ಸಾರಾಂಶ
ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಎ.ನಾಗರಾಜು ಮಾಹಿತಿಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಅತಿದೊಡ್ಡ ಹೋಬಳಿ ಕೇಂದ್ರವಾದ ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲವಾದಲ್ಲಿ ಈ ಭಾಗದ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು ಫೆ.10ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಎ.ನಾಗರಾಜು ತಿಳಿಸಿದರು.ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ರೈತ ಸಂಘದ ಚಳುವಳಿಯನ್ನು ಆರಂಭಿಸಿದ ಸೋಮಗುದ್ದು ರಂಗಸ್ವಾಮಿ ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಹೋರಾಟದಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಹೋಬಳಿಗೆ ತಾಲೂಕು ಕೇಂದ್ರದ ಮಾನ್ಯತೆ ನೀಡಬೇಕಿದೆ ಎಂದರು.ಜಿಲ್ಲಾ ಮತ್ತು ತಾಲೂಕು ಆಡಳಿತ ಯಾವುದೇ ಸಂಘಟನೆಗಳ ಪ್ರತಿಭಟನೆಯ ಬಗ್ಗೆ ಚಕಾರವೆತ್ತದೆ ಮೌನವಹಿಸಿರುವುದು ನೋವಿನ ಸಂಗತಿ. ಫೆ.10ರಂದು ಪರಶುರಾಮಪುರ ಗ್ರಾಮದಕೊಲ್ಲಾಪುರದಮ್ಮ ದೇವಸ್ಥಾನದಿಂದ ಬೃಹತ್ ಮೆರವಣಿಗೆಯನ್ನು ಆರಂಭಿಸಿ ನಾಡಕಚೇರಿಗೆ ತಲುಪಿ ಮನವಿಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದರು.
ಅಖಂಡ ಕರ್ನಾಟಕ ರೈತರ ಸಂಘ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದುರಂಗ ಸ್ವಾಮಿ ಮಾತನಾಡಿ, ರೈತ ಸಂಘಟನೆಗಳೂ ಸೇರಿದಂತೆ ಅನೇಕ ಸಂಘಟನೆಗಳು ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ಇಟ್ಟು ಹೋರಾಟ ಮಾಡುತ್ತಾ ಬಂದಿವೆ. ಆದರೆ, ಸರ್ಕಾರದಿಂದ ಈ ಬಗ್ಗೆ ಸೂಕ್ತ ಸ್ಪಂದನೆ ಇಲ್ಲ. ಪರಶುರಾಮಪುರ ಬಹುದೊಡ್ಡ ಹೋಬಳಿ ಕೇಂದ್ರವಾಗಿದ್ದು ಆಂಧ್ರಪ್ರದೇಶದೊಡನೆ ವ್ಯವಹಾರದ ನಂಟು ಹೊಂದಿದೆ. ಆದ್ದರಿಂದ ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದರೆ ಇನ್ನೂ ಹೆಚ್ಚಿನ ಪ್ರಗತಿ ನಿರೀಕ್ಷಿಬಹುದಾಗಿದೆ ಎಂದರು.ಈ ಹಿಂದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ರಘುಮೂರ್ತಿಗೆ ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವ ಬಗ್ಗೆ ಮನವಿ ಸಲ್ಲಿಸಿದಾಗ ಅವರೂ ಸಹ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ವಿಧಾನಸೌಧದ ಅಧಿವೇಶನದಲ್ಲಿ ಚರ್ಚೆ ನಡೆಸುವ ಭರವೆ ನೀಡಿ, ಚರ್ಚಿಸಿದ್ದರು. ಆದರೂ ಸರ್ಕಾರದಿಂದ ಯಾವುದೇ ಸಮದಾನಕರ ಉತ್ತರ ಸಿಕ್ಕಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.