿಹೊಳಿಯವರನ್ನು ಗುರಿಯಾಗಿಸಿದ್ದಾರೆ, ಇದಕ್ಕೆ ನಾವುಗಳು ಹೆದರವುದಿಲ್ಲ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತಹ ತೀವ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ .ಹಾಲೇಶ, ಜಿಪಂ ಮಾಜಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಪಿ.ಟಿ. ಭರತ್, ಶಶಿಧರ ಪೂಜಾರ, ಯರಬಳ್ಳಿ ಉಮಾಪತಿ, ತೆಲಿಗಿ ಉಮಾಕಾಂತ, ಎಲ್. ಹನುಮಂತಪ್ಪ, ಮುತ್ತಿಗೆ ಜಂಬಣ್ಣ, ಅರಸೀಕೆರೆ ಬಿ. ರಾಮಣ್ಣ, ಲಕ್ಷ್ಮೀ ಚಂದ್ರಶೇಖರ, ಎ. ಮೂಸಾಸಾಹೋಬ್, ಭರತೇಶ, ಜಾಕೀರ, ಬಾಣದ ಅಂಜಿನಪ್ಪ, ರವಿ ಬೆಂಡಿಗೇರಿ, ಸತ್ತಾರ ಸಾಹೇಬ್, ಕುಂಚೂರು ಲಕ್ಷ್ಮಣ, ಗಿಡ್ಡಳ್ಳಿ ನಾಗರಾಜ, ತೆಲಿಗಿ ಯೋಗೀಶ, ನಿಟ್ಟೂರು ಹನುಮಂತಪ್ಪ, ಟಿ.ಕೆಂಚಪ್ಪ, ತಿಮ್ಮನಾಯ್ಕ, ತಿಪ್ಪನಾಯಕನಹಳ್ಳಿ ತಿಮ್ಮಣ್ಣ ಇತರರು ಪಾಲ್ಗೊಂಡಿದ್ದರು.