ಶಾಸಕರ ವಿರೋಧಿ ನೀತಿ ಖಂಡಿಸಿ ಅಡ್ಡೆಗಾರರ ಪ್ರತಿಭಟನೆ

| Published : Sep 12 2024, 01:47 AM IST

ಶಾಸಕರ ವಿರೋಧಿ ನೀತಿ ಖಂಡಿಸಿ ಅಡ್ಡೆಗಾರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಪುರಾತನ ಕಾಲದಿಂದಲೂ ಸೇವೆ ಸಲ್ಲಿಸುತ್ತಿರುವ ಅಡ್ಡೆಗಾರರ ವಿರುದ್ಧ ಟೆಂಡರ್ ಪ್ರಕ್ರಿಯೆ ಕರೆದಿರುವುದನ್ನು ವಿರೋಧಿಸಿ ಅಡ್ಡೆಗಾರರು ಹಾಗೂ ೮ ಮೂಲೆಯ ನಾಡ ಪಟೇಲರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸಿದರು. ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ತಲೆತಲಾಂತರದಿಂದ ನಡೆದುಕೊಂಡುಬಂದ ಸಂಪ್ರದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಭಕ್ತರಿಗೆ ಹಾಗೂ ಅಡ್ಡೆಗಾರರಿಗೆ ತೊಂದರೆ‌ ಕೊಡುತ್ತಿರುವ ಶಾಸಕರ ವಿರುದ್ಧ ತಾಲೂಕಿನ ಜನತೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್‌ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ತಲೆತಲಾಂತರದಿಂದ ನಡೆದುಕೊಂಡುಬಂದ ಸಂಪ್ರದಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಭಕ್ತರಿಗೆ ಹಾಗೂ ಅಡ್ಡೆಗಾರರಿಗೆ ತೊಂದರೆ‌ ಕೊಡುತ್ತಿರುವ ಶಾಸಕರ ವಿರುದ್ಧ ತಾಲೂಕಿನ ಜನತೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್‌ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಪುರಾತನ ಕಾಲದಿಂದಲೂ ಸೇವೆ ಸಲ್ಲಿಸುತ್ತಿರುವ ಅಡ್ಡೆಗಾರರ ವಿರುದ್ಧ ಟೆಂಡರ್ ಪ್ರಕ್ರಿಯೆ ಕರೆದಿರುವುದನ್ನು ವಿರೋಧಿಸಿ ಅಡ್ಡೆಗಾರರು ಹಾಗೂ ೮ ಮೂಲೆಯ ನಾಡ ಪಟೇಲರು ಪ್ರತಿಭಟನೆಯಲ್ಲಿ ಪಾಲ್ಗೊಂಡು ನಾಗರಿಕರ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ೯೦೦ ವರ್ಷಗಳ ಇತಿಹಾಸವಿರುವ ವಿಶ್ವವಿಖ್ಯಾತ ಶ್ರೀ ಚನ್ನಕೇಶವ ದೇಗುಲಕ್ಕೆ ಪೂರ್ವಿಕರ ಕಾಲದಿಂದಲೂ ಇಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ಅಡ್ಡೆಗಾರರ, ಯಜ್ಞ ಮಣೆಗಾರರು, ನಾಡ ಪಟೇಲರು, ನಗಾರಿ ಬಾರಿಸುವವರು ಸೇರಿದಂತೆ ಹತ್ತಾರು ರೀತಿಯಲ್ಲಿ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ದಿಢೀರನೆ ಶಾಸಕರು ರಾಜಕೀಯವನ್ನು ತಂದು ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗುತ್ತಾರೆ. ತಾಲೂಕಿನ ಜನಪ್ರತಿನಿಧಿಗಳಾದ ನೀವು ಇಲ್ಲಿಯ ಆಚಾರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಹಿರಿಯರ ಸಭೆಯನ್ನು ನಡೆಸಿ ಚರ್ಚಿಸಬೇಕಿತ್ತು. ಆದರೆ ಅದನ್ನು ಬಿಟ್ಟು ರಾಜಕೀಯ ಉದ್ದೇಶ ಇಟ್ಟುಕೊಂಡು ದೇಗುಲದಲ್ಲಿನ ಆಚಾರ ವಿಚಾರಗಳಿಗೆ ತೊಂದರೆ ಕೊಡಬಾರದು.

ನಮ್ಮ ನಾಯಕರಾದ ಬಿ ಶಿವರಾಂ ಅವರು ಸಂಬಂಧಪಟ್ಟ ಮಂತ್ರಿಗಳ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಆದೇಶ ಪತ್ರ ತಂದಿದ್ದರೂ ಶಾಸಕರು ಇದನ್ನು ನಿರ್ಲಕ್ಷ್ಯ ಮಾಡಿ ಇಲ್ಲಿಯ ಆಡಳಿತ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗೆ ಆದೇಶದ ಪತ್ರದ ಬಗ್ಗೆ ಮಾಹಿತಿ ಕೊಟ್ಟಿರುವುದಿಲ್ಲ. ಇವರ ಹಿಂಬಾಲಕರಿಗೆ ಟೆಂಡರ್‌ ಅವಕಾಶ ಕಲ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಡ್ಡೆಗಾರರ ಸಂಘದ ಅಧ್ಯಕ್ಷ ಶೈಲೇಶ್ ಮಾತನಾಡಿ, ನಾಲ್ಕು ಮೂಲೆ ಅಡ್ಡೆಗಾರರಾದ ನಾವು ಹಿಂದಿನ ಸಂಪ್ರದಾಯ ಉಳಿಸಿಕೊಳ್ಳಲು ದೇವಾಲಯದ ಅಡ್ಡೆ ಹೊರುವುದು, ರಥ ಕಟ್ಟುವುದು, ಇತರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮನ್ನು ಮೂಲೆಗುಂಪು ಮಾಡಲು ಮೂರು ತಿಂಗಳ ಹಿಂದೆ ಹೊಸ ಆದೇಶವನ್ನು ಯಾವ ರಾಜಕಾರಣಿಗಳು ಮಾಡಿಸಿಕೊಂಡು ಬಂದಿದ್ದಾರೆಂದು ನಮಗೆ ಗೊತ್ತಿಲ್ಲ. ಅದರಂತೆ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ದೇವಾಲಯದ ಹಳೆ ಸಂಪ್ರದಾಯ ಬದಿಗೊತ್ತಿ ಟೆಂಡರ್ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದರು. ಆದ್ದರಿಂದ ಅಡ್ಡೆಗಾರರ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳೆಲ್ಲಾ ಸೇರಿ ತಾಲೂಕು ಕಚೇರಿವರೆಗೂ ನಾವು ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

ದೇಗುಲದ ಆಡಳಿತ ಮಂಡಳಿ ಮಾಜಿ ಧರ್ಮದರ್ಶಿ ಬಿ.ಎಂ ರಂಗನಾಥ್ ಮಾತನಾಡಿ, ಇಲ್ಲಿ ಪ್ರತಿನಿತ್ಯ ಸೇವೆ ಸಲ್ಲಿಸುವ ಅಡ್ಡೆಗಾರರ ಪರವಾಗಿ ನಾವು ಮಾಜಿ ಸಚಿವರಾದ ಬಿ ಶಿವರಾಂ ಅವರಲ್ಲಿ ಕೇಳಿಕೊಂಡಾಗ ಅವರು ಮುಜರಾಯಿ ಸಚಿವರಿಂದ ದೂರವಾಣಿ ಮೂಲಕ ಮಾತನಾಡಿ, ಯಾವುದೇ ಕಾರಣಕ್ಕೂ ಹಳೆಯ ಸಂಪ್ರದಾಯವನ್ನು ಮುರಿಯಬಾರದು, ಟೆಂಡರ್ ಕರೆಯಬಾರದು, ದೇಗುಲದ ಪುರಾತನ ಆಚರಣೆಗೆ ಅಡ್ಡಿಪಡಿಸಬಾರದು ಎಂದು ದೂರವಾಣಿ ಮುಖಾಂತರ ಕಮಿಷನ್ ಅವರಿಗೆ ತಿಳಿಸಿರುತ್ತಾರೆ. ಈ ಟೆಂಡರ್‌ ಕರೆಯುವುದಕ್ಕೂ ಮುಂಚೆ ಸ್ಥಳೀಯ ಸಂಪ್ರದಾಯ ಆಚರಣೆ ಮುಂದುವರಿಸಿಕೊಂಡು ಹೋಗಬೇಕು ಎಂದು ಅಡ್ಡೆಗಾರರ ಬೆಳವಣಿಗೆ ಸಹಿಸದ ಕೆಲವರು ಈ ರೀತಿ ಅವರನ್ನು ಮಟ್ಟಹಾಕಲು ಸಂಚು ಮಾಡುತ್ತಿದ್ದು ದೇಗುಲದ ಭಕ್ತರಾದ ನಾವು ಸಹಿಸುವುದಿಲ್ಲ ಎಂದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವಿಜಯಕೇಶವ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಯಾರು ರಾಜಕೀಯ ಪರವಾಗಿ ವಿರೋಧವಾಗಿ ಮಾತಾಡೋದು ತಪ್ಪು. ಇದು ನಮ್ಮ ದೇಗುಲದ ಸಂಪ್ರದಾಯ ಇದರಲ್ಲಿ ಅರ್ಚಕರು, ಅಡ್ಡೆಗಾರರು, ನಾಡ ಪಟೇಲರು ಬರುತಾರೆ ಹಾಗೆ ನಗಾರಿ ಹೊಡೆಯುವ, ಬಾಳೆಕಂಬ ಕತ್ತರಿಸುವವರು ಬರುತ್ತಿರುವುದು ಹಿಂದಿನ ಸಂಪ್ರದಾಯ. ಮೈಸೂರಿನ ಅರಸರೇ ಮ್ಯಾನ್ಯುಯಲ್ ನಲ್ಲಿ ಇದನ್ನು ನಮೂದಿಸಿದ್ದಾರೆ. ಇದು ಕಾನೂನು ಬದ್ದವಾಗಿದ್ದು ಇದನ್ನು ಬಿಟ್ಟರೆ ನಾವು ಕಾನೂನು ಪರವಾಗಿ ಹೋರಾಟ ಮಾಡಬೇಕು. ಇಲ್ಲಿ ಹಬ್ಬ ಜಾತ್ರೆ ನಡೆಯಬೇಕಾದರೆ ಇವರೆಲ್ಲರೂ ಸೇರಿದರೆ ಮಾತ್ರ ಜಾತ್ರೆ ನಡೆಯುತ್ತದೆ. ಜಗಳ ಕಿತ್ತಾಟ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಅಡ್ಡೆಗಾರರು, ಶಾಸಕರು ಎಲ್ಲರೂ ಸೇರಿ ಚರ್ಚೆ ಮಾಡಿ ಇದನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಅಡ್ಡೆಗಾರರ ಸಂಘದ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ನಮ್ಮ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಶ್ರೀ ಚನ್ನಕೇಶವ ದೇಗುಲದಲ್ಲಿ ನಾವು ಹಿಂದಿನಿಂದಲೂ ಒಗ್ಗಟ್ಟಾಗಿ ಅಡ್ಡೆ ಹೊರುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಈ ನಮ್ಮ ಸಂಪ್ರದಾಯಕ್ಕೆ ಯಾರೇ ಕೈಹಾಕಿದಾರೆ ಇದರಿಂದ ಯಾವುದೇ ಕಾರಣಕ್ಕೂ ಒಳ್ಳೆದಾಗಲ್ಲ ಅಧಿಕಾರಿಗಳು ಸಹ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ನಾವು ಯಾವುದೇ ರೀತಿಯಲ್ಲಿ ಸಂಬಳಕ್ಕೆ ಮಾಡದೇ ಭಗವಂತನ ಸೇವೆ ಮಾಡುತ್ತಿದ್ದೇವೆ. ಭಕ್ತರು ಕೊಡುವ ಗೌರವಧನ ಮಾತ್ರ ಪಡೆಯುತ್ತಿದ್ದೇವೆ. ಬೇಲೂಸರಿನ ನಾಲ್ಕು ಮೂಲೆ ಹಳ್ಳಿಯಲ್ಲಿ ಅಡ್ಡೆಗಾರರಿಗೆ ಸಂಬಂಧಿಸಿದ ವಿಚಾರವಲ್ಲ ಇದು ಶ್ರೀ ಚನ್ನಕೇಶವ ಸ್ವಾಮಿ ಭಕ್ತರಿಗೆ ಮಾಡಿದ ಅಪಮಾನ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಗದೀಶ್, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಮೋದ್, ಸ್ಥಳೀಯ ಭಕ್ತಾದಿಗಳು ಎಂಟು ಮೂಲೆ ಅಡ್ಡೆಗಾರರು ಹಾಗೂ ಸಂಘಸಂಸ್ಥೆಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* ಹೇಳಿಕೆ-1

ದೇಗುಲದಲ್ಲಿ ಸಂಪ್ರದಾಯದಂತೆ ಆಚರಣೆಗಳು ಹಿಂದಿನಿಂದ ನಡೆಯುತ್ತಿದ್ದವು. ಆಚರಣೆಗೆ ಧಕ್ಕೆ ತರುವಂತ ಕೆಲಸ ಮಾಡಲು ಶಾಸಕರು, ಕೆಲ ಮುಖಂಡರು ಹೊರಟಿರುವುದು ದುರಾದೃಷ್ಟಕರ.

- ಬಿ.ಎಂ ರಂಗನಾಥ್‌, ದೇಗುಲದ ಆಡಳಿತ ಮಂಡಳಿ ಮಾಜಿ ಧರ್ಮದರ್ಶಿ