ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕಿನ ಅಧಿಕೃತ ದಸ್ತು ಬರಹಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ದಿಂದ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಾರಿಗೆ ತರುತ್ತಿರುವ ಕಾಗದರಹಿತ ವ್ಯವಸ್ಥೆ, ಆನ್ ಲೈನ್ ನೋಂದಣಿಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಗೆ ಬುಧವಾರ ಸಲ್ಲಿಸಿದರು.ತಹಸೀಲ್ದಾರ್ ಕಚೇರಿ ಮುಂಭಾಗ ಕೆಲಹೊತ್ತು ನಡೆದ ಪ್ರತಿಭಟನೆ ಉದ್ದೇಶಿಸಿ ಅಧಿಕೃತ ದಸ್ತು ಬರಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸುರೇಶ ಹಾರಿವಾಳ, ಕಾರ್ಯದರ್ಶಿ ಪಾರ್ಶ್ವನಾಥ ಹೊಸಮನಿ ಮಾತನಾಡಿ, ಅನಾದಿಕಾಲದಿಂದಲೂ ರೈತರು, ಸಾರ್ವಜನಿಕರು, ವ್ಯಾಪಾರಸ್ಥರು ತಮ್ಮ ಆಸ್ತಿಗಳ ಖರೀದಿ ಪತ್ರ, ವಿಭಾಗ ಪತ್ರ, ಕುಟುಂಬ ವ್ಯವಸ್ಥೆ ಪತ್ರ, ದತ್ತಕ ಪತ್ರ, ಲಕ್ಷಿಸ ಪತ್ರ, ಮ್ಯುತ್ಯುಪತ್ರ ಇನ್ನಿತರೆ ಪತ್ರಗಳ ನೋಂದಣಿಗಾಗಿ ಉಪನೋಂದಣಿ ಕಛೇರಿಯಲ್ಲಿ ಪತ್ರ ನೋಂದಾಯಿಸಿ ಸ್ಥಾನ ಮಾಡಿದ ಪತ್ರಗಳನ್ನು ಭೌತಿಕವಾಗಿ ಪಡೆದುಕೊಂಡು ತಮ್ಮ ಭದ್ರತೆಗಾಗಿ ಇಟ್ಟುಕೊಳ್ಳುತ್ತಿದ್ದರು. ಈಗ ಕಾಗದ ರಹಿತ (ಪೇಪರಲೆಸ್) ಮಾಡುವುದರಿಂದ ಲಕ್ಷಾಂತರ ಜನ ಡಿ.ಜಿ.ಲಾಕರ್, ಇ-ಮೇಲ್ ಹೊಂದದವರು ಗೌಪ್ಯವಾಗಿ ತಮ್ಮ ದಾಖಲೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇತರರ ಸಹಾಯ ಪಡೆಯಲು ಹೋದರೆ ತಮ್ಮ ಆಸ್ತಿ ಗೌಪ್ಯತೆ ಹೊರಹೋಗುವ ಸಾಧ್ಯತೆ ಇರುವುದರಿಂದ ಇಂತಹವರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಕೂಡಲೇ ಜಾರಿಗೊಳಿಸಿ ಸಾರ್ವಜನಿಕರಿಗೆ, ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಆಗ್ರಹಿಸಲಾಗಿದೆ. ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಎಚ್.ಎಸ್.ಅರಕೇರಿ ಸ್ವೀಕರಿಸಿದರು.
ದಸ್ತು ಬರಹಗಾರರ ಪ್ರತಿಭಟನೆಗೆ ಬೆಂಬಲಿಸಿ ಕರವೇ ಮುಖಂಡ ಅಶೋಕ ಹಾರಿವಾಳ, ಕಾಂಗ್ರೆಸ್ ಯುವ ಧುರೀಣ ಸಂಗಮೇಶ ಓಲೇಕಾರ, ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು.ಟ್ರಸ್ಟ್ ನ ದೇವನಗೌಡ ಬಿರಾದಾರ, ಉಮೇಶ ಹಾರಿವಾಳ, ಚಿಂದಾನಂದ ಅಂಗಡಿ, ಸಂಗನಗೌಡ ಪಾಟೀಲ, ರಾಜಕುಮಾರ ಅಳ್ಳೊಳ್ಳಿ, ಶ್ರೀಶೈಲ ಬುಯ್ಯಾರ, ಶರಣು ಚೌರಿ, ಸಿಬ್ಬಂದಿ ಶಿವಾನಂದ ದಿಂಡವಾರ, ಸಂತೋಷ ಡೋಣೂರ, ಸವಿತಾ ಹಿರೇಕುರಬರ, ಪರಶು ಗೋಡೆಕಾರ, ಬೀರಪ್ಪ ಹಿರೇಕುರಬರ ಇತರಿದ್ದರು.
