ಗ್ರಾಮಸ್ಥರಿಂದ ಪ್ರತಿಭಟನೆ : ಚುನಾವಣಾ ಬಹಿಷ್ಕಾರ

| Published : Mar 21 2024, 01:05 AM IST

ಸಾರಾಂಶ

ತಾಲೂಕಿನ ಮಡಬೂರು ಗ್ರಾಮದ ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ ಹಾಗೂ ಹೊಸಮನೆ ಗ್ರಾಮಸ್ಥರು ಬುಧವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸಂಪರ್ಕ ರಸ್ತೆ ರಿಪೇರಿ ಮಾಡಿಸಿಲ್ಲ, ಕಾಲು ಸೇತುವೆ ದುರಸ್ತಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು.

ರಸ್ತೆ ಅವ್ಯವಸ್ಥೆ । ಕಾಲು ಸೇತುವೆ ಕೊಚ್ಚಿ ಹೋಗಿ 3 ವರ್ಷವಾದರೂ ದುರಸ್ತಿ ಇಲ್ಲ: ಗ್ರಾಮಸ್ಥರ ಆರೋಪ, ಆಕ್ರೋಶ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮಡಬೂರು ಗ್ರಾಮದ ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ ಹಾಗೂ ಹೊಸಮನೆ ಗ್ರಾಮಸ್ಥರು ಬುಧವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸಂಪರ್ಕ ರಸ್ತೆ ರಿಪೇರಿ ಮಾಡಿಸಿಲ್ಲ, ಕಾಲು ಸೇತುವೆ ದುರಸ್ತಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು.

ಮಡಬೂರು ಗ್ರಾಮಸ್ಥರ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಕಾರಣ ಕುಪ್ಪೂರು, ಬಟ್ಟೆ ಕೊಡಿಗೆ, ಕೇಸಕ್ಕಿ, ಹೊಸಮನೆಯಲ್ಲಿ 90 ಮನೆಗಳಿವೆ. ಮುಖ್ಯರಸ್ತೆಗೆ ಬರಲು ಇರುವ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ತುಂಬಾ ಹೊಂಡ, ಗುಂಡಿಗಳಿದ್ದು ಓಡಾಟ ಮಾಡುವುದೇ ಅಸಾಧ್ಯವಾಗಿದೆ. ಕುಪ್ಪೂರು ಹಾಗೂ ಬಟ್ಟೆ ಕೊಡಿಗೆ, ಕೇಸಕ್ಕಿ, ಹೊಸಮನೆ ಗ್ರಾಮಗಳಿಂದ ಮಡಬೂರು ಬಸ್ಸು ನಿಲ್ದಾಣಕ್ಕೆ ಸಂಪರ್ಕ ಮಾಡಲು ಇದ್ದ ಕವಲದ ಹಳ್ಳ ಕಾಲು ಸೇತುವೆ ಕಳೆದ 3 ವರ್ಷದ ಹಿಂದೆ ಭಾರೀ ಮಳೆಯಿಂದ ಕೊಚ್ಚಿಹೋಗಿದೆ. ಇದರಿಂದ ಹತ್ತಿರದಲ್ಲಿದ್ದ ಮಡಬೂರು ಬಸ್ಸು ನಿಲ್ದಾಣಕ್ಕೆ ಹೋಗುವ ರಸ್ತೆಗೆ ವಾಹನದಲ್ಲಿ ಹೋಗಲು ಸಾದ್ಯವಿಲ್ಲವಾಗಿದೆ. ಈ ಕಾಲು ಸೇತುವೆ ಕೊಚ್ಚಿ ಹೋದಾಗ ಎಲ್ಲಾ ಜನಪ್ರತಿನಿಧಿಗಳು ಬೇಟಿ ನೀಡಿ ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ, ಸೇತುವೆ ರಿಪೇರಿಯಾಗಿಲ್ಲ.ಅಂಬ್ಯೂಲೆನ್ಸ್‌ ಹಾಗೂ ದೊಡ್ಡ ವಾಹನ ಹೋಗುವ ರೀತಿ ಹೊಡ್ಡ ಸೇತುವೆ ಮಾಡಿಸಿಕೊಡಿ ಎಂದು ಈಗಾಗಲೇ ಎಲ್ಲಾ ಜನಪ್ರತಿನಿಧಿಗಳಿಗೂ ಅರ್ಜಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು. ಅಲ್ಲದೆ ಶಂಕರಪುರ-ಮುಡಬ ರಸ್ತೆಗೆ ಕುಪ್ಪೂರು, ಬಟ್ಟೆಕೊಡಿಗೆಯಿಂದ ಹೋಗಬೇಕಾದರೆ 3 ರಿಂದ 4 ಕಿ.ಮೀ.ದೂರ ಇದ್ದು ಈ ರಸ್ತೆಯು ಸಹ ಸಂಪೂರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ಗುಡ್ಡಿಗಳೇ ಹೆಚ್ಚಾಗಿದ್ದು ಮಳೆಗಾಲದಲ್ಲಿ ನೀರು ತುಂಬಿ ಕೊಳ್ಳುತ್ತದೆ. ಇದರಿಂದ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋದವರು ಬರುತ್ತಿಲ್ಲ. ಶಾಲಾ ಮಕ್ಕಳು ಶಾಲೆಗೆ ಹೋಗಲು ಕಷ್ಟ.ಈ ಎಲ್ಲಾ ತೊಂದರೆಗಳನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ರಸ್ತೆ ಹಾಗೂ ಹೊಸ ಸೇತುವೆ ಮಾಡಿಕೊಡದೆ ಇದ್ದರೆ 2024 ರ ಲೋಕ ಸಭಾ ಚುನಾವಣೆ ಬಹಿಷ್ಚರಿಸುತ್ತೇವೆ ಎಂದು ಘೋಷಿಸಿದ್ದಾರೆ. ಪ್ರತಿಭಟನೆಯಲ್ಲಿ ಈ ಗ್ರಾಮದ ಮಾಜಿ ಯೋಧ ಮೋಹನಗೌಡರು, ಗ್ರಾಮಸ್ಥರಾದ ಬಟ್ಟೆ ಕೊಡಿಗೆ ಮಂಜುನಾಥ್‌, ಹರೀಶ್‌,ಅನಿಲ್‌, ಅವಿನಾಶ್‌,ಕೇಶಕ್ಕಿ ಹರೀಶ್‌, ಮನು,ನಂದೀಪ್‌,ಬಟ್ಟೆ ಕೊಡಿಗೆ ದೇವೇಂದ್ರ ನಾಯ್ಕ,ದಿನೇಶ್‌, ಸುಧಾಕರ್‌, ಕುಪ್ಪೂರು ಮುರ್ಗೇಶ್‌,ರಾಘವೇಂದ್ರ,ಬಟ್ಟೆಕೊಡಿಗೆ ಕನ್ನಮ್ಮ, ಸುಗಂಧ, ಲೀಲಾವತಿ, ಶೋಭ, ನಾಗನಂದ, ಪ್ರಜ್ವಲ್‌, ದೀಪಕ್‌, ಗಣೇಶ, ಲಾವಣ್ಯರಾಜ್‌, ಸುನೀಲ್‌, ರಮೇಶ್‌, ವಿಜಯ ಮತ್ತಿತರರು ಪಾಲ್ಗೊಂಡಿದ್ದರು.