ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗ ಹಾಗೂ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಅರಣ್ಯಾಧಿಕಾರಿಗಳ ದಬ್ಬಾಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆ. 31ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಥಳ ಆಗಮಿಸಿ, ಮನವಿಗೆ ಸ್ಪಂದಿಸುವಂತೆ ಎರಡು ವಿಭಾಗಗಳ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಮನವಿ ಪತ್ರ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ತಾಲೂಕಿನ 3 ಹೋಬಳಿಗಳಲ್ಲಿ ಅರಣ್ಯದಂಚಿನಿಂದ ಸುತ್ತುವರಿದಿದೆ. ಪರಂಪರೆಯಾಗಿ ಅನಾದಿಕಾಲದಿಂದಲೂ ವ್ಯವಸಾಯ ಹಾಗೂ ಹೈನುಗಾರಿಕೆ ಮಾಡಿಕೊಂಡು ಬಂದಿರುವ ಬಡ ರೈತ ಕುಟುಂಬಗಳಿವೆ. ಕಾಡಂಚಿನಲ್ಲಿ ವ್ಯವಸಾಯ ಹಾಗೂ ನಾಟಿ ಚಳಿ ಹಸುಗಳನ್ನು ನಂಬಿ ಜೀವಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಚಿವರು ದಿನಕೊಂದು ಮಾಡುವ ಆದೇಶ ಅವೈಜ್ಞಾನಿಕವಾಗಿದೆ. ಅರಣ್ಯದಂಚಿನಲ್ಲಿ ವಾಸಿಸುವ ಜನತೆಗೆ ಕಾನೂನಿನ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ. ಜೊತೆಗೆ ಮಲೆ ಮಾದೇಶ್ವರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡುವುದನ್ನು ರದ್ದು ಮಾಡಬೇಕು. ಅರಣ್ಯದೊಳಗೆ ರೈತರು ತಲತಲಾಂತರದಿಂದ ಜಾನುವಾರುಗಳನ್ನು ಮತ್ತು ಮೇಕೆ ಕುರಿಗಳನ್ನು ಮೆಯಿಸಿಕೊಂಡು ಯಾವುದೇ ಪ್ರಾಣಿ ಪಕ್ಷಿಗಳಿಗೆ ತೊಂದರೆ ನೀಡದೆ ಅರಣ್ಯವನ್ನು ಕಾಯುತ್ತಿದ್ದಾರೆ. ಹೀಗಾಗಿ ಅದಕ್ಕೂ ಅರಣ್ಯ ಇಲಾಖೆ ನಿರ್ಬಂಧ ಏರಿರುವುದನ್ನು ತೆರವುಗೊಳಿಸಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಜಮೀನುಗಳಲ್ಲಿ ಬೆಳೆ ನಷ್ಟ ಜೊತೆಗೆ ಕ್ರೂರ ಪ್ರಾಣಿಗಳಿಂದ ಸಾಕುಪ್ರಾಣಿಗಳು ಸಹ ಕೊಂದು ತಿನ್ನುತ್ತಿವೆ ಎಂದರು.
ಈಗ ನೀಡುತ್ತಿರುವ ಪರಿಹಾರ ಹೆಚ್ಚುವರಿಯಾಗಿ ನೀಡಬೇಕು. ಜೊತೆಗೆ ಸೋಲಾರ್ ಬೇಲಿ ರೈಲ್ವೆ ಬ್ಯಾರಿಕೆಟ್ ನಿರ್ಮಾಣ ಮಾಡಿ ಅರಣ್ಯದಂಚಿನ ಗಡಿ ಯುದ್ದಕ್ಕೂ ಭದ್ರತೆ ನೀಡಬೇಕು. ಕಾಡುಪ್ರಾಣಿಗಳು ಬರದಂತೆ ತಿರುಪತಿ ಗ್ರಾಮಗಳ ರೈತರ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದನ್ನು ರೈತರಿಗೆ ವಾಪಸ್ ನೀಡಬೇಕು.ಹೂಗ್ಯಂ ಗ್ರಾಮದ ರೈತರ ಜಮೀನಿಗೆ ಆನೆ ದಾಳಿ ಮಾಡಿದಾಗ ನಿರ್ಲಕ್ಷ್ಯವಹಿಸಿದ್ದ ಅರಣ್ಯ ಇಲಾಖೆಯ ನೌಕರರಿಗೆ ರೈತರು ಮಹಿಳೆಯರು ತರಾಟೆ ತೆಗೆದುಕೊಂಡಾಗ ಅವರ ಮೇಲೆ ಪ್ರಕರಣ ದಾಖಲಾಗಿರುವುದನ್ನು ವಾಪಸ್ ಪಡೆಯಬೇಕು. ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರು ರೈತ ಮಹಿಳಾ ವಿಭಾಗದ ಪ್ರತಿಯೊಬ್ಬ ಸದಸ್ಯರು ಪ್ರತಿಭಟನೆ ವೇಳೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.