ಸಾರಾಂಶ
-ಹತ್ತಿಗೂಡೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಿವಾಸಿಗಳ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಶಹಾಪುರ
ಹತ್ತಿಗೂಡೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ಜನರಿಗೆ ಕುಡಿವ ನೀರಿಲ್ಲದೆ ತೊಂದರೆಯಾಗಿದೆ. ಕೂಡಲೇ ಕುಡಿವ ನೀರು ಒದಗಿಸಿ, ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾ.ಪಂ ಕಚೇರಿ ಎದುರು ಮಹಿಳೆಯರು ಕಾಲಿ ಕೊಡಗಳು ಹಿಡಿದು ಪ್ರತಿಭಟನೆ ನಡೆಸಿದರು.ಸರ್ಕಾರ ಕುಡಿವ ನೀರನ್ನು ಸಮಮರ್ಪಕವಾಗಿ ಒದಗಿಸಲು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿದ್ದರೂ ಗ್ರಾ.ಪಂ. ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಐದಾರು ತಿಂಗಳಿನಿಂದ ಕುಡಿಯಲು ನೀರಿಲ್ಲ. ದಿನವೂ ಕೆಲಸ ಕಾರ್ಯಗಳನ್ನು ಬಿಟ್ಟು ನೀರು ಸಂಗ್ರಹಿಸುವುದೇ ನರಕಯಾತನೆಯಾಗಿದೆ. ನಮ್ಮ ಗೋಳು ಕೇಳದಂತಾಗಿದೆ ಎಂದು ಗ್ರಾಮದ ಮಹಿಳೆ ದೇವಕ್ಕೆಮ್ಮ ಬಡಿಗೇರ್ ಅಳಲು ತೋಡಿಕೊಂಡರು.ದಲಿತ ಮುಖಂಡ ಶರಣು ರೆಡ್ಡಿ ಹತ್ತಿಗೂಡೂರ್ ಮಾತನಾಡಿ, ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹಾರ ಮಾಡಿ ಕೊಡಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ಚುನಾಯಿತ ಸದಸ್ಯರ ಮಾತಿಗೆ ಪಿಡಿಒ ಬೆಲೆ ಕೊಡುತ್ತಿಲ್ಲ. ಅನೇಕ ದಿನಗಳಿಂದ ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಪ್ರಾರಂಭದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದರೆ ಸುಡು ಬೇಸಿಗೆಯಲ್ಲಿ ಪರಸ್ಥಿತಿ ಕೇಳುವರು ಯಾರು. ಧರಣಿ ಕುಳಿತರೆ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಬಂದು ಸಮಜಾಯಿಸಿ ಧರಣಿ ವಾಪಸ್ ಪಡೆಯುವಂತೆ ಮಾಡಿ, ಮನವಿ ಪತ್ರ ತೆಗೆದುಕೊಂಡು ಹೋಗುತ್ತಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮುಖಂಡರು, ಗ್ರಾಮದ ಜನತೆ ಹಾಗೂ ಬಡಾವಣೆಯ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
-----ಫೋಟೊ: ಶಹಾಪುರ ತಾಲೂಕಿನ ಹತ್ತಿಗೂಡೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಜನರಿಗೆ ಕುಡಿವ ನೀರು ಒದಗಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಎದುರು ನಿವಾಸಿಗಳು ಕಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
19ವೈಡಿಆರ್10