ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

| Published : Mar 26 2025, 01:32 AM IST

ಸಾರಾಂಶ

ಉಪಮುಖ್ಯಮಂತ್ರಿಗಳು ಸಾಂವಿಧಾನಿಕ ಜವಾಬ್ದಾರಿಯಲ್ಲಿದ್ದುಕೊಂಡು ಮುಸ್ಲಿಂರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ

ಹಳಿಯಾಳ: ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ 4%ರಷ್ಟು ಮೀಸಲಾತಿ ನೀಡಿದ ರಾಜ್ಯ ಸರ್ಕಾರದ ತುಷ್ಟೀಕರಣದ ನೀತಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂವಿಧಾನ ಬದಲಾಯಿಸುವ ಹೇಳಿಕೆ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಕಾರ್ಯಕ್ರಮ ಖಂಡಿಸಿ ಮಂಗಳವಾರ ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ವನಶ್ರೀ ವೃತದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ, ಉಪಮುಖ್ಯಮಂತ್ರಿಗಳು ಸಾಂವಿಧಾನಿಕ ಜವಾಬ್ದಾರಿಯಲ್ಲಿದ್ದುಕೊಂಡು ಮುಸ್ಲಿಂರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಎಂದರು.

ಬಿಜೆಪಿಯ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸಭೆಯ ಅಧ್ಯಕ್ಷರು ಪಕ್ಷಪಾತಿ ಧೋರಣೆ ಅನುಸರಿಸಿ ವಿಪಕ್ಷದ 18 ಶಾಸಕರನ್ನು ಅಸಂವಿಧಾನಿಕವಾಗಿ ಅಮಾನತ್ತುಗೊಳಿಸಿ, ಪ್ರಜಾಪ್ರಭುತ್ವದ ವಿರೋಧಿ ಧೋರಣೆ ತೋರಿಸಿದ್ದು ಇದನ್ನು ಬಿಜೆಪಿ ಖಂಡಿಸುತ್ತಿದೆ ಎಂದರು.

ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ಧಣ್ಣನವರ, ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಶಿವಾಜಿ ನರಸಾನಿ, ಗಣಪತಿ ಕರಂಜೇಕರ, ಯಲ್ಲಪ್ಪ ಹೊನ್ನೋಜಿ, ಯಲ್ಲಪ್ಪ ಹೆಳವರ, ಅನಿಲ ಮುತ್ನಾಳೆ, ಉದಯ ಜಾಧವ, ಪಾಂಡು ಪಾಟೀಲ, ಆನಂದ ಕಂಚನಾಳಕರ, ಕುಮಾರ ಕಲಬಾವಿ, ತುಕಾರಾಮ್ ಗೌಡಾ, ವಿಜಯಕುಮಾರ ಬೊಬಾಟೆ, ಚಂದ್ರಕಾಂತ ಕಮ್ಮಾರ ಹಾಗೂ ಇತರರು ಇದ್ದರು.