ಸುಸ್ಥಿತಿಯಲ್ಲಿದ್ದ ಎಂಸಿಸಿ ಬಿ ಬ್ಲಾಕ್ನ ಪಾರ್ಕ್ ಕಾಂಪೌಂಡನ್ನು ಹಾಳುಗೆಡವಿ, ಹೊಸದಾಗಿ ಕಾಮಗಾರಿ ಕೈಗೊಂಡಿದ್ದನ್ನು ಖಂಡಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು, ಮಕ್ಕಳ ಸಮೇತ ಮಂಗಳವಾರ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದಾರೆ.
- ಬಿಜೆಪಿ ಹೋರಾಟಕ್ಕೆ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು, ಮಕ್ಕಳು ಸಾಥ್ । ಜಿಲ್ಲಾಡಳಿತಕ್ಕೆ ಮನವಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಸುಸ್ಥಿತಿಯಲ್ಲಿದ್ದ ಎಂಸಿಸಿ ಬಿ ಬ್ಲಾಕ್ನ ಪಾರ್ಕ್ ಕಾಂಪೌಂಡನ್ನು ಹಾಳುಗೆಡವಿ, ಹೊಸದಾಗಿ ಕಾಮಗಾರಿ ಕೈಗೊಂಡಿದ್ದನ್ನು ಖಂಡಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು, ಮಕ್ಕಳ ಸಮೇತ ಮಂಗಳವಾರ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು.
ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ನಗರದ ಎಂಸಿಸಿ ಬಿ ಬ್ಲಾಕ್ನ ಕಾಸರ್ ವಿಠ್ಠಲ ಶ್ರೇಷ್ಟಿ ಪಾರ್ಕ್ ಬಳಿ ಸಾರ್ವಜನಿಕ ಪಾರ್ಕನ್ನು ಈಗಾಗಲೇ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿದೆ. ಗಟ್ಟಿಮುಟ್ಟಾದ ಪಾರ್ಕ್ ಗೋಡೆ ಒಡೆದು, ಕಬ್ಬಿಣದ ಗ್ರಿಲ್ ತೆರವು ಮಾಡಿ, ಟ್ರ್ಯಾಕ್ಟರ್ಗಳಲ್ಲಿ ಸಾಗಿಸುತ್ತಿದ್ದಾರೆ. ಯಾವ ಅಧಿಕಾರಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ, ಗುತ್ತಿಗೆದಾರರು ಯಾರು, ಯಾವ ಉದ್ದೇಶಕ್ಕೆ ಕಾಮಗಾರಿ ಮಾಡುತ್ತಿದ್ದಾರೆಂಬ ಮಾಹಿತಿ ಇಲ್ಲ. ಹೊಸ ಕಾಮಗಾರಿ ಹೆಸರಲ್ಲಿ ಹಣ ಲೂಟಿ ಹೊಡೆಯುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು.ಅಭಿವೃದ್ಧಿ ಹೆಸರಲ್ಲಿ ನಗರದ ವೃತ್ತಗಳಲ್ಲಿ ಸೈಜ್ ಕಲ್ಲುಗಳನ್ನು ಹಾಕಿ ಅಂತಾರಾಷ್ಟ್ರೀಯ ಮಾದರಿ ಎನ್ನುತ್ತಿದ್ದಾರೆ. ಉತ್ತಮ ರಸ್ತೆಗಳನ್ನು ತೆರವು ಮಾಡಿ, ಕೋಟಿಗಟ್ಟಲೇ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜನ ಸುಮ್ಮನಿದ್ದಾರೆ. ತಾವೇನೇ ಮಾಡಿದರೂ ನಡೆಯುತ್ತದೆಂದ ಅಹಂನಿಂದ ಮಂತ್ರಿಗಳು, ಜಿಲ್ಲಾಡಳಿತ ವರ್ತಿಸುತ್ತಿರುವುದು ಸರಿಯಲ್ಲ. ತಕ್ಷಣವೇ ಪಾರ್ಕ್ ಸ್ಥಳವನ್ನು ಡಿಸಿ ನೇತೃತ್ವದ ಸ್ವತಂತ್ರ ತಾಂತ್ರಿಕ ಅಧಿಕಾರಿಗಳ ತಂಡದಿಂದ ಪರಿಶೀಲಿಸಬೇಕು. ತನಿಖೆ ಮುಗಿಯುವವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮೂರು ದಿನಗಳಿಂದ ಪ್ರತಿಭಟನೆ, ಆಕ್ಷೇಪ ವ್ಯಕ್ತವಾಗುತ್ತಿದ್ದರೂ ತೋಟಗಾರಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಅಸಡ್ಡೆ ತೋರುತ್ತಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ, ಕಮೀಷನ್ ದಂಧೆ, ಅನುದಾನ ದುರುಪಯೋಗ ಮಾಡಿರುವ ಅನುಮಾನವಿದೆ. ಒಂದುವೇಳೆ ಬುಧವಾರ ಕಾಮಗಾರಿ ತಡೆಯದೇ ಮುಂದುವರಿಸಿದರೆ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ. ಸ್ಥಳದಲ್ಲೇ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡರಾದ ಸುರೇಶ ಗಂಡುಗಾಳೆ, ಆರ್.ಶಿವಾನಂದ, ಶಿವರಾಜ ಪಾಟೀಲ, ತಾರೇಶ ನಾಯ್ಕ, ವಿನಯ್ ದಿಳ್ಯಪ್ಪ, ರುದ್ರೇಶ, ಮಂಜುನಾಥ, ಪದ್ಮನಾಭ ಶೆಟ್ರು, ಹರೀಶ ಶಾಮನೂರು, ಲಿಂಗರಾಜ, ಸಚಿನ್, ಕಿರಣ್ ಇತರರು ಇದ್ದರು.
- - -(ಬಾಕ್ಸ್)
* ತೋಟಗಾರಿಕೆ ಅಧಿಕಾರಿಗೆ ತೀವ್ರ ತರಾಟೆಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳಿಗೆ ಎಸ್ಟಿಮೇಟ್ ಕೇಳಿದಾಗ ಸಚಿವರ ಕಚೇರಿಯಿಂದ ಶಿಫಾರಸು ಬಂದಿತ್ತೆಂದು, ಎಸ್ಟಿಮೇಟ್ನಲ್ಲಿ ₹40 ಲಕ್ಷ ಕಬ್ಬಿಣದ ಗ್ರಿಲ್ ಇಟ್ಟುಕೊಂಡಿದ್ದಾಗಿ ಹೇಳಿದರು. ಕಾಂಪಾಂಡ್ ಪರಿಶೀಲಿಸಿದ್ದಿರಾ? ಶಿಥಿಲವಾಗಿತ್ತೆಂದು ಹೇಳುತ್ತೀರಿ. ಅದಕ್ಕೆ ಸ್ಪ್ರೆಂಥ್ ಟೆಸ್ಟ್ ಸರ್ಟಿಫಿಕೇಟ್ ಮಾಡಿಸಿದ ಪತ್ರ ಕೊಡಿ ಎಂದು ಬಿಜೆಪಿ ಮುಖಂಡ ಪ್ರಸನ್ನಕುಮಾರ ಪ್ರಶ್ನಿಸಿದರು. ಅವರು ಕೇಳಿದ ಯಾವುದೇ ದಾಖಲೆ ಇಲ್ಲವೆಂದು ಅಧಿಕಾರಿ ಒಪ್ಪಿಕೊಂಡರು.
ನೀವೇ ನಿಂತು ಸ್ಥಳ ಪರಿಶೀಲಿಸಿದ ಫೋಟೋ ಕೊಡಿ, ಕೆಲ ಪಿಲ್ಲರ್ ಶಿಥಿಲವಾಗಿದ್ದರೆ, 200 ಮೀಟರ್ಗೆ ಯಾಕೆ ಎಸ್ಟಿಮೇಟ್ ಮಾಡಿದ್ದೀರಿ ಎಂದು ಪ್ರಸನ್ನಕುಮಾರ, ಸುರೇಶ ಗಂಡುಗಾಳೆ, ಶಿವರಾಜ ಪಾಟೀಲ ಪ್ರಶ್ನಿಸಿದರು. ಆಗ ನಿರ್ಮಿತಿ ಕೇಂದ್ರದವರು ಕಬ್ಬಿಣವೇನೂ ಹಾಳಾಗಿಲ್ಲವೆಂದು ಸಮರ್ಥಿಸಿಕೊಂಡರು. ಕಬ್ಬಿಣ ಹಾಳಾಗಿಲ್ಲವೆಂದು ಒಪ್ಪಿಕೊಂಡ ಮೇಲೆ 200 ಮೀಟರ್ಗೂ ₹40 ಲಕ್ಷದ ಕಬ್ಬಿಣದ ಬಗ್ಗೆ ಎಸ್ಟಿಮೇಟ್ ಯಾಕೆ ಹಾಕಿದ್ದೀರಿ? ಈ ಬಗ್ಗೆ ತನಿಖೆಯಾಗಬೇಕು. ಇದರಲ್ಲಿ ಯಾರ ಕುಮ್ಮಕ್ಕಿದೆ? ಎಲ್ಲದಕ್ಕೂ ದಾಖಲೆ ಬೇಕು. ಸಚಿವರ ಕಚೇರಿ ಹೆಸರು ಹೇಳಿದ ಅಧಿಕಾರಿಗಳ ತಲೆದಂಡವಾಗಬೇಕು. ಈ ಬಗ್ಗೆ ಜಿಲ್ಲಾ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.- - -
(ಕೋಟ್) ಪಾರ್ಕ್ ಕಾಂಪೌಂಡ್ ಮರು ನಿರ್ಮಾಣದ ಬಗ್ಗೆ ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ, ಟೆಂಡರ್ ಪ್ರಕ್ರಿಯೆ, ಅಂದಾಜು ಪಟ್ಟಿ, ವರ್ಕ್ ಆರ್ಡರ್ ದಾಖಲೆಗಳನ್ನು ಪಾರದರ್ಶಕವಾಗಿ ಪರಿಶೀಲಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಂತ್ರಿಕ ಅಧಿಕಾರಿಗಳ ಸ್ವತಂತ್ರ ತಂಡದಿಂದ ಸ್ಥಳ ಪರಿಶೀಲಿಸಬೇಕು. ಸಾರ್ವಜನಿಕರ ಹಣ ದುರುಪಯೋಗ ಅಥವಾ ನಷ್ಟ ಸಾಬೀತಾದರೆ ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರಿಂದಲೇ ಅಷ್ಟೂ ಹಣ ವಸೂಲಿ ಮಾಡಬೇಕು.- ಕೆ.ಪ್ರಸನ್ನಕುಮಾರ, ಬಿಜೆಪಿ ಮುಖಂಡ, ಪಾಲಿಕೆ ಮಾಜಿ ವಿಪಕ್ಷ ನಾಯಕ.
- - --(ಪೋಟೋ ಇದೆ: -1ಕೆಡಿವಿಜಿ15:)
