ಕೊಪ್ಪಳ: ಗಣತಿ ಪಟ್ಟಿಯಾಚೆ ಇರುವ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಕೂಡಲೇ ಗಣತಿ ಪಟ್ಟಿಗೆ ಸೇರಿಸಿ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಬಳಿ ಪ್ರತಿಭಟನೆ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ದೇವದಾಸಿ ಪದ್ಧತಿ ನಿರ್ಮೂಲನೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇಧ ಮಸೂದೆ- 2025 ಅಂಗೀಕರಿಸಿರುವುದನ್ನು ಮತ್ತು ಎಲ್ಲ ದೇವದಾಸಿ ಮಹಿಳೆಯರ ಹಾಗೂ ಅವರ ಮೂರುತಲೆ ಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ. ಈಗ ಕಾರ್ಯ ನಿರ್ವಹಿಸುವ ಗಣತಿಯಲ್ಲಿ ಈಗಾಗಲೆ ಗಣತಿಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗೂ ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ ಕ್ರಮ ವಹಿಸಿರುವುದು ಸರಿ ಇದೆ. ಆದರೆ, ಇದುವರೆಗೆ ಗಣತಿಯಲ್ಲಿ ಸೇರಿಸಲಾಗದಿರುವ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬದ ಸಾವಿರಾರು ಸದಸ್ಯರು ಯಾವುದೇ ಕನಿಷ್ಠ ಸೌಲಭ್ಯ ಪಡೆಯಲಾಗುತ್ತಿಲ್ಲ. ಗಣತಿ ಪಟ್ಡಿಯಲ್ಲಿಲ್ಲವೆಂಬ ಕಾರಣಕ್ಕೆ ಅವರಿಗೆ ಅವರ ಮಕ್ಕಳಿಗೆ ದೇವದಾಸಿ ಕುಟುಂಬದ ಸರ್ಟಿಫಿಕೇಟ್‍ ಕೂಡಾ ಸಿಕ್ಕಿರುವುದಿಲ್ಲ. ಇದರಿಂದ ಸಾವಿರಾರು ಮಕ್ಕಳು ಅವರ ವಿದ್ಯಾಭ್ಯಾಸದ ಹಾಗೂ ಉದ್ಯೋಗದ ಸೌಲಭ್ಯ ವಂಚಿತರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈಗ ನಡೆಯುತ್ತಿರುವ ಗಣತಿಗೆ, ಗಣತಿ ಪಟ್ಟಿಯಿಂದಾಚೆ ಇರುವ ಮಹಿಳೆಯರನ್ನು ಮತ್ತೊಮ್ಮೆ ಹೊರಗಿಡುವುದು ಕಂಡು ಬಂದಿದೆ. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ -1982 ರಲ್ಲಿ ಅಂಗೀಕರಿಸಿ ಜಾರಿಯಾಗಿರುವುದರಿಂದ ಆನಂತರ ಹುಟ್ಟಿದವರನ್ನು ಗಣತಿ ಸೇರಿಸಲಾಗದೆಂದು ಹಳೆಯ ಕಾನೂನನ್ನು ತೋರಿಸಿ ಗಣತಿ ಪಟ್ಟಿಯಲ್ಲಿಲ್ಲದ ಮಹಿಳೆಯರ ಅರ್ಜಿಗಳನ್ನು ಪಡೆಯುತ್ತಿಲ್ಲ. ಗಣತಿ ಪಟ್ಡಿಯಾಚೆ ಇರುವ ಎಲ್ಲ ದೇವದಾಸಿ ಮಹಿಳೆಯರನ್ನು ಅವರ ಮೂರು ತಲೆಮಾರು ಕುಟುಂಬದ ಸದಸ್ಯರನ್ನು ಅತಿ ಶೀಘ್ರವಾಗಿ ಗಣತಿ ಪಟ್ಟಿಗೆ ಸೇರಿಸಲು ವಿಶೇಷ ಕ್ರಮ ವಹಿಸಿ 2026 ರ ಬಜೆಟ್ ನಲ್ಲಿ ಈ ಎಲ್ಲರಿಗೂ ಎಲ್ಲ ದೇವದಾಸಿ ಮಹಿಳೆಯರಿಗೂ ₹5000 ಮಾಸಾಸನ ಹೆಚ್ಚಿಗೆ ಮಾಡಬೇಕು ಮತ್ತು ದೇವದಾಸಿ ಮಹಿಳೆಯರ ಕುಟುಂಬಕ್ಕೆ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷೆ ಜಿ. ಹುಲಿಗೆಮ್ಮ,ಮಂಜುನಾಥ ಡಗ್ಗಿ, ಸುಂಕಪ್ಪ, ಭಾಗಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.