ಕನ್ನಡಪ್ರಭ ವಾರ್ತೆ ರಾಮದುರ್ಗ ರಾಮದುರ್ಗ ತಾಲೂಕಿನ ಕೆ.ಜುನಿಪೇಠೆಯ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ದಾಖಲೆ ತಿದ್ದಿರುವ ಘಟನೆಗಳನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿಯ(ಭೀಮ ಮಾರ್ಗ)ದಿಂದ ಮಂಗಳವಾರ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿಲಾಯಿತು.
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ತಾಲೂಕಿನ ಕೆ.ಜುನಿಪೇಠೆಯ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ದಾಖಲೆ ತಿದ್ದಿರುವ ಘಟನೆಗಳನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿಯ(ಭೀಮ ಮಾರ್ಗ)ದಿಂದ ಮಂಗಳವಾರ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿಲಾಯಿತು.ಕೆ.ಜುನಿಪೇಠ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರಗಳು ನಿರಂತರವಾಗಿ ನಡೆಯುತ್ತಿವೆ. ಬಡವರಿಗೆ ಇದರಿಂದ ತೀರ ತೊಂದರೆಯಾಗಿದೆ. ಕೆಲವು ಆಸ್ತಿ ರಜಿಸ್ಟರ್ಗಳಲ್ಲಿ ತಿದ್ದುಪಡಿ ಮಾಡಿ ಒಬ್ಬರ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಬದಲಾಯಿಸಿ ಅನ್ಯಾಯ ಮಾಡಲಾಗಿದೆ ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ರಾಜಕುಮಾರ ಚಲವಾದಿ ಆರೋಪಿಸಿದರು.ದಲಿತರ ಕೇರಿಗಳಲ್ಲಿ ಪಂಚಾಯತಿಯಿಂದ ಸಿಗಬೇಕಿರುವ ಸೌಲಭ್ಯಗಳನ್ನು ಮರೆಮಾಚಲಾಗುತ್ತಿದೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆಗೆ ಅಲ್ಲಿನ ದಲಿತರು ಒತ್ತಾಯಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಪಂಚಾಯತಿಯ 15ನೇ ಹಣಕಾಸು ಯೋಜನೆಯಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ದಲಿತರಿಗೆ ಉದ್ಯೋಗ ನೀಡದೇ ಬೇರೆಯವರ ಹೆಸರಿನಲ್ಲಿ ಎನ್ಎಂಆರ್ ಹಾಕಿ ಬಿಲ್ ಎತ್ತಲಾಗಿದೆ ಎಂದು ಆರೋಪಿಸಿದರು. ಅಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಲಕ್ಷ್ಮೀ ನಾಗನ್ನವರ, ಕೃಷ್ಣ ಸಾಲಿಮನಿ, ದುರಗಪ್ಪ ಮೇಲಿನಮನಿ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಈ ಬಗ್ಗೆ ಸ್ಪಷ್ಟನೆ ನೀಡಿರುವ ಗ್ರಾಪಂ ಅಧಿಕಾರಿಗಳು, ಪಂಚಾಯತಿಯಲ್ಲಿ ದಾಖಲೆ ತಿದ್ದುಪಡಿಯಾಗಿ ಯಾವೊಬ್ಬ ದಲಿತರಿಗೂ ಅನ್ಯಾಯ ಮಾಡಿಲ್ಲ. ಪಂಚಾಯತಿ ವ್ಯಾಪ್ತಿಯ ದಲಿತರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಕಳೆದ ಒಂದೆರಡು ವರ್ಷದಿಂದ ಮಾಹಿತಿ ಹಕ್ಕು ಯೋಜನೆಯಡಿ ಮಾಹಿತಿ ಕೇಳಿದ ವ್ಯಕ್ತಿಗಳೊಂದಿಗೆ ಪಂಚಾಯತಿಯವರು ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಕೆಲವರ ಪ್ರಚೋದನೆಯಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ದಲಿತರ ಆಸ್ತಿ ದಾಖಲೆ ತಿದ್ದುಪಡಿಯಾಗಿದ್ದರೆ ನೊಂದ ದಲಿತರು ನ್ಯಾಯಾಲಯದ ಮೊರೆ ಹೋದರೆ ಪಂಚಾಯತಿ ಅವರಿಗೆ ಬೆಂಬಲಿಸಲಿದೆ. ಅನ್ಯ ಜಾತಿಯ ವ್ಯಕ್ತಿಗಳ ಆಸ್ತಿ ದಾಖಲೆ ತಿದ್ದಿರುವ ಕುರಿತು ಈಗಾಗಲೇ ತಾಲೂಕು ಪಂಚಾಯತಿ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಧರಣಿ ನಡೆಸುತ್ತಿರುವುದು ಸರಿಯಲ್ಲ ಎಂದರು.ಬಳಿಕ ಧರಣಿ ಸ್ಥಳಕ್ಕೆ ತಾಪಂ ಇಒ ಬಸವರಾಜ ಐನಾಪೂರ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.