ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸುತ್ತಿದೆ ಎಂದು ಆರೋಪಿಸಿ ರೈತರು ಕಾವೇರಿ ನದಿಗಿಳಿದು ಭಾನುವಾರ ಪ್ರತಿಭಟನೆ ನಡೆಸಿದರು.ಭೂಮಿತಾಯಿ ಹೋರಾಟ ಸಮಿತಿ, ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದ 50ಕ್ಕೂ ಹೆಚ್ಚು ರೈತರು, ರಾಜ್ಯ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ಇಲ್ಲಿನ ರೈತರ ಬದುಕಿಗೆ ಚಪ್ಪಡಿ ಕಲ್ಲು ಎಳೆಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೆಳೆಗಳಿಗೆ, ಜನ- ಜಾನುವಾರುಗಳಿಗೆ ಕುಡಿಯಲು ಅಣೆಕಟ್ಟೆಯಲ್ಲಿ ನೀರಿಲ್ಲ. ಅಂತರ್ಜಲ ತೀವ್ರ ಪ್ರಮಾಣದಲ್ಲಿ ಕುಸಿದು ಬೋರ್ಗಳಲ್ಲಿ ನೀರು ಬತ್ತಿ ಹೋಗಿ ಬರಗಾಲದ ಪರಿಸ್ಥಿತಿ ನಿರ್ಮಾಣಗೊಂಡು ರೈತರು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದರು.ರೈತರ ಬೆಳೆಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸದ ಸರ್ಕಾರ, ತಮಿಳುನಾಡಿಗೆ ನೀರು ಹರಿಸಿ ರೈತ ವಿರೋಧಿ ಎನಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರುಗಳಿಗೆ ರಾಜ್ಯ, ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಚಣವೇ ನಿಲ್ಲಿಸಬೇಕು. ಬೆಳೆದು ನಿಂತಿರುವ ಬೆಳೆಗಳನ್ಬು ರಕ್ಷಿಸಿಕೊಳ್ಳಲು ಹಾಗೂ ಜನ- ಜಾನುವಾರುಗಳಿಗೆ ಕುಡಿಯಲು ತಕ್ಷಣವೇ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಕೃಷ್ಣ, ಪುಟ್ಟರಾಜು, ಶಿವಣ್ಣ, ಪಾಲಹಳ್ಳಿ ರಾಮಚಂದ್ರು, ಪಟೇಲ, ದಸಗುಪ್ಪೆ ಸುರೇಶ, ಮಹೇಶ, ಅಚ್ಚಪ್ಪನ ಕೋಪಲು ರವಿ ಲಕ್ಷ್ಮಣ, ಕೃಷ್ಣ, ಕಡತನಾಳು ಮಹೇಶ, ಚಾಮರಾಜಣ್ಣ, ಬಾಬು, ದೊಡ್ಡ ಪಾಳ್ಯ ಜಗದೀಶ್, ಜಯರಾಮು. ಚಟ್ಟನಹಳ್ಳಿ ದರ್ಶನ್ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಹಾಜರಿದ್ದರು.