ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

| Published : Dec 22 2024, 01:31 AM IST

ಸಾರಾಂಶ

ಹನೂರು ತಾಲೂಕಿನ ರಾಮಪುರದಲ್ಲಿ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ರಾಮಾಪುರದಲ್ಲಿ ಪ್ರತಿಭಟನೆ ನಡೆಸಿದರು.

ರಾಮಾಪುದ ಸಂತೇಮಾಳ‌ ಬಳಿ ಜಮಾಯಿಸಿದ್ದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು. ಅಂಬೇಡ್ಕ‌ರ್ ಅವಮಾನಿಸಿದವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಬಾರದು. ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ, ಸಮಾನತೆ, ನ್ಯಾಯದ ಪರವಾಗಿ ಅಂಬೇಡ್ಕ‌ರ್ ಅಡಿಪಾಯ ಹಾಕಿದ ಮಹಾನ್ ನಾಯಕ. ಅವರ ಹೆಸರು ಮಾತ್ರವಲ್ಲ, ಅವರ ಆದರ್ಶಗಳು, ಕೃತಿಗಳು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿವೆ. ಅಮಿತ್ ಶಾ ನೀಡಿರುವ ಹೇಳಿಕೆ ಗಮನಿಸಿದರೆ ದೇಶದ ಸಂವಿಧಾನದ ಅಡಿಪಾಯವನ್ನೇ ದ್ವೇಷಿಸಿ, ಅಲುಗಾಡಿಸುವಂತಿದೆ. ಸಮಾಜದ ಕೆಳ ವರ್ಗಗಳ ಜನರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಪ್ರತಿಭಟನಾಕಾರರು ಇದೇ ವೇಳೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ಅದ್ಯಕ್ಷ ಗಣೇಶ್ ಕಲಾ‌ಸಂಘದ ಅದ್ಯಕ್ಷ ಸುಂದರೇಶ್ ರಾಮಾಪುರ ಗ್ರಾಪಂ ಸದಸ್ಯ ಮುತ್ತುಮಾದ, ಆಟೋ ಸಂಘದ ಅಧ್ಯಕ್ಷ ಕಾರ್ತಿಕ್, ಕಲಾ ಸಂಘ ಅಧ್ಯಕ್ಷ ಸುಂದರೇಶ್ ಚಿರಜೀವಿ ಸೇರಿದಂತೆ ಹಲವರು ಹಾಜರಿದ್ದರು.