ಸಾರಾಂಶ
- ಜಿಲ್ಲಾಡಳಿತದ ವಿರುದ್ಧ ಅತ್ತಿಗುಂಡಿಯಲ್ಲಿ ಪ್ರತಿಭಟನೆ, ವಾಹನಗಳು, ಅಂಗಡಿಗಳು ಸ್ವಯಂ ಪ್ರೇರಿತ ಬಂದ್,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಳ್ಳಯ್ಯನಗಿರಿ ಮತ್ತು ಐ.ಡಿ.ಪೀಠ ವ್ಯಾಪ್ತಿಯ ನಿವಾಸಿಗಳಿಗೆ ಪಾಸ್ ವಿತರಿಸುವ ನಿರ್ಧಾರ ಖಂಡಿಸಿ ಅತ್ತಿಗುಂಡಿ, ಮಹಲ್, ಬಿಸಗ್ನಿ ಮಠ, ಕೆಸವಿನಮನೆ, ಪಂಡರವಳ್ಳಿ, ಉಕುಡ, ಚಂದ್ರಗಿರಿ, ಗೌರಿಶಂಕರದ ನೂರಾರು ಗ್ರಾಮಸ್ಥರು ಶುಕ್ರವಾರ ಅತ್ತಿಗುಂಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ವಾಹನ ಚಾಲಕರು, ವರ್ತಕರು ಅತ್ತಿಗುಂಡಿಯಲ್ಲಿ ಸ್ವಯಂಪ್ರೇರಿತ ಬಂದ್ಗೊಳಿಸಿ. ನಂತರ ಗ್ರಾಮ ಪಂಚಾಯಿತಿ ಕಚೇರಿ ವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಪ್ರವೇಶ ಶುಲ್ಕ ಮತ್ತು ಪಾಸ್ ಕೊಡುವ ನಿರ್ಧಾರವನ್ನು ಕೂಡಲೇ ಕೈಬಿಡ ಬೇಕು ಎಂದು ಪಿಡಿಒ ಮಂಜುನಾಥ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಗ್ರಾಮಸ್ಥರು ಮಾತನಾಡಿ ಪಾಸ್ ವಿತರಿಸುವ ಸಂಬಂಧ ಗಿರಿ ಪ್ರದೇಶ ನಿವಾಸಿಗಳ ಜೊತೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳುವ ಬದಲು, ಏಕಾಏಕಿ ಪಾಸ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಗ್ರಾಮಾಡಳಿತ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರೂ ಜಿಲ್ಲಾಧಿಕಾರಿಗಳು ದಿಢೀರನೆ ಸ್ಥಳೀಯರಿಗೆ ಪಾಸ್ ಕಡ್ಡಾಯ ಗೊಳಿಸುವುದು ಸಮಂಜಸವಲ್ಲ ಎಂದು ಹೇಳಿದರು.ಎನ್ಎಂಡಿಸಿ ಚೆಕ್ಪೋಸ್ಟ್ನಿಂದ ಮುಂದೆ ಸುಮಾರು ಎರಡು ಸಾವಿರ ಕುಟುಂಬಗಳು ವಾಸವಾಗಿವೆ. ಮದುವೆ ಕಾರ್ಯ ಅಥವಾ ಸಾವು-ನೋವುಗಳು ಸಂಭವಿಸಿದರೆ ದೂರದ ಊರಿನಿಂದ ಬರುವಂಥ ಬಂಧುಗಳು, ಸ್ನೇಹಿತರು ಪಾಸ್ನಲ್ಲಿಯೇ ಆಗಮಿಸಬೇಕೇ ಎಂದು ಪ್ರಶ್ನಿಸಿದ ಅವರು, ಆ ರೀತಿ ನಿರ್ಣಯ ಕೈಗೊಂಡಲ್ಲಿ ಯಾವುದೇ ಕಾರ್ಯ ನಡೆದರೂ ಚೆಕ್ಪೋಸ್ಟ್ ನಲ್ಲಿ ಕುಟುಂಬಸ್ಥರು ಠಿಕಾಣಿ ಹೂಡಬೇಕಾಗುತ್ತದೆ ಎಂದರು.ಗಿರಿಭಾಗಕ್ಕೆ ದಿನಕ್ಕೆ ಒಂದು ಬಸ್ಸಿನ ವ್ಯವಸ್ಥೆಯಿದ್ದು ಈ ಹಿಂದಿನಂತೆ ಖಾಸಗೀ ಬಸ್ಗಳ ಸಂಚಾರವಿಲ್ಲ. ಇದನ್ನು ಹೊರತು ಪಡಿಸಿ ಉಳಿದಂತ ಗ್ರಾಮಗಳಿಗೆ ಬಹುತೇಕ ಸ್ವಂತ ವಾಹನಗಳಲ್ಲಿ ತೆರಳಬೇಕಾಗಿದೆ. ಜೊತೆಗೆ ಈ ವ್ಯಾಪ್ತಿಯಲ್ಲಿ ತೋಟ, ಕಟ್ಟಡ ಅಥವಾ ಇನ್ನಿತರೆ ಕೆಲಸಗಳಿಗೆ ತೆರಳಲು ಸ್ಥಳೀಯರಿಗೆ ಪಾಸ್ ಕಡ್ಡಾಯವಾದರೆ ಜೀವನ ರೂಪಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ಹೇಳಿದರು.ಪರಿಸರ ಕಾಳಜಿ ದೃಷ್ಟಿಯಿಂದ ಜಿಲ್ಲಾಡಳಿತ ಆದೇಶದಂತೆ ಗಿರಿಭಾಗದ ಅಂಗಡಿಗಳಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ಮಾರಾಟಕ್ಕೆ ಕಡಿವಾಣ ಹಾಕಿದೆ. ಆದರೆ ಸ್ಥಳೀಯರು ತಮ್ಮ ಮನೆಗಳಿಗೂ ತೆರಳಲು ಅಪ್ಪಣೆ ಪಡೆಯಬೇಕೇ ಎಂದ ಅವರು, ಈ ನಿರ್ಣಯ ಕೇವಲ ಗುಬ್ಬಿ ಮೇಲೆ ಬ್ರಹ್ಮಸ್ತ್ರದಂತಾಗಿದ್ದು ಬಲಾಢ್ಯ ರೆಸಾರ್ಟ್ ಹಾಗೂ ಎಸ್ಟೇಟ್ ಮಾಲೀಕರಿಗೆ ಅನ್ವಯಿಸು ವುದಿಲ್ಲ ಎಂದರು.
ಪ್ರವಾಸಿಗರು ಗಿರಿಪ್ರದೇಶ ಭೇಟಿ ನೀಡಲು ಜಿಲ್ಲಾಡಳಿತ ಇಂತಿಷ್ಟು ವಾಹನಗಳ ಸಂಚಾರ ನಿಗಧಿಪಡಿ ಸಿರುವುದು ಉತ್ತಮ ಕೆಲಸ. ಆದರೆ ಈ ಭಾಗದಲ್ಲಿ ಮುಳ್ಳಪ್ಪಸ್ವಾಮಿ, ಸೀತಾಳಯ್ಯನಗಿರಿ, ದತ್ತಾತ್ರೇಯಸ್ವಾಮಿ, ಬಿಸಗ್ನಿಮಠ, ಬೈರೇಶ್ವರ ಬೆಟ್ಟ, ಹೊನ್ನಮ್ಮದೇವಿಹಳ್ಳ, ಮುತ್ತಿನಮ್ಮ ದೇವಾಲಯ, ದರ್ಗಾ ಸೇರಿದಂತೆ ಅನೇಕ ಪವಿತ್ರ ಶ್ರದ್ಧಾಕೇಂದ್ರಗಳಿರುವ ಕಾರಣ ಪಾಸ್ ನಿರ್ಧಾರ ಕೈಬಿಡಬೇಕು ಎಂದರು.ಪ್ರತಿಭಟನೆ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಕುಮಾರ್, ಶಾಂತಕುಮಾರ್, ಸತೀಶ್, ಮುನ್ನ, ಅಬ್ದುಲ್ ಸುಮಾನ್, ಆದಿಲ್, ಬಾಬಿ, ಇಬ್ರಾಹಿಂ, ಮಹಮ್ಮದ್ ಅಪ್ಸರ್, ಸೈಯದ್ ನಜೀಮ್, ಸಿದ್ದಿಕ್, ಉಮೇಶ್, ಸುಂದರೇಶ್, ಹೊನ್ನಪ್ಪ, ನವೀನ್, ನಾಗರಾಜ್, ಸೈಯದ್ ಮುಕ್ಪಾಶ, ಪ್ರೇಮ, ಭರತ್, ಧರ್ಮರಾಜ್, ಚನ್ನಕೇಶವ, ಶಹಬುದ್ಧೀನ್, ಅವಿನಾಶ್ ಹಾಜರಿದ್ದರು.
25 ಕೆಸಿಕೆಎಂ 2ಗಿರಿ ಪ್ರದೇಶದ ನಿವಾಸಿಗಳಿಗೆ ಪಾಸ್ ವಿತರಿಸುವ ನಿರ್ಧಾರ ಖಂಡಿಸಿ ಶುಕ್ರವಾರ ಅತ್ತಿಗುಂಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.