ಸಾರಾಂಶ
ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿಗೆ 9 ರು. ಏರಿಸಿದೆ. ಅಷ್ಟೇ ಅಲ್ಲ, 50 ಎಂಎಲ್ ಹಾಲನ್ನು ಕೂಡ ಈಗ ಕಡಿಮೆ ಮಾಡಿ ನಾಗರಿಕರಿಗೆ ಬರೆ ಹಾಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.
ಶಿವಮೊಗ್ಗ: ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿಗೆ 9 ರು. ಏರಿಸಿದೆ. ಅಷ್ಟೇ ಅಲ್ಲ, 50 ಎಂಎಲ್ ಹಾಲನ್ನು ಕೂಡ ಈಗ ಕಡಿಮೆ ಮಾಡಿ ನಾಗರಿಕರಿಗೆ ಬರೆ ಹಾಕಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಲ್ಕೋಹಾಲ್ ದರ ಏರಿಸಿ ಆ ಮೂಲಕ ಸರ್ಕಾರ ನಡೆಸುತ್ತಾ ಇತ್ತು. ಈಗ ಹಾಲಿಗೂ ದರ ಜಾಸ್ತಿ ಮಾಡಿದೆ. ಇದು ಕಾಂಗ್ರೆಸ್ಸಿನ ನೀತಿ ಎಂದು ಟೀಕಿಸಿದರು. ಆಸ್ತಿ ನೋಂದಣಿ ಶುಲ್ಕವನ್ನು ಹೆಚ್ಚಿಸಿದೆ. ಆಸ್ಪತ್ರೆ ಸೇವಾ ಶುಲ್ಕವನ್ನು ಕೂಡ ಜಾಸ್ತಿ ಮಾಡಿದೆ. ಬಡ ಮಕ್ಕಳು ಓದುವ ಸರ್ಕಾರಿ ಕಾಲೇಜು ಶುಲ್ಕದಲ್ಲೂ ಹೆಚ್ಚಳ ಮಾಡಿದೆ. ಮುದ್ರಾಂಕ ಶುಲ್ಕ, ಆಸ್ತಿ ತೆರಿಗೆ, ಬೀಜದ ಮೇಲಿನ ದರ. ಕುಡಿಯುವ ನೀರಿನ ಮೇಲಿನ ತೆರಿಗೆ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ಬಸ್ ದರ ಏರಿಕೆ ಎಲ್ಲಾ ಸೇವಾ ತೆರಿಗೆಗಳಲ್ಲೂ ಹೆಚ್ಚಳವನ್ನು ಮಾಡಿ ಬಡವರ ಜೇಬಿಗೆ ಕತ್ತರಿ ಹಾಕಿದೆ ಎಂದು ಕಿಡಿಕಾರಿದರು. ರಾಜ್ಯದ ಸುಮಾರು 9.4 ಲಕ್ಷ ರೈತರಿಗೆ ಹಾಲಿನ ಪ್ರೊತ್ಸಾಹ ಧನ 657 ಕೋಟಿ ರು. ಪಾವತಿ ಬಾಕಿ ಇದೆ. ಅಗತ್ಯ ವಸ್ತುಗಳ ಬೆಲೆಯನ್ನು ಮನಸ್ಸಿಗೆ ಬಂದಂತೆ ಹೆಚ್ಚಳ ಮಾಡುತ್ತಾ ಬಡವರಿಗೆ ಬರೆ ಎಳೆದಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಬಹುಮತ ಬಂದಿದೆ ಎಂಬ ಒಂದೇ ಕಾರಣದಿಂದ ಲಗಾಮಿಲ್ಲದೆ ವರ್ತಿಸುತ್ತಿದೆ. ಇದನ್ನು ಖಂಡಿಸಿ ಏ.2ರಿಂದ 3ನೇ ತಾರೀಕು ಮಧ್ಯಾಹ್ನದವರೆಗೆ ಜನಾಕ್ರೋಶ ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಹೋ ರಾತ್ರಿ ಧರಣಿ ನಡೆಯಲಿದ್ದು, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಇನ್ನು ಮುಂದೆ ರಾಜ್ಯದಲ್ಲಿ ವಿವಿಧ ರೀತಿಯ ಹೋರಾಟ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ನಾಳಿನ ಹೋರಾಟಕ್ಕೆ ಜಿಲ್ಲೆಯಿಂದ 400 ಜನ ಪ್ರಮುಖ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಏ.7 ರಂದು ಮೈಸೂರಿನಿಂದ ಎರಡನೇ ಹಂತದ ಹೋರಾಟ ಪ್ರಾರಂಭವಾಗಲಿದೆ. ಸರ್ಕಾರದ ಈ ದುಷ್ಟ ನೀತಿಗೆ ಕಡಿವಾಣ ಹಾಕಲು ಈ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಕೇಂದ್ರ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 30 ಪೈಸೆ ಲೀಟರ್ ಗೆ ಇಳಿಸಿದೆ. ರಾಜ್ಯ ಸರ್ಕಾರ 86 ರು.ಗಳಿಗೆ ಪೆಟ್ರೋಲ್ ನೀಡಬಹುದು. ಆದರೆ, ಪೆಟ್ರೋಲ್, ಡೀಸೆಲ್ ತೆರಿಗೆಯನ್ನು ಏರಿಸಿದೆ ಎಂದು ಹೇಳಿದರು. ವಿಧಾನಸಭೆಯಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವುದು ಅಸಂವಿಧಾನಿಕ. ಇದನ್ನು ಖಂಡಿಸಿ ಏ.2ರಂದು ಬೆಳಿಗ್ಗೆ 9 ಗಂಟೆಗೆ ವಿಧಾನಸಭೆಯ ಮುಂಭಾಗದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದು, 18 ಶಾಸಕರ ಅಮಾನತು ವಾಪಾಸು ಪಡೆಯಲು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಶಿವರಾಜ್, ಹರಿಕೃಷ್ಣ, ವಿನ್ಸೆಂಟ್, ಮಾಲತೇಶ್, ಸುಮಲತಾ ಭೂಪಾಳಂ, ರೇಖಾ ಬೋನ್ಸೆ, ಕೆ.ವಿ.ಅಣ್ಣಪ್ಪ ಚಂದ್ರಶೇಖರ್ ಮತ್ತಿತರರು ಇದ್ದರು.