ಟನ್ ಕಬ್ಬಿಗೆ ₹ 3500 ದರ ನಿಗದಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

| Published : Nov 07 2025, 02:30 AM IST

ಸಾರಾಂಶ

ಪ್ರತಿ ಟನ್ ಕಬ್ಬಿಗೆ ₹ 3500 ದರ ನಿಗದಿ, ಕಬ್ಬಿನ ಇಳುವರಿಯಲ್ಲಿ ಆಗುತ್ತಿರುವ ಮೋಸ ತಡೆಗಟ್ಟುವುದು ಹಾಗೂ ಸರ್ಕಾರಿ ತೂಕದ ಯಂತ್ರಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ: ಪ್ರತಿ ಟನ್ ಕಬ್ಬಿಗೆ ₹ 3500 ದರ ನಿಗದಿ, ಕಬ್ಬಿನ ಇಳುವರಿಯಲ್ಲಿ ಆಗುತ್ತಿರುವ ಮೋಸ ತಡೆಗಟ್ಟುವುದು ಹಾಗೂ ಸರ್ಕಾರಿ ತೂಕದ ಯಂತ್ರಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ಧರಣಿ ಆರಂಭಿಸಿದ ಜಿಲ್ಲೆಯ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರ ಮತ್ತು ಸಕ್ಕರೆ ಖಾತೆ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಪ್ರತಿಭಟನೆಗೆ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಗಳು ಉತ್ತರ ಕರ್ನಾಟಕ ವ್ಯಾಪ್ತಿಗೆ ಬರುತ್ತವೆ. ಕಬ್ಬಿನ ರಿಕವರಿ 1986ರಿಂದ 2006ರ ವರೆಗೆ ಶೇ.10.5ರಿಂದ 11.5 ಇದ್ದದ್ದು ಈಗ 9.42 ತೋರಿಸುತ್ತಿದ್ದಾರೆ. ರಿಕವರಿ ನೆಪದಲ್ಲಿ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಪಕ್ಕದ ಹಳಿಯಾಳದಲ್ಲಿ ಕಬ್ಬು ಕಟಾವು, ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಿ ಪ್ರತಿಟನ್ ಕಬ್ಬಿಗೆ ₹ 3200 ದರ ಕೊಡಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಜಿಲ್ಲೆಯ ಕಾರ್ಖಾನೆಯವರೇ ಕಲಘಟಗಿ ಕಬ್ಬು ಬೆಳೆಗಾರರಿಗೆ ₹ 3200 ದರ ಕೊಡುತ್ತಿದ್ದಾರೆ. ಆದರೆ ಹಾವೇರಿ ಜಿಲ್ಲೆ ರೈತರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾವೇರಿ ಜಿಲ್ಲೆಯ ಉಸ್ತುವಾರಿಯಾಗಿದ್ದು, ಇದುವರೆಗೂ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿಲ್ಲ. ಕನಿಷ್ಠಪಕ್ಷ ಒಂದು ಸಭೆಯನ್ನು ಆಯೋಜನೆ ಮಾಡಿಲ್ಲ. ಸಚಿವ ಶಿವಾನಂದ ಪಾಟೀಲ ಕಬ್ಬು ಬೆಳೆಗಾರರ ವಿರೋಧಿಯಾಗಿದ್ದಾರೆಂದು ಕಿಡಿಕಾರಿದ ಅವರು, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಭರಿಸಿ ಪ್ರತಿಟನ್ ಕಬ್ಬಿಗೆ ₹ 3500 ದರವನ್ನು ನಿಗದಿ ಮಾಡಬೇಕು. ಕಾರ್ಖಾನೆಗಳಲ್ಲಿ ರಿಕವರಿ ಲ್ಯಾಬ್ ಹಾಗೂ ಸರ್ಕಾರಿ ಕಬ್ಬಿನ ತೂಕದ ಯಂತ್ರವನ್ನು ಅಳವಡಿಸಬೇಕು. ರೈತರಿಗೆ ಅನ್ಯಾಯವಾಗದಂತೆ ದರವನ್ನು ಕೊಡಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕಬ್ಬು ಬೆಳೆಗಾರರ ಸಂಘ ಹಾಗೂ ರೈತರು ಒಗ್ಗೂಡಿಕೊಂಡು ಬಹಳ ದೊಡ್ಡ ಪ್ರಮಾಣದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರೈತರು ಬಹಳಷ್ಟು ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಕಾರ್ಖಾನೆಯ ಮಾಲೀಕರು ಮತ್ತು ಜನಪ್ರತಿನಿಗಳು ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಸರ್ಕಾರ ಕೂಡ ರೈತರ ಬೇಡಿಕೆ ಮತ್ತು ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಒಂದುವೇಳೆ ರೈತರಿಗೆ ಏನಾದರೂ ತೊಂದರೆ ಮಾಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ರೈತರು ತಮ್ಮ ನೋವುಗಳನ್ನು ಬದಿಗೊತ್ತಿ ಜನರ ಒಳಿತಿಗಾಗಿ ದುಡಿಯುತ್ತಾರೆ. ಅಂತಹವರ ಬೇಡಿಕೆಗೆ ನ್ಯಾಯಯುತ ದರ ನೀಡುವ ಮೂಲಕ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಅಕ್ಕಿಆಲೂರಿನ ಚನ್ನವೀರೇಶ್ವರ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿ, ತೆಲಂಗಾಣದ ವಿರೂಪಾಕ್ಷ ದೇವರು, ಹೊಳಲಿನ ಮಲ್ಲಿಕಾರ್ಜುನ ಸ್ವಾಮೀಜಿ, ರೈತ ಮುಖಂಡರಾದ ಶಿವಬಸಪ್ಪ ಗೋವಿ, ರಾಜಶೇಖರ ಹಲಸೂರ, ಸಂಗಪ್ಪ ಕೂಡಲ, ನಾಗರಾಜ ಸೂರಗೊಂಡ, ಬಸಲಿಂಗಪ್ಪ ನರಗುಂದ, ರುದ್ರಪ್ಪ ಸಂಕಣ್ಣನವರ, ಫಕ್ಕೀರಪ್ಪ ಹುಲ್ಲಾಳ, ಮುತ್ತಪ್ಪ ಗುಡಗೇರಿ, ಈರನಗೌಡ ಪಾಟೀಲ, ರವಿಕುಮಾರ ಸವಣೂರ, ವಿರೂಪಾಕ್ಷಪ್ಪ ಕಲಕೋಟಿ, ಕೆ.ಟಿ ಅರಳಿ, ಶಿವಕುಮಾರಗೌಡ ಪಾಟೀಲ, ಕೋಟ್ರೇಶ ಕಂಟೆಣ್ಣನವರ, ಕಿರಣ ಗಾಣಗೇರ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರ, ಹನುಮಂತಪ್ಪ ಕಬ್ಬಾರ, ಸಿದ್ದಲಿಂಗಪ್ಪ ಕಮಡೊಳ್ಳಿ, ರಾಜು ತರ್ಲಘಟ್ಟ, ಸೋಮಣ್ಣ ದೊಡ್ಡಮನಿ, ಶಿವಯೋಗಿ ಹೊಸಗೌಡ್ರ ಸೇರಿದಂತೆ ಅನೇಕರು ಹಾಜರಿದ್ದರು.ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಕಬ್ಬಿನ ಇಳುವರಿಯನ್ನು ರೈತರ ಸಮ್ಮುಖದಲ್ಲೇ ಮಾಡುವಂತೆ ಕಾರ್ಖಾನೆಯವರಿಗೆ ತಿಳಿಸುತ್ತೇವೆ. ಇಲ್ಲವಾದರೆ ನೀವೇ ₹ 500 ಬೆಲೆಬಾಳುವ ರಿಪ್ಲೇಕ್ಟಿವ್ ಮೀಟರ್ ತೆಗೆದುಕೊಂಡು ಬಂದರೆ ಅಲ್ಲಿಯೇ ಇಳುವರಿ ಪರೀಕ್ಷೆ ನಡೆಸಲಾಗುವುದು. ಜತೆಗೆ ಕಟಾವು ಮಾಡುವ ಗ್ಯಾಂಗ್‌ನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ ಎಂದರು. ಆದಾಗ್ಯೂ ಸರ್ಕಾರದ ಮಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಬೆಳಗಾವಿ, ಬಾಗಲಕೋಟೆ ರೈತರ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ದರಾಗಿ, ಅದೇ ದರವನ್ನು ಜಿಲ್ಲೆಯ ರೈತರಿಗೂ ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.