ಸಾರಾಂಶ
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ಷೇಪ । ತಜ್ಞರಿಂದ ಸಲಹೆ ಭರವಸೆಕನ್ನಡಪ್ರಭ ವಾರ್ತೆ ಬಂಟ್ವಾಳಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಲಘುವಾಹನ ಸಂಚರಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಜತೆಗೆ ಮಾತುಕತೆ ನಡೆಸುವ ಜತೆಗೆ ಸಾಮರ್ಥ್ಯ ಪರಿಶೀಲನೆಗೆ ಎನ್ಐಟಿಕೆಯ ತಜ್ಞರನ್ನು ಸಂಪರ್ಕಿಸುವುದಾಗಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ನಜೀರ್ ಅಹಮ್ಮದ್ ಸದಸ್ಯರಿಗೆ ಭರವಸೆ ನೀಡಿದ್ದಾರೆ.
ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಸೇತುವೆಯ ಸಂಚಾರ ನಿಷೇಧದ ವಿಚಾರ ಚರ್ಚೆಗೆ ಬಂದು ಸದಸ್ಯ ಇದ್ರಿಸ್ ಪಿ.ಜೆ., ಸಮಸ್ಯೆ ಬಗೆಹರಿಸುವ ಬದಲು ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ ಎಂದು ಸಭಾ ತ್ಯಾಗ ಮಾಡಿದರು.ಆ ಬಳಿಕ ಸಭೆಗೆ ಆಗಮಿಸಿದ ಸದಸ್ಯ ಅಬೂಬಕ್ಕರ್ ಸಿದ್ದೀಕ್, ತಹಸೀಲ್ದಾರ್ ಅವರ ಸಂಚಾರ ನಿಷೇಧ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಅನುದಾನ ನೀಡಿ ದುರಸ್ತಿ ಮಾಡುವ ಕಾರ್ಯ ಮಾಡುವುದನ್ನು ಬಿಟ್ಟು, ರಸ್ತೆಯನ್ನು ಬಂದ್ ಮಾಡುವುದರಿಂದ ಪರಿಹಾರ ಸಿಗುತ್ತದೆಯೇ, ಗುರುವಾರ ಸಂಜೆಯ ಒಳಗಾಗಿ ನಿರ್ಬಂಧ ತೆರವಾಗಬೇಕೆಂದು ಆಗ್ರಹಿಸಿದರು.
ಸದಸ್ಯ ಗೋವಿಂದ ಪ್ರಭು, ಸೇತುವೆಯನ್ನು ಸ್ಮಾರಕವನ್ನಾಗಿ ಉಳಿಸುವ ನಿಟ್ಟಿನಲ್ಲಿಯೂ ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.ಬಂಟ್ವಾಳ ಪುರಸಭಾ ವ್ಯಾಪ್ತಿಯ ೬ ಕಡೆಗಳಲ್ಲಿ ತ್ಯಾಜ್ಯ ನೀರು ನೇರವಾಗಿ ನೇತ್ರಾವತಿ ನದಿ ಸೇರುತ್ತಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಂದ ಪತ್ರಕ್ಕೆ ಉತ್ತರ ನೀಡಲಾಗಿದೆ. ಒಳಚರಂಡಿ ನಿರ್ಮಾಣವೇ ಸಮಸ್ಯೆಗೆ ಶಾಶ್ವತ ಪರಿವಾರವಾಗಿದ್ದು, ಕೊಳಚೆ ನೀರು ನದಿ ಸೇರುವಲ್ಲೇ ವ್ಯವಸ್ಥಿತ ಎಸ್ಟಿಪಿ ನಿರ್ಮಿಸುವಂತೆ ಶಾಸಕರು ಸಲಹೆ ನೀಡಿದ್ದಾರೆ ಎಂದು ಮುಖ್ಯಾಧಿಕಾರಿ ತಿಳಿಸಿದರು.ಡೋರ್ ನಂಬರ್ ನೀಡಲು ಸದಸ್ಯರೊಬ್ಬರ ಒತ್ತಡವಿದೆ ಎಂದು ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಹೇಳಿದ ವಿಚಾರ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ ಸಭೆಯಲ್ಲಿ ಶಿಸ್ತಿನಿಂದ ವರ್ತಿಸಲು ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೂಚಿಸಿದರು.
ಬಿ.ಸಿ.ರೋಡಿನ ಬಸ್ ನಿಲ್ದಾಣದ ಪಕ್ಕ ಪಕ್ಕ ವಾಹನ ನಿಂತು ತೊಂದರೆಯಾಗುತ್ತಿರುವುದರಿಂದ ಶೆಲ್ಟರ್ ತೆರವು ಮಾಡುವ ವಿಚಾರ ಚರ್ಚೆಯಾಯಿತು. ಅದನ್ನು ತೆರವು ಮಾಡುವಂತೆ ಉಪಾಧ್ಯಕ್ಷ ಮುನೀಶ್ ಒತ್ತಾಯಿಸಿದರು. ಪುರಸಭೆಯ ಪ್ಲಾಸ್ಟಿಕ್ ತ್ಯಾಜ್ಯ ಸಿಮೆಂಟ್ ಪ್ಯಾಕ್ಟರಿಗೆ ನೀಡುವ ಪ್ರಸ್ತಾಪವನ್ನು ಸಭೆಗೆ ತಿಳಿಸಲಾಯಿತು. ಪುರಸಭಾ ಆಡಳಿತ ಹಾಗೂ ಅಧಿಕಾರಿ ವೃಂದ ಜೈಪುರಕ್ಕೆ ಅಧ್ಯಯನ ಪ್ರವಾಸ ತೆರಳುವ ಬಗ್ಗೆ ಸಭೆ ಅನುಮೋದನೆ ನೀಡಿತು. ಸದಸ್ಯರಾದ ಹರಿಪ್ರಸಾದ್, ಲುಕ್ಮಾನ್ ಬಂಟ್ವಾಳ, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಜನಾರ್ದನ ಚೆಂಡ್ತಿಮಾರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.