ಸಾರಾಂಶ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿನ ಪುರಾತನ ಸೋಮೇಶ್ವರ ದೇವಸ್ಥಾನದ ರುದ್ರಭೂಮಿ ಆಸ್ತಿಗಳು ವಕ್ಫ್ ಆಸ್ತಿಯಾಗಿರುವುದನ್ನು ಖಂಡಿಸಿ ಸೋಮವಾರ ಕೋಟುಮಚಗಿ, ನಾರಾಯಪೂರ ಗ್ರಾಮದ ಭಕ್ತರು, ಸಾರ್ವಜನಿಕರು, ಬಜರಂಗದಳದ ಕಾರ್ಯಕರ್ತರು ಬಾಗಲಕೋಟೆ-ಗದಗ ರಾಜ್ಯ ಹೆದ್ದಾರಿ ತೆಡೆದು ಪ್ರತಿಭಟನೆ ನಡೆಸಿದರು.ಕೆಲ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ವಾರದ ಮೊದಲ ದಿನವಾದ ಸೋಮವಾರ ನೌಕರಿ ಸೇರಿದಂತೆ ತಮ್ಮ ಅಗತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಮೂಲಕ ರಾಜ್ಯ ಸರ್ಕಾರ ತಕ್ಷಣವೇ ವಕ್ಫ್ ಹೆಸರಿನಲ್ಲಿ ರೈತರ ಮೇಲೆ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಗಂಗಾಧರಯ್ಯ ಹಿರೇಮಠ, ನಿವೃತ್ತ ಸೇನಾ ಅಧಿಕಾರಿ ಕೆ.ಎಸ್. ಪಾಟೀಲ, ಜಗದೀಶ ಮಲ್ಲಣ್ಣವರ, ದೇವಸ್ಥಾನದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಣ್ಣಿಗೇರಿ, ವಿಶ್ವ ಹಿಂದೂಪರಿಷತ್ ನ ಮಂಜುನಾಥ ಹೆಗಡೆ, ರಘುನಾಥ ಕೊಂಡಿ, ಕಾಶಪ್ಪ ನೀರಲಗಿ, ದೇವಪ್ಪ ಬಡಿಗೇರ, ಫಕೀರಯ್ಯ ಹಿರೇಮಠ, ಮಲ್ಲಿಕಾರ್ಜುನ ರಮಾಣಿ, ಮುತ್ತು ಸಿಂಗಟಾಲಕೇರಿ, ಫಾಲಾಕ್ಷಯ್ಯ ಬಳಿಗೇರಮಠ, ಗ್ರಾಪಂ ಸದಸ್ಯ ಅಕ್ಷಯ ಮುತ್ತಾಳ, ಶರಣಪ್ಪ ಮ್ಯಾಗೇರಿ, ರವಿ ಗೋದಿ, ಮಹಾದೇವಪ್ಪ ಬ್ಯಾಹಟ್ಟಿ, ಫಕೀರಗೌಡ ಸಂಕನಗೌಡ್ರ, ವಿದ್ಯಾಧರ ರಮಾಣಿ, ಮಲ್ಲಪ್ಪ ರಮಾಣಿ, ಚಂದ್ರಯ್ಯ ಭೂಸನೂರಮಠ, ಯುವರಾಜ ಹಿಂದಿನಮನಿ, ವೀರೇಶ ಜಾಡರ ಸೇರಿದಂತೆ ಗ್ರಾಮದ ಯುವಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕನ್ನಡಪ್ರಭ ಪ್ರಕಟಿಸಿದ ವರದಿ ಕುರಿತು ಪ್ರಸ್ತಾಪಿಸಿ ಹೋರಾಟಗಾರರು ಮೆಚ್ಚುಗೆ ವ್ಯಕ್ತ ಪಡಿಸಿದರು.